ರೈಲಲ್ಲೇ ಮೃತಪಟ್ಟ ಮಗು
Team Udayavani, Dec 28, 2018, 1:06 PM IST
ಮಣಪ್ಪುರಂ: ವೈದ್ಯಕೀಯ ನೆರವು ನೀಡಿ ಅಥವಾ ಒಂದು ಸೀಟಾದರೂ ನೀಡಿ ಎಂದು ಹೃದಯ ರೋಗ ಹೊಂದಿರುವ ಮಗುವನ್ನು ಹೊತ್ತು ರೈಲ್ವೆ ಅಧಿಕಾರಿಗಳಿಗೆ ಮಹಿಳೆ ಮೊರೆಯಿಟ್ಟಿದ್ದು ಕೇಳಲೇ ಇಲ್ಲ. ಪ್ರತಿ ಬಾರಿ ರೈಲು ನಿಂತಾಗಲೂ ಆಕೆ ಹಾಗೂ ಮಗುವನ್ನು ಹಿಂದಿನ raಬೋಗಿಗಳಿಗೆ ಟಿಸಿಗಳು ಕಳುಹಿಸುತ್ತಿದ್ದರು. ಕೇರಳದ ಕಣ್ಣೂರಿನ ಸುಮಯ್ನಾ ಹಾಗೂ ಶಮೀರ್ ದಂಪತಿಯ ಮಗು ಮರಿಯಮ್ ರೈಲಿನಲ್ಲೇ ಸಾವನ್ನಪ್ಪಿದೆ. ಮಂಗಳೂರು-ತಿರುವನಂತಪುರ ಮಾವೇಲಿ ಎಕ್ಸ್ ಪ್ರಸ್ನಲ್ಲಿ ದುರ್ಘಟನೆ ನಡೆದಿದೆ.
ಮೂರು ತಿಂಗಳ ಹಿಂದೆ ಮಗುವಿಗೆ ತಿರುವನಂತಪುರದ ಶ್ರೀ ಚಿತ್ರ ತಿರುನಾಳ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಈಗ ಜ್ವರ ಕಾಣಿಸಿಕೊಂಡಿದ್ದರಿಂದ, ಮಗುವನ್ನು ಇರಿಕ್ಕೂರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಾದರೂ, ತಿರುವನಂತಪುರಂಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಕೊನೆಯ ಕ್ಷಣದಲ್ಲಿ ಕರೆದುಕೊಂಡು ಹೋಗುವುದು ನಿರ್ಧಾರವಾದ್ದರಿಂದ ರಿಸರ್ವ್ ಬರ್ತ್ ಸಿಗಲಿಲ್ಲ. ಜನರಲ್ ಕೋಚ್ನಲ್ಲಿ ಪ್ರಯಾಣಿಸಿದರೆ ಮಗುವಿನ ಆರೋಗ್ಯ ಹದಗೆಡಬಹುದು ಎಂದು ದಂಪತಿ ಹೆದರಿದ್ದರಿಂದ ರಿಸರ್ವ್ ಕೋಚ್ ಒಳಗೆ ಸೇರಿಕೊಂಡು ಟಿಟಿಯನ್ನು ವಿನಂತಿಸಿದರು.
ಆದರೆ ಟಿಟಿ ಅವರ ಮಾತು ಕೇಳಿಸಿಕೊಳ್ಳಲಿಲ್ಲ. ಹೀಗಾಗಿ ಸುಮಯ್ನಾ ಮಹಿಳೆಯರ ಬೋಗಿಗೆ ತೆರಳಿದರು. ಸ್ವಲ್ಪ ಹೊತ್ತಿನ ನಂತರ ಮಗುವಿಗೆ ಜ್ವರ ಹೆಚ್ಚಿದ್ದರಿಂದ, ಚೈನ್ ಎಳೆದು ರೈಲು ನಿಲ್ಲಿಸಿ ಕುಟ್ಟಿಪುರಂ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಯಿತು. ಆದರೆ ಮಗು ದಾರಿ ಮಧ್ಯೆಯೇ ಕೊನೆಯುಸಿರೆಳೆಯಿತು.