ಮಂಡಿ ಉಳುಕಿ ನೋವು: ಗೌಡರಿಗೆ ವಿಶ್ರಾಂತಿಗೆ ಸಲಹೆ
Team Udayavani, Feb 3, 2019, 12:46 AM IST
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕಾಲಿನ ಮಂಡಿ ಉಳುಕಿರುವ ಕಾರಣ ಮೂರು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಶುಕ್ರವಾರ ಸಂಸತ್ನ ಬಜೆಟ್ ಅಧಿವೇಶನ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದ ದೇವೇಗೌಡರು ಶನಿವಾರ ಬೆಳಗ್ಗೆ ಪದ್ಮನಾಭನಗರ ನಿವಾಸದಲ್ಲಿ ನಡೆಯುವಾಗ ಮಂಡಿ ಉಳುಕಿದ್ದರಿಂದ ಸ್ವಲ್ಪ ನೋವಾಗಿತ್ತು. ತಕ್ಷಣ ದೇವೇಗೌಡರ ಅಳಿಯ ಡಾ.ಎಚ್.ಎಸ್.ಚಂದ್ರಶೇಖರ್ ಅವರು ಚಿಕಿತ್ಸೆ ನೀಡಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದರು. ದೇವೇಗೌಡರು ನಡೆಯುವಾಗ ಮಂಡಿ ಉಳುಕಿದ್ದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಗಾಬರಿಪಡುವ ಅಗತ್ಯವಿಲ್ಲ ಎಂದು ಅವರ ಪುತ್ರಿ ಎಚ್.ಡಿ.ಅನಸೂಯ ತಿಳಿಸಿದ್ದಾರೆ.
ಎಚ್ಡಿಕೆ ಭೇಟಿ: ಈ ಮಧ್ಯೆ, ಮೈಸೂರು ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ಆಗಮಿಸಿ ದೇವೇಗೌಡರ ಆರೋಗ್ಯ ವಿಚಾರಿಸಿದರು.