ಕೋಟ ಜೋಡಿ ಕೊಲೆ ಪ್ರಕರಣ: ಮನೆ ಮಹಜರು; ಬೈಕ್ ವಶ
Team Udayavani, Feb 10, 2019, 12:30 AM IST
ಕೋಟ: ಕೋಟ ಮಣೂರು ಚಿಕ್ಕನಕೆರೆಯಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿ ಬಂಧಿತ ಪ್ರಮುಖ ಆರೋಪಿ ರಾಜಶೇಖರ್ ರೆಡ್ಡಿಯನ್ನು ಕೊಲೆ ನಡೆದ ಲೋಹಿತ್ ಪೂಜಾರಿಯ ಮನೆಗೆ ಶನಿವಾರ ಕರೆ ತಂದು ಮಹಜರು ನಡೆಸಲಾಯಿತು.
ಕೃತ್ಯಕ್ಕೆ ಯಾವ ರೀತಿ ಸಂಚು ನಡೆಸಲಾಗಿತ್ತು, ಯಾವ ರೀತಿ ಪರಾರಿ ಯಾದರು ಎನ್ನುವ ಕುರಿತು ಮಹಜರು ಸಂದರ್ಭ ಆರೋಪಿಯಿಂದ ಮಾಹಿತಿ ಪಡೆಯಲಾಯಿತು. ಕೃತ್ಯದ ಅನಂತರ ಆರೋಪಿಗಳು ಎರಡು ಬೈಕ್ಗಳಲ್ಲಿ ಮೂಡುಗೋಪಾಡಿಯ ತಂಪುಪಾನೀಯ ಘಟಕವೊಂದಕ್ಕೆ ಹೋಗಿ, ಅಲ್ಲಿ ತಮ್ಮ ಬೈಕ್ಗಳನ್ನು ನಿಲ್ಲಿಸಿ ಕಾರಿನಲ್ಲಿ ಪರಾರಿಯಾಗಿದ್ದರು ಎನ್ನುವುದು ತಿಳಿಯಿತು.
ಕೂಡಲೇ ಆ ತಂಪು ಪಾನೀಯ ಘಟಕಕ್ಕೆ ತೆರಳಿ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದರು.
ಡಿವೈಎಸ್ಪಿ ಜೈಶಂಕರ್, ಮಣಿಪಾಲ ವೃತ್ತನಿರೀಕ್ಷಕ ಸುದರ್ಶನ, ಕೋಟ ಠಾಣಾಧಿಕಾರಿ ನರಸಿಂಹ ಶೆಟ್ಟಿ ಮತ್ತು ತನಿಖಾ ತಂಡದ ಅಧಿಕಾರಿಗಳು ಮಹಜರು ಸಂದರ್ಭ ಉಪಸ್ಥಿತರಿದ್ದರು.
ಜಿ.ಪಂ. ಸದಸ್ಯನ ರಾಜೀನಾಮೆಗೆ ಆಗ್ರಹ
ಕೊಲೆ ಆರೋಪದಡಿ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಉಡುಪಿ ಜಿ.ಪಂ. ಕೋಟ ಕ್ಷೇತ್ರದ ಸದಸ್ಯ, ಬಿಜೆಪಿಯ ರಾಘವೇಂದ್ರ ಕಾಂಚನ್ ತತ್ಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕೋಟ ಬ್ಲಾಕ್ ಕಾಂಗ್ರೆಸ್ ಫೆ.11ರಂದು ಬೆಳಗ್ಗೆ ಕೋಟ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.