ಲಷ್ಕರ್ ಉಗ್ರನ ಎಸ್ಕೇಪ್ ಮಾಡಿಸಿದ್ದ ಹಿಲಾಲ್ ಎನ್ಕೌಂಟರ್ಗೆ ಬಲಿ
Team Udayavani, Feb 13, 2019, 12:30 AM IST
ಶ್ರೀನಗರ: ಭದ್ರತಾ ಪಡೆಗೆ ಸಿಕ್ಕ ಮಹತ್ವದ ಯಶಸ್ಸು ಎಂಬಂತೆ, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಹಿಲಾಲ್ ಅಹ್ಮದ್ ರಥೇರ್ನನ್ನು ಮಂಗಳವಾರ ಹೊಡೆದುರುಳಿಸಲಾಗಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಈತನನ್ನು ಹತ್ಯೆಗೈಯಲಾಗಿದೆ ಎಂದು ಭದ್ರತಾ ಪಡೆ ಮಾಹಿತಿ ನೀಡಿದೆ. ಈ ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಕಳೆದ ವರ್ಷ ಶ್ರೀನಗರದ ಆಸ್ಪತ್ರೆಯಿಂದ ಲಷ್ಕರ್-ಎ-ತೊಯ್ಬಾ ಉಗ್ರ ನವೀದ್ ಜಟ್ನನ್ನು ಎಸ್ಕೇಪ್ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವನೇ ಈ ಹಿಲಾಲ್ ಅಹ್ಮದ್. ತಪಾಸಣೆಗಾಗಿ ಜಟ್ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರ ಕಣ್ಣಿಗೆ ಮಣ್ಣೆರಚಿ ಹೇಗೆ ಆತನನ್ನು ಪರಾರಿಯಾಗಿಸುವುದು ಎಂಬ ಬಗ್ಗೆ ಸಂಪೂರ್ಣ ಸಂಚು ರೂಪಿಸಿದ್ದು ಈತನೇ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಈತನಿಗಾಗಿ ಹಲವು ತಿಂಗಳುಗಳಿಂದ ಭದ್ರತಾ ಪಡೆ ಬಲೆಬೀಸಿತ್ತು. ಮಂಗಳವಾರ ಈತನ ಇರುವಿಕೆ ಬಗ್ಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದಾಗ, ಉಗ್ರರು ಗುಂಡು ಹಾರಿಸಿದ್ದು, ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು. ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಯೋಧ ಬಲ್ಜೀತ್ ಸಿಂಗ್ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ.