ನೀರಿಲ್ಲದೇ ಶೌಚಾಲಯ ಬಳಕೆ ಬಂದ್
Team Udayavani, May 20, 2019, 3:14 PM IST
ಹಾವೇರಿ: ಜಿಲ್ಲೆಯನ್ನು ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತಗೊಳಿಸಿ ರಾಜ್ಯ ಪರಿಸರ ಇಲಾಖೆಯಿಂದ ‘ಪರಿಸರ ಪ್ರಶಸ್ತಿ’ ಪಡೆದ ಜಿಲ್ಲಾಡಳಿತದ ಸಾಧನೆಗೆ ಬರಗಾಲ ಕಪ್ಪುಚುಕ್ಕೆ ತಂದೊಂಡಿದೆ.
ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ನೀರಿನ ಕೊರತೆ ಕಾರಣದಿಂದ ಶೌಚಾಲಯಗಳು ಸಮರ್ಪಕ ಬಳಕೆಯಾಗುತ್ತಿಲ್ಲ. ಶೌಚಾಲಯದಲ್ಲಿ ಶೌಚ ಮಾಡಿದರೆ ಹೆಚ್ಚು ನೀರು ಬೇಕಾಗುತ್ತದೆ ಎಂಬ ಕಾರಣಕ್ಕೆ ಜನರು ಮತ್ತೆ ಬಯಲು ಬಹಿರ್ದೆಸೆಗೆ ಮುಂದಾಗಿದ್ದಾರೆ. ಇದರಿಂದ ಜಿಲ್ಲಾಡಳಿತದ ಬಯಲು ಬಹಿರ್ದೆಸೆ ಮುಕ್ತ ಸಾಧನೆಗೂ ಧಕ್ಕೆಯಾಗಿದೆ.
ಹಳ್ಳಿಗಳಲ್ಲಿ ಬೆಳಗಿನ ಸಮಯದಲ್ಲಿ ಬಹುತೇಕ ಗಂಡಸರು ಚೆಂಬು ಹಿಡಿದು ಹೊಲ, ಗದ್ದೆ, ಕೆರೆ, ಬಯಲು ಹುಡುಕಿಕೊಂಡು ಸಾಗಿದರೆ, ಸಂಜೆ ಕತ್ತಲು ಕವಿಯುತ್ತಿದ್ದಂತೆ ಮಹಿಳೆಯರು ಚೆಂಬು ಹಿಡಿದು ಸಾಗುತ್ತಾರೆ. ರಾತ್ರಿ ವೇಳೆಯಂತೂ ರಸ್ತೆಯಂಚುಗಳಲ್ಲಿ ಹತ್ತಾರು ಮಹಿಳೆಯರು ಚೆಂಬು ಹಿಡಿದು ಕುಳಿತುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.
ಈ ಹಿಂದೆ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತ ಆಂದೋಲನವೇ ಹಮ್ಮಿಕೊಂಡಿತ್ತು. ಪಟ್ಟಣ ಪ್ರದೇಶದಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಎಲ್ಲ ಸಿಬ್ಬಂದಿಗಳನ್ನು ಶೌಚಾಲಯ ನಿರ್ಮಾಣ ಹಾಗೂ ಜಾಗೃತಿಗಾಗಿ ನಿಯೋಜಿಸಿತ್ತು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಪಂಚಾಯಿತಿ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಸೇರಿದಂತೆ ಎಲ್ಲರನ್ನೂ ಈ ಆಂದೋಲನದಲ್ಲಿ ಬಳಸಿಕೊಂಡಿತ್ತು. ಹಾಗೂ ಜನರನ್ನು ಹತ್ತು ಹಲವು ರೀತಿಯಲ್ಲಿ ಮನವೊಲಿಸಿ ಮನೆಗೊಂದು ಶೌಚಾಲಯ ಕಟ್ಟಿಕೊಳ್ಳುವಂತೆ ಮಾಡಿತ್ತು. ಜಿಲ್ಲಾಡಳಿತದ ಈ ಕ್ರಮದಿಂದ ಜನ ಬಹಿರ್ದೆಸೆಗೆ ಬಯಲಿಗೆ ಹೋಗುವುದನ್ನು ಬಿಟ್ಟು ಶೌಚಾಲಯ ಕೋಣೆಯತ್ತ ಹೊರಟಿದ್ದರು. ಈಗ ನೀರಿನ ಸಮಸ್ಯೆಯಿಂದಾಗಿ ಮತ್ತೆ ಬಯಲಿನತ್ತ ಹೊರಟಿದ್ದಾರೆ.
1.95 ಲಕ್ಷ ಶೌಚಾಲಯ: 2012ರ ಬೇಸ್ಲೈನ್ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 1,95,974 ಕುಟುಂಬಗಳಿದ್ದು ಇವುಗಳಲ್ಲಿ ಈ ವರೆಗೆ 1,95,974 ಕುಟುಂಬಗಳು ಶೌಚಾಲಯ ಹೊಂದುವ ಮೂಲಕ ಶೌಚಾಲಯ ನಿರ್ಮಾಣದಲ್ಲಿ ನೂರಕ್ಕೆ ನೂರರಷ್ಟು ಸಾಧನೆಯಾಗಿದೆ. ಸಮೀಕ್ಷೆ ಮೊದಲು ಜಿಲ್ಲೆಯಲ್ಲಿ 63548 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದವು. ಈವರೆಗೆ ಹೊಸದಾಗಿ ಜಿಲ್ಲೆಯಲ್ಲಿ 1,32,426 ಶೌಚಾಲಯಗಳನ್ನು ಕಟ್ಟಲಾಗಿದ್ದು ಎಲ್ಲ ಕುಟುಂಬಗಳು ಈಗ ಶೌಚಾಲಯ ಹೊಂದಿದಂತಾಗಿದೆ. ಆದರೆ, ಬರಗಾಲದ ಈ ಸಂದರ್ಭದಲ್ಲಿ ಬಳಕೆ ಮರೀಚಿಕೆಯಾಗಿರುವುದು ವಿಪರ್ಯಾಸ.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 2.96ಲಕ್ಷ ಕುಟುಂಬಗಳಿದ್ದು 1.10ಲಕ್ಷ ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದಾರೆ. ಈ ಒಂದು ಲಕ್ಷ ಕುಟುಂಬಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಜನರು ಈಗ ಶೌಚಖಾನೆ ಬಿಟ್ಟು ಬಯಲು ಬಹಿರ್ದೆಸೆಗೆ ಹೊರಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ