ಕರ್ತಾರ್ಪುರ ಕಾರಿಡಾರ್ ಗೂಗ್ಲಿ ಅಲ್ಲ: ಇಮ್ರಾನ್
Team Udayavani, Dec 4, 2018, 11:12 AM IST
ಇಸ್ಲಾಮಾಬಾದ್: ಕರ್ತಾರ್ಪುರ ಕಾರಿಡಾರ್ಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೂಗ್ಲಿ ಎಸೆದಿದ್ದಾರೆ ಎಂಬ ತಮ್ಮ ಸಚಿವರ ಹೇಳಿಕೆಯಿಂದ ಉಂಟಾದ ವಿವಾದವನ್ನು ತಣ್ಣಗಾಗಿಸಲು ಇಮ್ರಾನ್ ಖಾನ್ ಯತ್ನಿಸಿದ್ದಾರೆ. ಸೋಮವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಕರ್ತಾರ್ಪುರ ಕಾರಿಡಾರ್ ಗೂಗ್ಲಿ ಅಲ್ಲ. ಅದೊಂದು ದಿಟ್ಟ ನಿರ್ಧಾರ ಎಂದು ಹೇಳಿದ್ದಾರೆ.
ಕಾರಿಡಾರ್ ಶಂಕುಸ್ಥಾಪನೆಯನ್ನು ಗೂಗ್ಲಿ ಎಂದು ವಿದೇಶಾಂಗ ಸಚಿವ ಖುರೇಷಿ ವ್ಯಾಖ್ಯಾನಿಸಿದ್ದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದರು. ಇನ್ನೊಂದೆಡೆ, ಸೋಮವಾರ ಪಾಕಿಸ್ಥಾನವು ಕರ್ತಾರ್ಪುರ ಗಡಿಯಲ್ಲಿ ವಲಸೆ ಕೇಂದ್ರವನ್ನು ತೆರೆದಿದೆ. ಇಲ್ಲಿನ ಅಧಿಕಾರಿಗಳು ಸಿಕ್ಖ್ ಯಾತ್ರಿಕರ ಗುರುತು ಪತ್ರ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಪ್ರವೇಶ ನೀಡಲಿದ್ದಾರೆ.