ಹೆದ್ದಾರಿಯಲ್ಲೇ ಉಳಿದ ಹಳೆ ಪಳೆಯುಳಿಕೆಗಳು
Team Udayavani, Jan 22, 2019, 12:50 AM IST
ಉಡುಪಿ: ಹೆದ್ದಾರಿ ಕಾಮಗಾರಿಗೆ ಇನ್ನೂ ಅಂತ್ಯ ಕಾಣುವ ಕಾಲ ಸನ್ನಿಹಿತವಾಗಿಲ್ಲ.
ಎರ್ಮಾಳು ಕಲ್ಸಂಕ ಸೇತುವೆ ಕಾಮಗಾರಿಯು ಕುಂಟುತ್ತಲೇ ಸಾಗಿದೆ. ಈ ಎಲ್ಲವುಗಳ ನಡುವೆ ಹೆದ್ದಾರಿಗಾಗಿ ಭೂಸ್ವಾಧೀನ ನಡೆದಿದ್ದು, ಪರಿಹಾರ ಪಡೆದವರೂ ಭೂಸ್ವಾಧೀನಕ್ಕೊಳಗಾದ ಜಾಗದಲ್ಲೇ ಇನ್ನೂ
ವ್ಯವಹಾರ ನಡೆಸುತ್ತಿದ್ದಾರೆ. ಕೆಲವರು ಕಟ್ಟಡಗಳ ಪಳೆಯುಳಿಕೆಯಲ್ಲೇ ಇದ್ದಾರೆ. ಇದನ್ನು ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ನೋಡಿಯೂ ನೋಡದಂತೆ ಇದೆ.
ಹಾಗೇ ಇವೆ ಪಳೆಯುಳಿಕೆಗಳು
ಭೂಸ್ವಾಧೀನವಾದ ಸ್ಥಳಗಳಲ್ಲಿ ಕಟ್ಟಡಗಳ ಪಳೆಯುಳಿಕೆಗಳಿದ್ದು, ಕೆಲವೆಡೆಗಳಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಜಾಗಗಳ ಹಿಂದೆ ಕಟ್ಟಡಗಳನ್ನು ಕಟ್ಟಿಕೊಂಡಿರುವ ಭೂ ಮಾಲಕರು ಪಳೆಯುಳಿಕೆಗಳನ್ನು ತೆಗೆಯುವಂತೆ ಅಧಿಕಾರಿ ವರ್ಗವನ್ನು ಮನವಿ ಮಾಡಿದ್ದಾರೆ.
ಇದನ್ನು ತೆಗೆಯದೇ ಹೋಗಿರುವುದರಿಂದ ಹೆದ್ದಾರಿಯ ಸೌಂದರ್ಯವೂ ಕುಂದಿದೆ.
ಕಟ್ಟಡಗಳ ತೆರವು ಎಂದು?
ಭೂಸ್ವಾಧೀನವಾದ ಬಳಿಕ ಹಾಗೇ ಉಳಿದ ಕಟ್ಟಡಗಳು ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿವೆ. ಬೀಜಾಡಿ, ಗೋಪಾಡಿ, ತೆಕ್ಕಟ್ಟೆಯಲ್ಲಿ ಶೇ.60ರಷ್ಟು ಇಂತಹ ಕಟ್ಟಡಗಳು ತೆರವಾಗದೆ ಉಳಿದುಕೊಂಡಿವೆ. ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ ಸಹಿತ ಉಡುಪಿಯ ಭಾಗದಲ್ಲೂ ಉಳಿದಿವೆ. ಇದರ ತೆರವಿನ ಜವಾಬ್ದಾರಿ ಗುತ್ತಿಗೆದಾರ ಕಂಪೆನಿಯದ್ದಾಗಿದೆ.
ಇನ್ನು ಹೆದ್ದಾರಿ ಜಾಗದಲ್ಲೇ ಅತಿಕ್ರಮಣ ಮಾಡಿ ಹೊಸ ಕಟ್ಟಡ ನಿರ್ಮಾಣವೂ ಆಗುತ್ತಿದೆ. ಇದಕ್ಕೂ ಕ್ರಮ ಕೈಗೊಳ್ಳಲಾಗಿಲ್ಲ. ಹಣದ ಕೊರತೆ ಇದೆ ಎಂದು ಕಂಪೆನಿ ಹೇಳಿದ್ದಾಗಿ ಸಹಾಯಕ ಕಮಿಷನರ್ ಕಚೇರಿ ಮೂಲಗಳು ತಿಳಿಸುತ್ತಿವೆ.
ಸಾಮಾಜಿಕ ಅರಣ್ಯೀಕರಣವೂ ಆಗಿಲ್ಲ
ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆ ಮತ್ತು ಅದರ ಮಗ್ಗುಲಿನ ಒಳಚರಂಡಿಗಳ ಜಾಗವಲ್ಲದೆ, ಹೆದ್ದಾರಿಗೆ ಅಗತ್ಯವಿದ್ದ ಜಾಗದಲ್ಲಿ 1600 ಮರಗಳನ್ನು ತೆರವು ಮಾಡಲಾಗಿತ್ತು. (ಸುರತ್ಕಲ್ನಿಂದ ಕುಂದಾಪುರದವರೆಗೆ ನವಯುಗ ನಿರ್ಮಾಣ ಕಂಪೆನಿ ಕಾಮಗಾರಿಗಾಗಿ ಕಡಿಯಲಾಗಿದೆ.) ಇದಕ್ಕೆ ಪರ್ಯಾಯವಾಗಿ 48,000 ಸಸಿಗಳನ್ನು ನೆಟ್ಟು ಸಾಮಾಜಿಕ ಅರಣ್ಯೀಕರಣ ಯೋಜನೆ ಕೈಗೊಳ್ಳಬೇಕಿತ್ತು. ಆದರೆ ಈ ಬಗ್ಗೆಯೂ ಯಾರೂ ತಲೆಕೆಡಿಸುವ ಗೋಜಿಗೇ ಹೋಗಿಲ್ಲ!
ದೂರು ನೀಡಿದ್ದೇವೆ
ಕೆಡವಲು ಬಾಕಿ ಉಳಿದಿರುವ ಕಟ್ಟಡಗಳ ಶೀಘ್ರ ತೆರವಿಗಾಗಿ ಎರಡು ತಿಂಗಳುಗಳ ಹಿಂದೆಯೇ ಇಲ್ಲಿನ ನಾಗರಿಕರು ಜಿಲ್ಲಾಧಿಕಾರಿ ಸೇರಿದಂತೆ ಹೆದ್ದಾರಿ ಪ್ರಾಧಿಕಾರ, ಸಂಸದರಿಗೂ ದೂರು ನೀಡಿದ್ದಾರೆ. ತೆರವು ಮಾಡುತ್ತೇವೆ ಎಂದು ಉತ್ತರ ಬಂದಿದ್ದರೂ ಈ ವರೆಗೆ ಕಾರ್ಯ ನಡೆದಿಲ್ಲ.
– ಅಶೋಕ್ ಶೆಣೈ, ವಿಜಯ ಸಾಲ್ಯಾನ್, ಉಚ್ಚಿಲ ಬಡಾಗ್ರಾಮ ನಿವಾಸಿಗರು
ಕಟ್ಟಡ ತೆರವಿಗೆ ಪತ್ರ, ಅರಣ್ಯೀಕರಣಕ್ಕೆ ಕ್ರಮ
ಭೂಸ್ವಾಧೀನವಾದ ಜಾಗದವರಿಗೆ ಪರಿಹಾರ ಈಗಾಗಲೇ ನೀಡಲಾಗಿದೆ. ಕಟ್ಟಡ ತೆರವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ನವಯುಗ ನಿರ್ಮಾಣ ಕಂಪೆನಿಗೆ ಸಂಬಂಧಿಸಿದ್ದಾಗಿದೆ. ಅವರಿಗೆ ಪತ್ರ ಬರೆಯುತ್ತೇವೆ. ಹಾಗೆಯೇ ಸಾಮಾಜಿಕ ಅರಣ್ಯೀಕರಣಕ್ಕಾಗಿ ಜಿಲ್ಲಾ ಅರಣ್ಯಾಧಿಕಾರಿ(ಆರ್ಎಫ್ಒ) ಅವರಿಗೆ ನಿರ್ದೇಶನ ನೀಡುತ್ತೇವೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ ಉಡುಪಿ
– ಆರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ