ಭದ್ರತೆಯಷ್ಟೇ ನಮ್ಮ ಕೆಲಸ
Team Udayavani, Nov 24, 2018, 6:00 AM IST
ತಿರುವನಂತಪುರ/ಕೊಚ್ಚಿ: “ಶಬರಿಮಲೆ ದೇಗುಲಕ್ಕೆ ಮಹಿಳೆಯರನ್ನು ಕರೆದೊಯ್ಯುವ ಗುತ್ತಿಗೆ ಪಡೆದುಕೊಂಡಿಲ್ಲ.’ ಹೀಗೆಂದು ಹೇಳಿದ್ದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಮಹಿಳೆಯರು ದೇಗುಲಕ್ಕೆ ಹೋಗುವದಿದ್ದರೆ ಹೋಗಬಹುದು ಎಂದಿದ್ದಾರೆ. ತಿರುವನಂತಪುರದಲ್ಲಿ ಶುಕ್ರವಾರ ಕಾರ್ಯ ಕ್ರಮವೊಂದರಲ್ಲಿ ಮಾತನಾಡಿದ ವೇಳೆ ಸುಪ್ರೀಂಕೋರ್ಟ್ ತೀರ್ಪಿನ ಹೊರತಾ ಗಿಯೂ ಏಕೆ ಮಹಿಳೆಯರು ದೇಗುಲ ಪ್ರವೇಶ ಮಾಡಲಿಲ್ಲ ಎಂಬ ಪ್ರಶ್ನೆ ಕೇಳಿದಾಗ ಸಿಎಂ ಹೇಳಿದ್ದ ಉತ್ತರವಿದು. ದೇಗುಲ ಪ್ರವೇಶ ಮಾಡುವವರಿಗೆ ಭದ್ರತೆ ಕೊಡುವ ಅವಕಾಶ ಮಾತ್ರ ಸರಕಾರದ ಮುಂದಿದೆ ಎಂದಿದ್ದಾರೆ. ತೀರ್ಪನ್ನು ಅನುಷ್ಠಾನ ಮಾಡುವ ಬಗ್ಗೆ ಹಲವು ರೀತಿಯ ಮಾರ್ಗಗಳ ಬಗ್ಗೆ ಮಾತಾಡಿದ್ದ ಸಿಎಂ ಭಿನ್ನಧ್ವನಿಯಲ್ಲಿ ಮಾತಾಡಿದ್ದಾರೆ. ಇದರ ಜತೆಗೆ ಸಚಿವ ಪೊನ್ ರಾಧಾಕೃಷ್ಣನ್ ಕಾರು ತಡೆದ ಬಗ್ಗೆ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಕ್ರಮ ಸರಿಯಾದದ್ದು ಎಂದಿದ್ದಾರೆ.
2 ದಿನ ಅವಕಾಶ: ಅಯ್ಯಪ್ಪ ದೇಗುಲದಲ್ಲಿ ಮಹಿಳೆಯರಿಗಾಗಿಯೇ 2 ದಿನಗಳ ಕಾಲ ಪ್ರಾರ್ಥನೆ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಕೇರಳ ಸರ್ಕಾರ ಹೈಕೋರ್ಟಲ್ಲಿ ಅರಿಕೆ ಮಾಡಿಕೊಂಡಿದೆ. ನಾಲ್ವರು ಮಹಿಳೆಯರು ದೇಗುಲ ಪ್ರವೇಶಕ್ಕೆ ಭದ್ರತೆ ನೀಡ ಬೇಕು ಎಂದು ಮನವಿ ಮಾಡಿಕೊಂಡ ಅರ್ಜಿಯ ವಿಚಾರಣೆ ವೇಳೆ ಈ ಅಂಶ ಪ್ರಸ್ತಾಪವಾಗಿದೆ. ನ.28ರಂದು ಹೈಕೋರ್ಟ್ ಮತ್ತೆ ಈ ಬಗ್ಗೆ ವಿಚಾರಣೆ ನಡೆಸಲಿದೆ. ಇದೇ ವೇಳೆ ಮಹಿಳಾ ಭಕ್ತರು ದೇಗುಲ ಪ್ರವೇಶಿಸಿದರೆ ಅವರಿಗೆ ಯಾವ ರೀತಿಯ ಮೂಲಸೌಕರ್ಯ ನೀಡಲಾಗಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿದೆ.