ಲೋಕ ಫಲಿತಾಂಶ ನೋಡಿ ಜೆಡಿಎಸ್ ಮುಂದಿನ ತಂತ್ರ
Team Udayavani, May 23, 2019, 6:00 AM IST
ಬೆಂಗಳೂರು: ಲೋಕಸಭೆ ಫಲಿತಾಂಶ ನೋಡಿಕೊಂಡು ಮುಂದಿನ ಕಾರ್ಯತಂತ್ರ ರೂಪಿಸಲು ಜೆಡಿಎಸ್ ನಿರ್ಧರಿಸಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಕಡಿಮೆ ಸ್ಥಾನ ಬಂದರೆ ಸಮ್ಮಿಶ್ರ ಸರ್ಕಾರಕ್ಕೆ ಕುತ್ತು ಉಂಟಾಗಲಿದೆ ಎಂಬ ಮಾತುಗಳು ಇರುವುದರಿಂದ ಫಲಿತಾಂಶದ ನಂತರ ಎಚ್ಚರಿಕೆಯ ಹೆಜ್ಜೆ ಇಡಲು ತೀರ್ಮಾನಿಸಿದೆ.
ಮೇಲ್ನೋಟಕ್ಕೆ 28 ಕ್ಷೇತ್ರಗಳ ಪೈಕಿ ಸಂಖ್ಯಾಬಲಕ್ಕಿಂತ ಪ್ರಮುಖವಾಗಿ ತುಮಕೂರು, ಮಂಡ್ಯ, ಹಾಸನ, ಮೈಸೂರು ಕ್ಷೇತ್ರಗಳಲ್ಲಿನ ಫಲಿತಾಂಶವು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಭವಿಷ್ಯ ನಿರ್ಧರಿಸಲಿದೆ ಎಂದು ಹೇಳ ಲಾಗಿದೆ.
ಹೀಗಾಗಿ, ಆ ನಾಲ್ಕು ಕ್ಷೇತ್ರಗಳ ಫಲಿತಾಂಶ ನೋಡಿ ಕೊಂಡು ನಂತರ ಮುಂದಿನ ತಂತ್ರಗಾರಿಕೆ ರೂಪಿಸಬೇಕಾ ಗುತ್ತದೆ. ಒಂದೊಮ್ಮೆ ಅಲ್ಲೇನಾದರೂ ವ್ಯತ್ಯಾಸವಾದರೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂಬ ಅಭಿಪ್ರಾಯ ಜೆಡಿಎಸ್ ವಲಯದಲ್ಲಿದೆ. ಈ ನಡುವೆ, ಜೆಡಿಎಸ್ ಜತೆ ಬಿಜೆಪಿ ಸಂಪರ್ಕದಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಅದರ ಬಗ್ಗೆ ಸ್ಪಷ್ಟತೆ ದೊರೆಯುತ್ತಿಲ್ಲ. ಹೀಗಾಗಿ, ಫಲಿತಾಂಶದ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ನಾಯಕರಿಗೆ ತಾಕೀತು ಮಾಡಿದ್ದಾರೆ.
ಫಲಿತಾಂಶದ ನಂತರ ಮೇ 24ರಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಯಿದೆ.