ರಾಸಾಯನಿಕ ಬಳಸಿ ಮಾವಿನಹಣ್ಣು ಮಾಡದಿರಿ
Team Udayavani, May 15, 2019, 2:47 PM IST
ಅರಸೀಕೆರೆ: ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಹಾಗೂ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಿ ಮಾವಿನಕಾಯಿಗಳನ್ನು ಕೃತಕವಾಗಿ ಹಣ್ಣು ಮಾಡಿ ಮಾರಾಟ ಮಾಡುವ ಹಣ್ಣುಗಳಿಂದ ಮನುಷ್ಯನ ರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ದೂರಿನ ಹಿನ್ನಲೆಯಲ್ಲಿ ತಹಶೀಲ್ದಾರ್ ಹಾಗೂ ತಾಲೂಕು ಆಹಾರ ಸುರಕ್ಷತಾಧಿಕಾರಿ ಡಾ.ಜಿ.ಎಸ್ ನಾಗಪ್ಪ ಜಂಟಿ ಕಾರ್ಯಚರಣೆ ನಡೆಸುವ ಮೂಲಕ ನಗರದಲ್ಲಿನ ಮಾವಿನಕಾಯಿ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ಪರಿಶೀಲನೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ನಗರದ ಹುಳಿಯಾರ್ ರಸ್ತೆ ಹಾಗೂ ಮಟನ್ ಮಾರ್ಕೆಟ್ ರಸ್ತೆಯಲ್ಲಿರುವ ಮಾವಿನಹಣ್ಣುಗಳ ಸಗಟು ಮಾರಾಟ ಮಳಿಗೆಗಳಿಗೆ ತಹಶೀಲ್ದಾರ್ ಸಂತೋಷಕುಮಾರ್ ಮತ್ತು ತಾಲೂಕು ಆಹಾರ ಸುರಕ್ಷತಾಧಿಕಾರಿಗಳಾದ ಡಾ.ಜಿ.ಎಸ್ ನಾಗಪ್ಪ ಮತ್ತು ತಂಡದೊಂದಿಗೆ ದಿಢೀರ್ ಭೇಟಿ ನೀಡಿ ಕೃತಕವಾಗಿ ವಿಷಕಾರಿ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಿ ಮಾವಿನ ಕಾಯಿಗಳನ್ನು ಕೃತಕವಾಗಿ ಹಣ್ಣುಗಳನ್ನು ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದರು.
ಮಾಲೀಕರಿಗೆ ಎಚ್ಚರಿಕೆ: ಮಾವಿನ ಕಾಯಿಗಳಿಗೆ ವಿಷಕಾರಿ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿ ಅವುಗಳನ್ನು ಕೃತಕ ರೀತಿಯಲ್ಲಿ ಹಣ್ಣು ಮಾಡದಂತೆ ಮಾಲಿಕರಿಗೆ ಎಚ್ಚರಿಕೆ ನೀಡಿದರು.
ಈ ರೀತಿಯ ಪ್ರಕರಣಗಳಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಗಳ ಬಗ್ಗೆ ತಿಳಿಸಿದ ಅವರು ಕೊಳೆತ ಹಣ್ಣುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿವಂತೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಚತೆ ಕಾಪಾಡಲು ಸೂಚಿಸಿದರು.
ಪರವಾನಗಿ ಅಗತ್ಯ: ಈಗಾಗಲೇ ಅಂಗಡಿ ಮಾಲೀಕರು ನಗರ ಸಭೆಯವತಿಯಿಂದ ಪರವಾನಗಿ ಪಡೆದಿದ್ದರೂ ಸಹ ಕಡ್ಡಾಯವಾಗಿ ಆಹಾರ ಸುರಕ್ಷತೆಗೆ ಸಂಬಂಧಿಸಿದ ಇಲಾಖೆವತಿಯಿಂದ ಅಧಿಕೃತ ಪರವಾನಗಿ ಪಡೆಯದೇ ವ್ಯಾಪಾರ ನಡೆಸಿದರೆ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಂಡು ದಂಡ ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು ಹರಡುವ ಸಾಧ್ಯತೆ ಇದ್ದು, ವಿಷಪೂರಿತ ರಾಸಾಯನಿಕ ಬಳಸಿ ಮಾವಿನ ಹಣ್ಣು ಮಾಡುವುದು ಅಪರಾದವಾಗಿದ್ದು, ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಕೃತಕ ಹಣ್ಣುಗಳ ತಯಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾಲೂಕು ಆಡಳಿತ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸುತ್ತಿದೆ. ಮಾವಿನ ಹಣ್ಣುಗಳ ಸಾಂಪಲ್ ಪಡೆದಿದ್ದು, ಇದನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಲಾಗುತ್ತದೆ. ರಾಸಾಯನಿಕ ವಸ್ತುಗಳನ್ನು ಬಳಸಿ ಕೃತಕವಾಗಿ ಹಣ್ಣುಗಳನ್ನು ಮಾಡಿದ್ದರೆ ಅಂತಹವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು. ಪರಿಶೀಲನಾ ತಂಡದಲ್ಲಿ ಕಂದಾಯ ಇಲಾಖೆಯ ಅಧಿಕಾರಿ ಮಂಜುನಾಥ್ , ಆರೋಗ್ಯ ಇಲಾಖೆ ನಿರೀಕ್ಷಕರಾದ ಜಬ್ಬೀರ್ ಪಾಷಾ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.