ಹಳೇ ವೈಷಮ್ಯ: ಯುವಕನ ಕೊಲೆ
Team Udayavani, Apr 13, 2019, 3:00 AM IST
ಬೆಂಗಳೂರು: ಐದು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಯುವಕನನ್ನು ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಇರಿದು ಕೊಲೆಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಭರತ್ (20) ಕೊಲೆಯಾದ ಯುವಕ. ಅಪರಾಧಿಕ ಕೃತ್ಯವೊಂದರ ಆರೋಪದಲ್ಲಿ ಜೈಲು ಸೇರಿದ್ದ ಭರತ್ ಐದು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ.
ಕಾಳಿದಾಸ ಸರ್ಕಲ್ ಬಳಿ ಮನೆಯಲ್ಲಿದ್ದಾಗ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಏಕಾಏಕಿ ಮನೆಗೆ ನುಗ್ಗಿ ಚಾಕುವಿನಿಂದ ಭರತ್ಗೆ ಇರಿದು ಪರಾರಿಯಾಗಿದ್ದಾರೆ.ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಕೊಲೆಯಾದ ಭರತ್ ಸ್ಥಳೀಯ ರೌಡಿ ಗ್ಯಾಂಗ್ ಜತೆ ಗುರ್ತಿಸಿಕೊಂಡಿದ್ದು, ಹಳೆ ವೈಷಮ್ಯದಿಂದ ಕೊಲೆಯಾಗಿರುವ ಸಾಧ್ಯತೆಯಿದೆ. ಆರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.