ಸರ್ಜಿಕಲ್ ವಾಕ್ ಸಮರ
Team Udayavani, Dec 2, 2018, 6:00 AM IST
ನವದೆಹಲಿ: ರಾಜಸ್ಥಾನ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆಗೆ ಇನ್ನು 5 ದಿನಗಳಷ್ಟೇ ಬಾಕಿಯಿದ್ದು, ರಾಜಕೀಯ ಸಮರ ಇನ್ನಷ್ಟು ಬಿರುಸಾಗಿದೆ. ಶನಿವಾರ ರಾಜಸ್ಥಾನದ ಬೇರೆ ಬೇರೆ ಭಾಗಗಳಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ “ಸರ್ಜಿಕಲ್ ದಾಳಿ’ ವಿಚಾರವನ್ನೆತ್ತಿ ಕೊಂಡು ಪರಸ್ಪರ ವಾಗ್ಯುದ್ಧ ನಡೆಸಿದ್ದಾರೆ.
ಇಲ್ಲಿನ ಉದಯಪುರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “2016ರಲ್ಲಿ ಎಲ್ಒಸಿಯಲ್ಲಿ ನಮ್ಮ ಸೇನೆ ನಡೆಸಿದ ಸರ್ಜಿಕಲ್ ದಾಳಿಯನ್ನು ಪ್ರಧಾನಿ ಮೋದಿ ಅವರು ತಮ್ಮ ರಾಜಕೀಯ ಸೊತ್ತು ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೂ ಮೊದಲು ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವಿದ್ದಾಗ ಇದೇ ರೀತಿಯ 3 ಸರ್ಜಿಕಲ್ ದಾಳಿಗಳು ನಡೆದಿವೆ. ಇದು ಮೋದಿಯವರಿಗೆ ಗೊತ್ತಿದೆಯೇ? ಉತ್ತರಪ್ರದೇಶ ಚುನಾವಣೆ ಸಮೀಪದಲ್ಲೇ ಇದ್ದ ಕಾರಣ ಸರ್ಜಿಕಲ್ ದಾಳಿ ಯನ್ನು ಮೋದಿ ಅವರು ರಾಜ ಕೀಯಕ್ಕೆ ಬಳಸಿಕೊಂಡರು’ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಅನು ತ್ಪಾದಕ ಆಸ್ತಿ ಕುರಿತು ಪ್ರಸ್ತಾಪಿಸಿದ ರಾಹುಲ್, ಯುಪಿಎ ಅವಧಿ ಯಲ್ಲಿ ಬ್ಯಾಂಕುಗಳ ಎನ್ಪಿಎ 2 ಲಕ್ಷ ಕೋಟಿ ರೂ. ಆಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಮೇಲೆ ಅದು 12 ಲಕ್ಷ ಕೋಟಿ ರೂ.ಗೆ ತಲುಪಿತು. ಜಿಎಸ್ಟಿ ಮತ್ತು ನೋಟ್ ಬ್ಯಾನ್ ಮೂಲಕ ಜನಸಾಮಾನ್ಯ ರನ್ನು ಸಂಕಷ್ಟಕ್ಕೆ ದೂಡಲಾಯಿತು ಎಂದೂ ಹೇಳಿದ್ದಾರೆ.
ಯೋಧರಿಗೆ ಅವಮಾನ: ಸರ್ಜಿಕಲ್ ದಾಳಿ ಕುರಿತು ರಾಹುಲ್ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷರು ಯೋಧರಿಗೆ ಅವ ಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜಸ್ಥಾನದ ಫಲೋಡಿಯಲ್ಲಿ ಮಾತನಾಡಿದ ಶಾ, “ಉ.ಪ್ರದೇಶ ಚುನಾ ವಣೆ ಗೆಲ್ಲಲು ಸರ್ಜಿಕಲ್ ದಾಳಿ ನಡೆಸಲಾಯಿತು ಎಂಬ ರಾಹುಲ್ ಹೇಳಿಕೆಯು ಯೋಧರಿಗೆ ಮಾಡಿದ ಅವಮಾನ. ಯೋಧರ ಸಾವಿಗೆ ಪ್ರಧಾನಿ ಮೋದಿ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಆದರೆ, ನೀವು ಹೀಗೆ ಹೇಳುತ್ತಿದ್ದೀರಿ. ನಿಮಗೆ ಅಂಥ ಧೈರ್ಯವೂ ಬರಲಿಲ್ಲ. ಸರ್ಜಿಕಲ್ ದಾಳಿಯಿಂದಾಗಿ ಸರ್ಕಾರ ನಮ್ಮೊಂದಿಗೆ ದೃಢವಾಗಿ ನಿಂತಿದೆ ಎಂಬ ಹೆಮ್ಮೆ ಯೋಧರಲ್ಲಿ ಮೂಡಿದೆ’ ಎಂದಿದ್ದಾರೆ.
ಸ್ಟ್ರಾಂಗ್ರೂಂ ಹೊರಗೆ ಅನುಮಾನಾಸ್ಪದ ನಡೆ
ಶನಿವಾರ ಕಾಂಗ್ರೆಸ್ನ ನಿಯೋಗವು ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಇವಿಎಂಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗಳ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆಯೂ ಮನವಿ ಮಾಡಿಕೊಂಡಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್ಗಡದಲ್ಲಿ ಇವಿಎಂಗಳನ್ನಿಟ್ಟ ಕೊಠಡಿಗಳ ಹೊರಗೆ ಅನುಮಾನಾಸ್ಪದ ಚಲನವಲನ ಕಂಡುಬಂದಿದೆ. ಸಿಸಿಟಿವಿ ರಿಪೇರಿ ಮಾಡುವ ಹೆಸರಲ್ಲಿ ಲ್ಯಾಪ್ಟಾಪ್, ಮೊಬೈಲ್ ಫೋನ್ ಹಿಡಿದುಕೊಂಡ ವ್ಯಕ್ತಿಗಳು ಸ್ಟ್ರಾಂಗ್ ರೂಂ ಹೊರಗೆ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದೂ ನಿಯೋಗ ಆರೋಪಿಸಿದೆ. ಇನ್ನೊಂದೆಡೆ, ಮಧ್ಯ ಪ್ರದೇಶದಲ್ಲಿ ಚುನಾವಣೆ ನಡೆದ 2 ದಿನಗಳ ಬಳಿಕ ನಂಬರ್ಪ್ಲೇಟ್ ಇಲ್ಲದ ಬಸ್ ಮೂಲಕ ಇವಿಎಂಗಳು ಕಲೆಕ್ಷನ್ ಸೆಂಟರ್ ತಲುಪಿದ್ದು, ಫಲಿತಾಂಶ ತಿರುಚಲು ಬಿಜೆಪಿ ಯತ್ನಿಸು ತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಶುಕ್ರವಾರ ರಾತ್ರಿ ಪ್ರತಿಭಟನೆಯನ್ನೂ ನಡೆಸಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಆಯೋಗ, ಅದು ಬಳಸಲಾದ ಇವಿಎಂಗಳಲ್ಲ. ಇವಿಎಂಗಳಲ್ಲಿ ದೋಷ ಕಂಡು ಬಂದರೆ, ಪರ್ಯಾಯವಾಗಿ ಬಳಸಲೆಂದು ಈ ಇವಿಎಂಗಳನ್ನು ಹೆಚ್ಚುವರಿಯಾಗಿ ಇಡಲಾಗಿತ್ತು. ಅದನ್ನು ವಾಪಸ್ ತರಲಾಯಿತು ಎಂದು ಹೇಳಿದೆ.
ರಾಹುಲ್ಗೆ ಸುಷ್ಮಾ ತಿರುಗೇಟು
ಪ್ರಧಾನಿ ಮೋದಿ ತಮ್ಮನ್ನು ತಾವು ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಆದರೆ ಹಿಂದೂಧರ್ಮದ ಮೂಲ ಆಶಯವನ್ನು ಅವರು ಅರ್ಥಮಾಡಿಕೊಂಡಿಲ್ಲ. ಹೀಗಿರುವಾಗ ಅವರೆಂಥಾ ಹಿಂದೂ ಎಂದು ರಾಜಸ್ಥಾನದ ಕಾರ್ಯಕ್ರಮ ವೊಂದರಲ್ಲಿ ರಾಹುಲ್ ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, “ಕಾಂಗ್ರೆಸ್ ಸಂಪೂರ್ಣ ಗೊಂದಲದಲ್ಲಿದೆ. ಆ ಪಕ್ಷದ ನೈತಿಕತೆಯೇ ಕುಸಿದಿದೆ. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರು ಎಂಬುದು ಈಗಷ್ಟೇ ಕಾಂಗ್ರೆಸ್ ನಾಯಕರ ಅರಿವಿಗೆ ಬರತೊಡಗಿದೆ. ಬಿಜೆಪಿ ಆಡಳಿತದಲ್ಲಿನ ರಾಜ್ಯಗಳಲ್ಲಿ ಅವರ ದ್ವಂದ್ವ ನೀತಿಯು ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ಗೆ ಹೀನಾಯ ಸೋಲು ಖಚಿತ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ