ತಲಾಖ್ ನಿಷೇಧಕ್ಕೆ ಒಪ್ಪಿಗೆ
Team Udayavani, Dec 28, 2018, 1:17 AM IST
ಹೊಸದಿಲ್ಲಿ: ಬಹಳ ಕುತೂಹಲ ಕೆರಳಿಸಿದ್ದ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆ ಮಸೂದೆ 2018ಕ್ಕೆ ಲೋಕಸಭೆಯಲ್ಲಿ ದೀರ್ಘ ಚರ್ಚೆಯ ಬಳಿಕ ಅನುಮೋದನೆ ನೀಡಲಾಗಿದೆ.
ಮಸೂದೆಯ ಪರವಾಗಿ 245 ಮತ್ತು ವಿರೋಧವಾಗಿ 11 ಮತಗಳು ಚಲಾವಣೆಯಾದವು. ಅಂದ ಹಾಗೆ ಲೋಕಸಭೆಯಲ್ಲಿ ಎರಡನೇ ಬಾರಿಗೆ ಮಸೂದೆ ಅಂಗೀಕಾರವಾಗುತ್ತಿದೆ. ಮೂರು ಬಾರಿ ತಲಾಖ್ ಹೇಳುವ ವ್ಯಕ್ತಿಗೆ ಜೈಲು ಶಿಕ್ಷೆ ನೀಡುವ ಪ್ರಸ್ತಾಪವನ್ನು ತೆಗೆದು ಹಾಕಬೇಕು ಎಂಬ ತಿದ್ದುಪಡಿಯನ್ನು ಲೋಕಸಭೆ ತಿರಸ್ಕರಿಸಿದೆ.
ಇದಲ್ಲದೆ, ನಿಗದಿತ ಸಮುದಾಯದ ಮಹಿಳೆಯರನ್ನು ಗುರಿಯಾಗಿಸುವ ನಿಟ್ಟಿನಲ್ಲಿಯೇ ಈ ಮಸೂದೆ ಇದೆ ಎಂಬ ವಿಪಕ್ಷಗಳ ಆರೋಪವನ್ನು ಕೇಂದ್ರ ಸರಕಾರ ಸರಾಸಗಟಾಗಿ ತಿರಸ್ಕರಿಸಿದೆ. ಮಸೂದೆಯನ್ನು ಸಂಸತ್ನ ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ಮತ್ತು ಎಐಎಡಿಎಂಕೆ ಒತ್ತಾಯಿಸಿದರೂ, ಸರಕಾರ ಒಪ್ಪದೇ ಇದ್ದ ಹಿನ್ನೆಲೆಯಲ್ಲಿ ಆ 2 ಪಕ್ಷಗಳು ಸದನದಿಂದ ಹೊರ ನಡೆದವು. ಅವುಗಳಿಗೆ ಬೆಂಬಲ ನೀಡಿದ ಟಿಎಂಸಿ, ಆರ್ಜೆಡಿ ಸಂಸದರೂ ಕೂಡ ಸಭಾ ತ್ಯಾಗ ಮಾಡಿದ್ದಾರೆ. ಬರೋಬ್ಬರಿ 4 ಗಂಟೆಗಳ ಕಾಲ ಬಿರುಸಿನಡಿ ಚರ್ಚೆ ನಡೆಯಿತು.
ರಾಜಕೀಯ ಮಾಡಬೇಡಿ: ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಮಾತನಾಡಿ ತ್ರಿವಳಿ ತಲಾಖ್ ನಿಷೇಧ ವಿಧೇಯಕ ಮುಸ್ಲಿಂ ಮಹಿಳೆಯರ ವಿವಾಹ ರಕ್ಷಣಾ ವಿಧೇಯಕ ಸಮುದಾಯದ ಮಹಿಳೆಯರ ಪರವಾಗಿ ಇದೆ. ಈ ಬಗ್ಗೆ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ. ತಲಾಖ್ ಹೇಳುವ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ಇದೆ ಎಂದಿದ್ದಾರೆ ಸಚಿವ ಪ್ರಸಾದ್.ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮತ್ತು ಮಾನವೀಯತೆಯ ನೆಲೆಯಲ್ಲಿ ಈ ಮಸೂದೆ ಇದೆ. ಯಾವುದೇ ಧರ್ಮ ಮತ್ತು ನಂಬಿಕೆಯ ವಿರುದ್ಧ ಇಲ್ಲ ಎಂದು ಪ್ರತಿಪಾದಿಸಿದರು.
ವರದಕ್ಷಿಣೆ ನಿಷೇಧ, ಸತಿ ಸಹಗಮನ ಪದ್ಧತಿ, ಅತ್ಯಾಚಾರದ ವಿರುದ್ಧ ಕಠಿಣ ಕಾನೂನುಗಳನ್ನು ಸಂಸತ್ನಲ್ಲಿ ಚರ್ಚಿಸಿ ಅಂಗೀಕರಿಸಿರುವಾಗ ಈ ಬಗ್ಗೆ ಆಕ್ಷೇಪವೇಕೆ ಎಂದು ಪ್ರಶ್ನಿಸಿ ದರು. ಅದೇ ಚಿಂತನೆಯನ್ನು ತಲಾಖ್ ಬಗ್ಗೆಯೂ ಅನ್ವಯಿಸಬೇಕು ಎಂದು ಹೇಳಿದ್ದಾರೆ.
ಮಸೂದೆ ಮಂಡನೆಗೆ ಮುನ್ನ ಮಾತನಾಡಿದ್ದ ಸಚಿವ ಪ್ರಸಾದ್ 2017ರ ಜನವರಿಯಿಂದ ಈಚೆಗೆ 477 ತಲಾಖ್ ನೀಡಿದ ಪ್ರಕರಣಗಳು ವರದಿಯಾಗಿವೆ. ಪ್ರಾಧ್ಯಾಪಕರೊಬ್ಬರು ವಾಟ್ಸ್ ಆ್ಯಪ್ನಲ್ಲಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡಿದ್ದಾರೆ ಎಂದಿದ್ದಾರೆ.
ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಾನೂನು ಜಾರಿಗೆ ತರಲು ಅವಕಾಶ ವಿ ದ್ದರೂ ಅದನ್ನು ಸದುಪಯೋಗಪಡಿಸಲಿಲ್ಲ ಎಂದು ಟೀಕಿಸಿದರು. ಸತಿ, ವರದಕ್ಷಿಣೆ ನಿಷೇಧದ ಬಗ್ಗೆ ಕಾಯ್ದೆ ತರಲು ಸಾಧ್ಯ ವಿದ್ದಾಗ ತಲಾಖ್ ಬಗ್ಗೆ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಇದೊಂದು ಪ್ರಮುಖ ಮಸೂದೆಹಾಗೂ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದೆ. ಹೀಗಾಗಿ ಅದನ್ನು ಸಂಸತ್ನ ಆಯ್ಕೆ ಸಮಿತಿಗೆ ನೀಡಬೇಕು. ಅದರ ಪ್ರತಿಯೊಂದು ಅಂಶವನ್ನೂ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಎಐಎಡಿಎಂಕೆಯ ಪಿ.ವೇಣುಗೋಪಾಲ್, ತೃಣಮೂಲ ಕಾಂಗ್ರೆಸ್ನ ಸುದೀಪ್ ಬಂದೋಪಾಧ್ಯಾಯ, ಎಐಎಂಐಎಂನ ಅಸಾದುದ್ದೀನ್ ಒವೈಸಿ, ಎನ್ಸಿಪಿಯ ಸುಪ್ರಿಯ ಸುಳೆ ಚರ್ಚೆ ಯಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ವಿಧೇಯಕವನ್ನು ಆಯ್ಕೆ ಸಮಿತಿಗೆ ಒಪ್ಪಿಸಲೇಬೇಕು ಎಂದು ಒತ್ತಾಯಿಸಿದರು.
ಮಿಶ್ರ ಪ್ರತಿಕ್ರಿಯೆ
ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಮುಖಂಡರು ಈ ನಿರ್ಧಾರ ಸ್ವಾಗ ತಾರ್ಹ ಎಂದರೆ, ಇತರರು ಅತ್ಯಂತ ಅಪಾಯಕಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಕಾರ್ಯದರ್ಶಿ ಎಸ್.ಕ್ಯೂ.ಆರ್.ಇಲ್ಯಾಸ್ ಮಾತನಾಡಿ ಮುಂದಿನ ಲೋಕ ಸಭೆ ಚುನಾವಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳ ಲಾಗಿದೆ ಎಂದಿದ್ದಾರೆ. ಜತೆಗೆ ಇದೊಂದು ಅಪಾಯಕಾರಿ ಎಂದಿದ್ದಾರೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋ ಲನದ ನಾಯಕಿ ಝಕಿಯ ಸೋಮನ್ ಇದೊಂದು ಸ್ವಾಗತಾರ್ಹ ನಿರ್ಧಾರ ಎಂದಿದ್ದಾರೆ.
ರಾಜ್ಯಸಭೆಯಲ್ಲಿ ಪರೀಕ್ಷೆ
ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಬೇಕು. ಅಲ್ಲಿ ಕೇಂದ್ರ ಸರಕಾರಕ್ಕೆ ಬಹುಮತ ಇಲ್ಲ. ಜ.5ರಂದು ಚಳಿಗಾಲದ ಅಧಿವೇಶನ ಮುಕ್ತಾಯವಾಗುವುದರ ಒಳಗಾಗಿ ಅನುಮೋದನೆ ಪಡೆಯಬೇಕಾಗಿದೆ. ಪ್ರತಿಪಕ್ಷಗಳೆಲ್ಲವೂ ಸರಕಾರದ ಕ್ರಮದ ವಿರುದ್ಧ ಒಂದಾಗಿರುವ ಹಿನ್ನೆಲೆಯಲ್ಲಿ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಮಸೂದೆ ಅಂಗೀಕರಿಸಿದ್ದು ನಿಜಕ್ಕೂ ಐತಿಹಾಸಿಕ. ಅದರಿಂದ ಮುಸ್ಲಿಂ ಮಹಿಳೆಯರಿಗೆ ಸಮಾನತೆ ಮತ್ತು ಗೌರವ ನೀಡಿದಂತಾಗಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
– ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ತಲಾಖ್ ನಿಷೇಧಿಸುವ ನಿಟ್ಟಿನಲ್ಲಿ ಮಸೂದೆ ಮಂಡಿಸಿದ ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆಯೂ ಮಸೂದೆಮಂಡಿಸಿ ಅಂಗೀಕರಿಸಲಿ.
– ಅರವಿಂದ ಸಾವಂತ್, ಶಿವಸೇನೆ ಸಂಸದ