ಮಣಿಪಾಲ್ ಆಸ್ಪತ್ರೆಯಿಂದ ಕ್ಯಾನ್ಸರ್ ಜಾಗೃತಿ
Team Udayavani, Feb 5, 2019, 6:23 AM IST
ಬೆಂಗಳೂರು: ಕ್ಯಾನ್ಸರ್ ರೋಗಕ್ಕೆ ಅತ್ಯಾಧುನಿಕ ವಿಧಾನದ ಮೂಲಕ ಚಿಕಿತ್ಸೆ ನೀಡಲು ಪೂರಕವಾಗುವ ಇಮ್ಯುನೊಥೆರಪಿ, ಹಿಪೆÂಕ್ ಮತ್ತು ಪಿಪ್ಯಾಕ್ ಏಕ್ಸಲೆನ್ಸಿ ಕೇಂದ್ರಗಳನ್ನು ಮಣಿಪಾಲ್ ಆಸ್ಪತ್ರೆ ಆರಂಭಿಸಿದೆ.
ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸಲು ಹಾಗೂ ರೋಗಿಯ ಆರೈಕೆಯ ಸಾಮರ್ಥ್ಯ ಹೆಚ್ಚಿಸಲು ಬದ್ಧವಾಗಿರುವ ಮಣಿಪಾಲ್ ಆಸ್ಪತ್ರೆ ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಸೋಮವಾರ ನಗರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ ಕೇಂದ್ರಕ್ಕೆ ಹಾಗೂ ಕ್ಯಾನ್ಸರ್ ಕುರಿತ ಜಾಗೃತಿ ಅಭಿಯಾನಕ್ಕೆ ರೂಪದರ್ಶಿ, ನಟಿ ಮನೀಶಾ ಕೊಯಿರಾಲಾ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ಯಾನ್ಸರ್ ರೋಗಕ್ಕೆ ತುತ್ತಾದವರು ಸಕಾರಾತ್ಮಕ ಮನಸ್ಥಿತಿಯನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು. ಕ್ಯಾನ್ಸರ್ ಮಾರಕ ಹಾಗೂ ಆಘಾತಕಾರಿ ಕಾಯಿಲೆಯಾದರೂ ಸೂಕ್ತ ಚಿಕಿತ್ಸೆಯ ಮೂಲಕ ಗುಣಮಪಡಿಸಲು ಸಾಧ್ಯವಿದೆ. ಆರೋಗ್ಯಕರ ಜೀವನ ಶೈಲಿಯಿಂದ ಕ್ಯಾನ್ಸರ್ ಗೆಲ್ಲಲು ಸಾಧ್ಯ.
ನಾನು ಕ್ಯಾನ್ಸರ್ನಿಂದ ಬಳಲುತ್ತಿದ್ದಾಗ ಜೀವನಶೈಲಿಯನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಂಡಿದ್ದೆ. ಹೀಗಾಗಿ ಸುಲಭವಾಗಿ ಕ್ಯಾನ್ಸರ್ ಎದುರಿಸಲು ಸಾಧ್ಯವಾಯಿತು. ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಮಣಿಪಾಲ್ ಆಸ್ಪತ್ರೆ ಈ ನೂತನ ಕೇಂದ್ರಗಳ ಮೂಲಕ ಜನರಿಗೆ ಇನ್ನು ಉತ್ಕೃಷ್ಟವಾದ ಸೇವೆ ನೀಡಲಿದೆ ಎಂದರು.
ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಮಾತನಾಡಿ, ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮಣಿಪಾಲ್ ಆಸ್ಪತ್ರೆ, ಚಿಕಿತ್ಸೆಗೆ ಅತ್ಯುತ್ತಮ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಕ್ಯಾನ್ಸರ್ ರೋಗಿಗಳ ಆರೈಕೆ ಮತ್ತು ರೋಗದ ನಿಯಂತ್ರಣದ ಉದ್ದೇಶದಿಂದ ಇಮ್ಯುನೊಥೆರಪಿ ಹಾಗೂ ಹಿಪೆಕ್ ಮತ್ತು ಪಿಪ್ಯಾಕ್ ಏಕ್ಸಲೆನ್ಸಿ ಕೇಂದ್ರ ಪ್ರಾರಂಭಿಸಲಾಗಿದೆ.
ಇವು ಕ್ಯಾನ್ಸರ್ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ತರಲಿವೆ. ಅತ್ಯಂತ ಕಡಿಮೆ ಅಡ್ಡ ಪರಿಣಾಮದ ಮೂಲಕ ಸೂಕ್ತ ಚಿಕಿತ್ಸೆಯನ್ನು ಈ ವಿಧಾನದ ಮೂಲಕ ನೀಡಬಹುದಾದಗಿದೆ ಎಂದು ಹೇಳಿದರು. ಆಸ್ಪತ್ರೆಯ ಕ್ಯಾನ್ಸರ್ ರೋಗಶಾಸ್ತ್ರ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಎಸ್.ಪಿ. ಸೋಮಶೇಖರ್ ಮಾತನಾಡಿ, ಕ್ಯಾನ್ಸರ್ನಿಂದ ಸಾವಿಗೀಡಾಗುತ್ತಿರುವ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ.
ಶೀಘ್ರ ಪತ್ತೆಯಿಂದ ಕ್ಯಾನ್ಸರ್ ಕಡಿಮೆ ಮಾಡಲು ಸಾಧ್ಯವಿದೆ. ವಿಶ್ವ ಕ್ಯಾನ್ಸರ್ ದಿನದ ಈ ವರ್ಷದ ಐ ಆ್ಯಮ್ ಆ್ಯಂಡ್ ಐ ವಿಲ್ ಧ್ಯೇಯವಾಕ್ಯ ಆರೋಗ್ಯಕರ ಜೀವನಶೈಲಿಯತ್ತ ಸಾರ್ವಜನಿಕರನ್ನು ಪ್ರೋತ್ಸಾಹಿಸುವುದಾಗಿದೆ ಎಂದು ವಿವರಿಸಿದರು. ಮಣಿಪಾಲ್ ಆಸ್ಪತ್ರೆಯ ಸಿಒಒ ದೀಪಕ್ ವೇಣುಗೋಪಾಲ್, ಆಸ್ಪತ್ರೆಯ ಕ್ಯಾನ್ಸರ್ ರೋಗ ತಜ್ಞ ಡಾ. ಅಮಿತ್ ರೌಥನ್, ಡಾ.ವಾದಿರಾಜ್, ವಿಪ್ರೋ ಸಂಸ್ಥೆಯ ಹಿರಿಯ ಉಪಾಧ್ಯಕ್ಷೆ ಸುನೀತಾ ಉಪಸ್ಥಿತರಿದ್ದರು.