ಕೈರಂಗಳ ನಾರಾಯಣ ಹೊಳ್ಳರಿಗೆ ಸಮ್ಮಾನ
Team Udayavani, Apr 9, 2019, 6:30 AM IST
ಮಂಜೇಶ್ವರ : ಮೀಯಪದವು ಬೆಜ್ಜ ಶ್ರೀ ಧೂಮಾವತೀ ಬಂಟ ದೈವಸ್ಥಾನದ ಜಾತ್ರೋತ್ಸವ ಸುಸಂದರ್ಭದಲ್ಲಿ ಉದ್ಯಮಿ ಮೋಹನ ಹೆಗ್ಡೆ ಬೆಜ್ಜ ಅವರ ನೇತೃತ್ವದ “ರಾಮಚಂದ್ರ ಹೆಗ್ಡೆ ವೇದಿಕೆ ಬೆಜ್ಜ’ ವತಿಯಿಂದ 27ನೇ ವರ್ಷದ ಯಕ್ಷೊತ್ಸವ ಸಂಭ್ರಮದಿಂದ ಜರಗಿತು.
ಸಾಲಿಗ್ರಾಮ ಮೇಳದವರಿಂದ “ಕಸ್ತೂರಿ ತಿಲಕ ‘ ಯಕ್ಷಗಾನ ಬಯಲಾಟ ಹಾಗೂ ತೆಂಕು ತಿಟ್ಟಿನ ಹಿರಿಯ ಕಲಾವಿದರೂ ಸಂಘಟಕರೂ ಆಗಿರುವ ಕೈರಂಗಳ ನಾರಾಯಣ ಹೊಳ್ಳರಿಗೆ ರಾಮಚಂದ್ರ ಹೆಗ್ಡೆ ವೇದಿಕೆಯ ವಾರ್ಷಿಕ ಸಮ್ಮಾನ ಗಣ್ಯರ ಸಮಕ್ಷಮ ಜರಗಿತು. ಇದೇ ಸಂದರ್ಭ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಲನಚಿತ್ರದಲ್ಲಿ ಅಭಿನಯಿಸಿದ ಸ್ಥಳೀಯ ಪ್ರತಿಭೆಗಳಾದ ನಾಗರಾಜ ಪದಕಣ್ಣಾಯ ಮೂಡಂಬೈಲು, ಯೋಗೀಶ ಶೆಟ್ಟಿ ದರ್ಮೆಮಾರ್ ಅವರನ್ನು ಅಭಿನಂದಿಸಲಾಯಿತು.
ಸಭಾ ಸಮಾರಂಭದ ಅಧ್ಯಕ್ಷತೆಯನ್ನು ಕೇರಳ ಪಾರ್ತಿಸುಬ್ಬ ಯಕ್ಷಗಾನ ಕೇಂದ್ರದ ಮಾಜಿ ಅಧ್ಯಕ್ಷರಾದ ಶಂಕರ ರೈ ಮಾಸ್ತರ್ ವಹಿಸಿದ್ದರು. ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಅಜಿತ್ ಕುಮಾರ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣಗೈದು ಸಮ್ಮಾನಿತರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕರಾದ ಸತೀಶ ಅಡಪ ಸಂಕಬೈಲು ಕಾರ್ಯಕ್ರಮ ನಿರ್ವಹಿಸಿದ್ದು, ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ, ರಾಮಚಂದ್ರ ಹೆಗ್ಡೆ ವೇದಿಕೆಯ ಅಧ್ಯಕ್ಷರಾದ ಗೋವಿಂದ ಹೆಗ್ಡೆ ಬೆಜ್ಜ, ಸಂಚಾಲಕರಾದ ಮೋಹನ ಹೆಗ್ಡೆ ಬೆಜ್ಜ, ಸದಸ್ಯರಾದ ಕಿಶನ್ ಹೆಗ್ಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.