ಎಸ್ಸೆಸ್ಸೆಂ ಸ್ಪರ್ಧಿಸುವುದು ಖಚಿತ
Team Udayavani, Mar 18, 2019, 1:23 AM IST
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧಿಸುವುದು ಖಚಿತ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದು, ದಾವಣಗೆರೆ ಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಕ್ಷದ ಹೈಕಮಾಂಡ್ ನಮ್ಮ ಕುಟುಂಬದವರಿಗೆ ಟಿಕೆಟ್ ನೀಡುವ ಭರವಸೆ ನೀಡಿತ್ತು. ಜೊತೆಗೆ, ಸ್ಪರ್ಧೆ ಮಾಡುವಂತೆ ಹೇಳಿತ್ತು. ನಾನು ಇಲ್ಲ ಅಂದರೆ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧೆ ಮಾಡುವ ಬಗ್ಗೆ ಜನರಲ್ಲಿ ಗೊಂದಲ ಇತ್ತು. ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧಿಸುವುದು ಖಚಿತ. ಇಷ್ಟರಲ್ಲೇ ಪಕ್ಷದಿಂದ ಅಧಿಕೃತ ಘೋಷಣೆ ಆಗಲಿದೆ’ ಎಂದರು.
“ಎಸ್.ಎಸ್.ಮಲ್ಲಿಕಾರ್ಜುನ್ ಅವರೇ ಸ್ಪರ್ಧಿಸುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಎಸ್.ಎಸ್.ಮಲ್ಲಿಕಾರ್ಜುನ್ ಪರ ಪ್ರಚಾರವೂ ಪ್ರಾರಂಭವಾಗಿದೆ. ನಮ್ಮ ಪಕ್ಷದ ಗೆಲುವು ಖಚಿತ’ ಎಂದು ತಿಳಿಸಿದರು.