ಮಾ. 1: ಕಡಬ, ಮೂಡುಬಿದಿರೆ ತಾಲೂಕು ಉದ್ಘಾಟನೆ
Team Udayavani, Feb 20, 2019, 1:00 AM IST
ಮಂಗಳೂರು: ಕಡಬ, ಮೂಡುಬಿದಿರೆ ತಾಲೂಕುಗಳ ಉದ್ಘಾಟನೆಯನ್ನು ಮಾ. 1ರಂದು ಕಂದಾಯ ಸಚಿವರು ನೆರವೇರಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ ಕರಾವಳಿ ಭಾಗದ ಕಂದಾಯ ಇಲಾಖೆಯ ಸಭೆ ನಡೆಯಲಿದೆ. ಸುರತ್ಕಲ್ ಟೋಲ್ಗೇಟ್ ವಿಚಾರ ವಾಗಿಯೂ ಈ ವೇಳೆ ಮಾತುಕತೆ ನಡೆಸಲಾಗುವುದು ಎಂದು ಖಾದರ್ ತಿಳಿಸಿದರು.
ಮಾಣಿಲದಿಂದ ಸರಕಾರಿ ಬಸ್
ಮಾಣಿಲ-ಧರ್ಮಸ್ಥಳ, ಮಾಣಿಲ-ಸುಬ್ರಹ್ಮಣ್ಯ, ಮಾಣಿಲ-ಪುತ್ತೂರು ನಡುವೆ ಸರಕಾರಿ ಬಸ್ ಬೇಕೆಂಬ ಬೇಡಿಕೆ ಇತ್ತು. ಇದೀಗ ಈ ಸ್ಥಳಗಳಿಗೆ ಬಸ್ ಕಲ್ಪಿಸುವ ಸಂಬಂಧ ಸರಕಾರಿ ಮಟ್ಟದಲ್ಲಿ ಒಪ್ಪಿಗೆ ದೊರೆತಿದ್ದು, ತತ್ಕ್ಷಣ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಅಹವಾಲು ಸ್ವೀಕಾರ ಸಭೆ
ತಾಲೂಕು ಮಟ್ಟದ ಅಹವಾಲು ಸ್ವೀಕಾರ ಮತ್ತು ಪ್ರಗತಿ ಪರಿಶೀಲನ ಸಭೆಯನ್ನು ಫೆ. 20ರಿಂದ 23ರ ತನಕ ಹಮ್ಮಿಕೊಳ್ಳಲಾಗಿದೆ. 20ರಂದು ಬೆಳಗ್ಗೆ 9ರಿಂದ 10ರ ತನಕ ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಅಹವಾಲು ಸ್ವೀಕಾರ, 10ರಿಂದ ತಾ.ಪಂ.ನಲ್ಲಿ ಕೆಡಿಪಿ ಸಭೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಅಹವಾಲು ಸ್ವೀಕಾರ, 4ಕ್ಕೆ ಪ್ರಗತಿ ಪರಿಶೀಲನ ಸಭೆ ನಡೆಯಲಿದೆ. 21ರಂದು ಬೆಳಗ್ಗೆ 8ರಿಂದ ಬೆಳ್ತಂಗಡಿಯಲ್ಲಿ ಅಹವಾಲು ಸ್ವೀಕಾರ, 10ರ ನಂತರ ತಾಲೂಕು ಕಚೇರಿಯಲ್ಲಿ ಪ್ರಗತಿ ಪರಿಶೀಲನ ಸಭೆ, ಮಧ್ಯಾಹ್ನ 3ಕ್ಕೆ ಬಂಟ್ವಾಳದಲ್ಲಿ ಪ್ರಗತಿ ಪರಿಶೀಲನಸಭೆ ನಡೆಯಲಿದೆ. 23ರಂದು ಬೆಳಗ್ಗೆ 9ರಿಂದ ಮೂಡಬಿದಿರೆಯಲ್ಲಿ ಅಹವಾಲು ಸ್ವೀಕಾರ, 10ಕ್ಕೆ ಪ್ರಗತಿ ಪರಿಶೀಲನ ಸಭೆ, 11.30ಕ್ಕೆ ಮೂಲ್ಕಿಯಲ್ಲಿ ಅಹವಾಲು ಸ್ವೀಕಾರ, ಮಧ್ಯಾಹ್ನ 3ಕ್ಕೆ ಮಂಗಳೂರು ಮನಪಾದಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಫೆ. 26: ವಿ.ವಿ. ಕಾಲೇಜು ಕಟ್ಟಡ ಉದ್ಘಾಟನೆ
ಮಂಗಳೂರು ವಿ.ವಿ. ಕಾಲೇಜಿನ ನೂತನ ಕಟ್ಟಡ, ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡ ಫೆ. 26ರಂದು ಉದ್ಘಾಟನೆಗೊಳ್ಳಲಿವೆ ಎಂದರು.
ಫೆ. 22: ಟರ್ಮಿನಲ್ ಕಟ್ಟಡಕ್ಕೆ ಶಿಲಾನ್ಯಾಸ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಫೆ. 22ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಕೇಂದ್ರ ಸಚಿವ ಸುರೇಶ್ ಪ್ರಭು ಹೊಸದಿಲ್ಲಿಯಿಂದ ವೀಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಲಿದ್ದಾರೆ.