ಅಮೈ ಮಹಾಲಿಂಗ ನಾಯ್ಕರಿಗೆ ಮಂಗಳೂರು ಪ್ರಸ್ ಕ್ಲಬ್ ಪ್ರಶಸ್ತಿ
Team Udayavani, Dec 17, 2018, 10:17 AM IST
ಮಂಗಳೂರು: ಬೋಳು ಗುಡ್ಡ ಪ್ರದೇಶದಲ್ಲಿ ಜಲಕ್ರಾಂತಿ ನಡೆಸಿ ನಂದನವನ ಸೃಷ್ಟಿಸಿದ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು ಮಂಗಳೂರು ಪ್ರಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಹಾಲಿಂಗ ನಾಯ್ಕರು ಬಂಟ್ವಾಳದ ಅಡ್ಯನಡ್ಕ ಸಮೀಪದ ಅಮೈ ನಿವಾಸಿ. 1978ರಲ್ಲಿ ಗುಡ್ಡದ ಮೇಲಿನ ಬರಡು ನೆಲವನ್ನು ಪಡೆದ ಅವರು ಕಠಿನ ಪರಿಶ್ರಮದಿಂದ ಸುರಂಗಗಳನ್ನು ನಿರ್ಮಿಸಿ ಜಲ ಸಂಪನ್ಮೂಲ ಸೃಷ್ಟಿಸಿ ಬೋಳು ಗುಡ್ಡದಲ್ಲಿ ಕೃಷಿ ನಡೆಸಿ ಯಶಸ್ವಿಯಾಗಿದ್ದರು. 73ರ ಹರೆಯದ ಮಹಾಲಿಂಗ ನಾಯ್ಕ ಅವರನ್ನು ಆಯ್ಕೆ ಸಮಿತಿಯು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.
ಜ. 5ರಂದು ಪ್ರಶಸ್ತಿ ಪ್ರದಾನ
ಉರ್ವ ಚರ್ಚ್ ಸಭಾಂಗಣದಲ್ಲಿ ಜ. 5ರಂದು ನಡೆಯುವ ಪ್ರಸ್ ಕ್ಲಬ್ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಸ್ ಕ್ಲಬ್ನ ಪ್ರಕಟನೆ ತಿಳಿಸಿದೆ.