ಹಾರ್ದಿಕ್ ಯಾರು? ಗುಜರಾತ್ನ ಹಿಟ್ಲರ್? ಕಪಾಳಮೋಕ್ಷ ಮಾಡಿದ್ದ ತರುಣ್ ಗಜ್ಜರ್ ಪ್ರಶ್ನೆ
Team Udayavani, Apr 19, 2019, 4:22 PM IST
ಅಹ್ಮದಾಬಾದ್ : ಗುಜರಾತ್ನ ಸುರೇಂದ್ರನಗರ ಜಿಲ್ಲೆಯ ವಾಧ್ವಾನ್ ತಾಲೂಕಿನ ಬಲ್ಡಾನಾ ಗ್ರಾಮದಲ್ಲಿ ಇಂದು ಶುಕ್ರವಾರ ರಾಲಿ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು ತರುಣ್ ಗಜ್ಜರ್ ಎಂದು ಗುರುತಿಸಲಾಗಿದೆ.
ಪಾಟಿದಾರ್ ಆಂದೋಲನದ ವೇಳೆ ಗುಜರಾತನ್ನು ತನಗೆ ಬೇಕೆಂದಾಗ ಬಂದ್ ಮಾಡಿಸುತ್ತಿದ್ದ ಹಾರ್ದಿಕ್ ಪಟೇಲ್ “ಗುಜರಾತ್ನ ಹಿಟ್ಲರಾ ?’ ಎಂದು ತರುಣ್ ಗಜ್ಜರ್ ಪ್ರಶ್ನಿಸಿದ್ದಾನೆ.
ಗುಜರಾತ್ನಲ್ಲಿ ಹಾರ್ದಿಕ್ ಪಟೇಲ್ ನಡೆಸಿದ್ದ ಪಾಟೀದಾರ್ ಮೀಸಲಾತಿ ಆಂದೋಲನದ ವೇಳೆ ನಡೆದಿದ್ದ ಬಂದ್ ನಿಂದಾಗಿ ತನ್ನ ಗರ್ಭಿಣಿ ಪತ್ನಿ, ಅಸ್ವಸ್ಥ ಮಗುವಿಗೆ ಚಿಕಿತ್ಸೆ , ಔಷಧಿ ದೊರಕಿಸಲು ತಾನು ಪಟ್ಟಿದ್ದ ಪಾಡಿಗಾಗಿ ಗಜ್ಜರ್, ಹಾರ್ದಿಕ್ ಗೆ ಬುದ್ಧಿ ಕಲಿಸಲು ಪಣತೊಟ್ಟಿದ್ದ. ಆ ಪ್ರಕಾರ ಆತ ಇಂದು ಹಾರ್ದಿಕ್ಗೆ ಸಿಟ್ಟಿನ ಆವೇಶದಲ್ಲಿ ಕಪಾಳ ಮೋಕ್ಷ ಮಾಡಿದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿರುವ ಗಜ್ಜರ್, ಯಾವುದೇ ಪಕ್ಷಕ್ಕೆ ಸೇರಿದವನಲ್ಲ; ಆತನೊಬ್ಬ ಸಾಮಾನ್ಯ ಪ್ರಜೆ. ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.