ಮೇ ಅಂತ್ಯಕ್ಕೆ ವಿಸ್ತರಿತ ಕಲ್ಸಂಕ ಸೇತುವೆ ಸಂಚಾರಕ್ಕೆ ಮುಕ್ತ
Team Udayavani, May 17, 2019, 6:20 AM IST
ಉಡುಪಿ: ನಗರದ ಬಹುದಿನದ ಬೇಡಿಕೆಯಾದ ಕಲ್ಸಂಕ ಸೇತುವೆ ವಿಸ್ತರಣೆ ಕಾಮಗಾರಿ ಶೇ.100 ಪೂಣಗೊಂಡಿದ್ದು, ಮುಂದಿನ 15ದಿನದೊಳಗೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಕಳೆದ ವಿಧಾನಸಭೆ ಚುನಾವಣೆಗೂ ಮೊದಲು ಆರಂಭಗೊಂಡಿದ್ದ ಕಾಮಗಾರಿ ಮಳೆಗಾಲ ಹಾಗೂ ನಗರಸಭೆ ಚುನಾವಣೆಯಿಂದಾಗಿ ಸಾಕಷ್ಟು ವಿಳಂಬವಾಗಿತ್ತು. ಆದರೆ ಲೋಕಾಸಭೆ ಚುನಾವಣೆಯ ಸಂದರ್ಭ ಯಾವುದೇ ಅಡ್ಡಿಯಿಲ್ಲದೆ ಕಾಮಗಾರಿ ನಡೆದಿದ್ದು, ಕೊನೆ ಹಂತಕ್ಕೆ ತಲುಪಿದೆ.
ಸಂಚಾರ ದಟ್ಟಣೆ ಸಮಸ್ಯೆ
ಕಲ್ಸಂಕ ಉಡುಪಿ ನಗರದಿಂದ -ಮಣಿಪಾಲ, ಅಂಬಾಗಿಲು, ಗುಂಡಿಬೈಲು, ದೊಡ್ಡಣಗುಡ್ಡೆ ಹಾಗೂ ಶ್ರೀ ಕೃಷ್ಣಮಠಕ್ಕೆ ಸಂಪರ್ಕ ಕಲ್ಪಿಸುವ ರಾ.ಹೆ. (169ಎ)ಯಲ್ಲಿ ಬರುವ ಪ್ರಮುಖ ವೃತ್ತ. ಈ ವೃತ್ತ ಅಡಿಯಿಂದ ಇಂದ್ರಾಣಿ ತೀರ್ಥ (ಕಲ್ಸಂಕ ತೋಡು) ಹೊಳೆ ಸಾಗುವುದರಿಂದ ತೋಡಿಗೆ ಸೇತುವೆ ನಿರ್ಮಿಸಲಾಗಿದೆ. ಕಿರಿದಾದ ಸೇತುವೆಯಿಂದ ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಎದುರಿಸಬೇಕಾಗಿತ್ತು.
75 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ
ಕಲ್ಸಂಕ ಸೇತುವೆ 75 ಲಕ್ಷ ರೂ. ವೆಚ್ಚದಲ್ಲಿ 13.8-9 ಅಡಿ ಉದ್ದ ಅಗಲಕ್ಕೆ ವಿಸ್ತರಿಸಲಾಗಿದೆ. ಹಿಂದೆ ಕಾಮಗಾರಿ ಸಂದರ್ಭ ತೋಡು ಕುಸಿತಗೊಂಡಿತು. ಈ ನಿಟ್ಟಿನಲ್ಲಿ ಕಾಮಗಾರಿಯ ಮುನ್ನೆಚ್ಚರಿಕೆ ಕ್ರಮವಾಗಿ ತೋಡಿನ ಎರಡು ಬದಿಯಲ್ಲಿ ಕಲ್ಲುಕಟ್ಟಿ ಪೊ›ಟೆಕ್ಷನ್ವಾಲ್ ನಿರ್ಮಿಸಿ ಹಂತ-ಹಂತದ ಕಾಮಗಾರಿ ಮಾಡಲಾಗಿದೆ. ಅನಂತರ ಪಿಲ್ಲರ್ ನಿರ್ಮಿಸಿ ಅದರ ಮೇಲೆ ಸ್ಲಾéಬ್ ಆಳವಡಿಸಿ ಕಾಂಕ್ರೀಟ್ ಮಾಡಲಾಗಿದೆ. ಇನ್ನೂ 15 ದಿನ ಕ್ಯೂರಿಂಗ್ ಪ್ರಕ್ರಿಯೆ ಮುಗಿಯಲಿದೆ.
ಸವಾರರಿಗೆ ನೆಮ್ಮದಿ
ಬೆಳಗ್ಗೆ, ಸಂಜೆ ಹಾಗೂ ವಾರಾಂತ್ಯದಲ್ಲಿ ಕಲ್ಸಂಕ ಮಾರ್ಗವಾಗಿ ಚಲಿಸುವುದೇ ಕಷ್ಟ. ಸೇತುವೆ ಅಗಲೀಕರಣದಿಂದ ವಾಹನ ಸವಾರರು ನೆಮ್ಮದಿಯಾಗಿ ಈ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.
-ರೀಮಾ ಡಿಸೋಜಾ, ಕಡಿಯಾಳಿ
ಈಗ ಸ್ಲಾéಬ್ ಕ್ಯೂರಿಂಗ್ ಪ್ರಕ್ರಿಯೆ
ಕಾಮಗಾರಿ ಸಂಪೂರ್ಣಗೊಂಡಿದೆ. ಇನ್ನೂ 15 ದಿನಗಳಲ್ಲಿ ಕಾಂಕ್ರೀಟ್ ಸ್ಲಾéಬ್ ಕ್ಯೂರಿಂಗ್ ಪ್ರಕ್ರಿಯೆ ಮುಗಿಯಲಿದೆ. ಅಷ್ಟರೊಳಗಾಗಿ ಸೇತುವೆ ಸೈಡ್ವಿಂಗ್ ತೆರವುಗೊಳಿಸಲಾಗುತ್ತದೆ.
-ಗಣೇಶ್, ಎಂಜಿನಿಯರ್, ನಗರಸಭೆ