ಚುನಾವಣೆ ಬಳಿಕ ಬಿಜೆಪಿಯವರೇ ಬಿಎಸ್ವೈಯನ್ನು ಮಾತನಾಡಿಸಲ್ಲ
Team Udayavani, Dec 19, 2018, 9:50 AM IST
ಬೆಳಗಾವಿ: ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಯವರೇ ಮಾತನಾಡಿಸೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಲೇವಡಿ ಮಾಡಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪಗೆ ಕೇವಲ ಅಧಿಕಾರ ಬೇಕಾಗಿದೆ. ಸ್ವಾರ್ಥ ರಾಜಕಾರಣ ಮಾಡುತ್ತಿರುವ ಬಿಎಸ್ವೈ ಅವರನ್ನು ಲೋಕಸಭೆ ಬಳಿಕ ಬಿಜೆಪಿಯವರೇ ಮಾತನಾಡಿಸುವುದಿಲ್ಲ. ಎಲ್ಲರೂ ಕೂಡಿ ಅವರನ್ನು ಹೊರಗೆ ಇಡುತ್ತಾರೆ. ಲೋಕಸಭೆ
ಚುನಾವಣೆಗೆ ಮುನ್ನವೇ ಅಧಿಕಾರ ಹಿಡಿಯುವ ಅವಸರದಲ್ಲಿ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಂತರ ತಮ್ಮ ಮಾತನ್ನು ಯಾರೂ ಕೇಳುವುದಿಲ್ಲ ಎಂಬ ಆತಂಕವೂ ಅವರನ್ನು ಕಾಡುತ್ತಿದೆ ಎಂದು ಟಾಂಗ್ ನೀಡಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯಕ್ಕೂ ಹಾಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ. ಕಾಂಗ್ರೆಸ್ ಧರ್ಮ ಹಾಗೂ ಜಾತಿ ರಾಜಕಾರಣ ಮಾಡುವುದಿಲ್ಲ. ಪ್ರತ್ಯೇಕ ಧರ್ಮದ ಬಗ್ಗೆ ಡಿ.ಕೆ.ಶಿವಕುಮಾರ ಹೇಳಿಕೆ ವೈಯಕ್ತಿಕವಾದುದು ಎಂದರು.