ಅಪ್ರಾಪ್ತೆ ಅತ್ಯಾಚಾರ: ಮೂವರ ಬಂಧನ
Team Udayavani, Apr 2, 2019, 5:00 AM IST
ಬೆಂಗಳೂರು: ಅಪ್ರಾಪ್ತೆ ಮೆಲೆ ಅತ್ಯಾಚಾರ ಎಸಗಿದ ಮೂವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿಗಳಾದ ಹರೀಶ್ಕುಮಾರ್ (22) ವೆಂಕಟಾಚಲಪತಿ (19) ಬಿಪಿನ್ ಅಸಾದುಲ್ಲಾ ಖಾನ್ (22) ಬಂಧಿತರು.
ಸಂತ್ರಸ್ತೆ ಭಾನುವಾರ ರಾತ್ರಿ 8.30ರ ಸುಮಾರಿಗೆ ಅಂಗಡಿಗೆ ತೆರಳುತ್ತಿದ್ದ ವೇಳೆ ಹಿಂದೆ ಬಂದ ಹರೀಶ್, ಮಾತನಾಡಲು ಕರೆದಿದ್ದಾನೆ. ಈ ವೇಳೆ ಬಾಲಕಿ ಆತನೊಂದಿಗೆ ಮಾತನಾಡಲು ನಿರಾಕರಿಸಿದ್ದಾಳೆ. ಬಳಿಕ ಆರೋಪಿ ತನ್ನ ಇಬ್ಬರು ಸ್ನೇಹಿತರಾದ ವೆಂಕಟಾಚಲಪತಿ ಹಾಗೂ ಬಿಪಿನ್ನನ್ನು ದೂರವಾಣಿ ಕರೆ ಮಾಡಿ ಕರೆಸಿಕೊಂಡು, ಅಪ್ರಾಪ್ತೆಯನ್ನು ಸಮೀಪದ ನೀಲಗಿರಿ ತೋಪಿಗೆ ಎಳೆದೊಯ್ಯು ಅತ್ಯಾಚಾರ ಎಸಗಿದ್ದಾರೆ.
ಇದೇ ವೇಳೆ ಮಹಿಳೆಯೊಬ್ಬರು ಶೌಚಕ್ಕಾಗಿ ತೋಪಿಗೆ ಬಂದಿದ್ದು, ಅಪ್ರಾಪ್ತೆಯ ಕಿರುಚಾಟ ಕೇಳಿ ಅಲ್ಲಿಗೆ ತೆರಳುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಮಹಿಳೆ, ಬಲಕಿಯನ್ನು ಮನೆಗೆ ಕರೆತಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ತೆರಳಿದ ಕಾಡುಗೋಡಿ ಪೊಲೀಸರು, ಸಂತ್ರಸ್ತೆಯಿಂದ ಆರೋಪಿಗಳ ಮಾಹಿತಿ ಪಡೆದಿದ್ದಾರೆ. ನಂತರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸಂತ್ರಸ್ತ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕ್ಯಾಬ್ ಚಾಲನಾಗಿರುವ ಆರೋಪಿ ಹರೀಶ್, ಹಲವು ದಿನಗಳಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ. ಉಳಿದ ಇಬ್ಬರು ಆರೋಪಿಗಳ ಜತೆ ದೂರವಾಣಿಯಲ್ಲಿ ಮಾತನಾಡಿ, ಸಂತಸ್ತೆಯನ್ನು ಎಳೆದೊಯ್ಯಲು ನಿರ್ಧರಿಸಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿ ತಿಳಿಸಿದರು.