ಪ್ರಚಾರದಿಂದ ಮೋದಿ ವಿಮುಖರಾಗರು!
Team Udayavani, Mar 2, 2019, 12:30 AM IST
ಧುಲೆ: ತಮ್ಮ ಪರವಾಗಿ ಪ್ರಚಾರ ಮಾಡಿಕೊಳ್ಳುವ ಕೆಲಸದಿಂದ ಪ್ರಧಾನಿ ನರೇಂದ್ರ ಮೋದಿ ಐದು ನಿಮಿಷಗಳಷ್ಟೂ ಬಿಡುವನ್ನು ಪಡೆಯುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಪುಲ್ವಾಮಾ ದಾಳಿ ಬಳಿಕ ಕೇಂದ್ರಕ್ಕೆ ಬೆಂಬಲ ನೀಡುತ್ತಿರುವ ಹೊರತಾಗಿಯೂ ಪಕ್ಷವನ್ನು ಟೀಕಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ವಾಗ್ಧಾಳಿ ನಡೆಸಿದ್ದಾರೆ. ಧುಲೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡಿದ ಅವರು, “ಪಕ್ಷದ ನಾಯಕರಿಗೆ ವಿನಾ ಕಾರಣ ಸರಕಾರದ ವಿರುದ್ಧ ಟೀಕೆ ಮಾಡಬೇಡಿ ಎಂದು ಹೇಳಿದ್ದೆ. ಈ ಹೋರಾಟದಲ್ಲಿ ದೇಶವೇ ಮೊದಲು ಎಂದು ಹೇಳಿದ್ದೆ. ಆದರೆ, ಇತ್ತೀಚೆಗೆ, ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ, “”ಪುಲ್ವಾಮಾ ಘಟನೆಯ ನಂತರ ದೇಶದ ಸುರಕ್ಷತೆಯ ವಿಚಾರದಲ್ಲಿ ಇಡೀ ದೇಶವೇ ಒಗ್ಗೂಡಿದೆ ಎಂದು ಹೇಳಿದರು. ಆದರೆ, ಅದರ ಬೆನ್ನಿಗೇ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಆರಂಭಿಸಿದರು. ಅದೇ ನಮಗೂ ಅವರಿಗೂ ಇರುವ ವ್ಯತ್ಯಾಸ” ಎಂದರು ರಾಹುಲ್. ಇತ್ತೀಚೆಗೆ, ರಾಷ್ಟ್ರೀಯ ಯುದ್ಧ ಸ್ಮಾರಕ ಉದ್ಘಾಟನಾ ವೇಳೆಯೂ ಕಾಂಗ್ರೆಸ್ ಮೇಲೆ ಪ್ರಧಾನಿ ಮುಗಿಬಿದ್ದಿದ್ದರು. ಎಲ್ಲಾ ಅವಕಾಶಗಳನ್ನು ತಮ್ಮ ಪರ ಬಳಸಿಕೊಳ್ಳಲು, ವಿಪಕ್ಷಗಳನ್ನು ಹಳಿಯಲು ಪ್ರಧಾನಿ ಬಳಸಿಕೊಳ್ಳುತ್ತಾರೆ ಎಂದು ರಾಹುಲ್ ಹೇಳಿದರು.