ಕಾಂತಮಂಗಲ-ಅಜ್ಜಾವರ ರಸ್ತೆ ಡಾಮರು ಕಾಮಗಾರಿ ಆರಂಭ
ಮಳೆಗಾಲಕ್ಕೆ ಮೊದಲು 2 ಕಿ.ಮೀ. ರಸ್ತೆ ದುರಸ್ತಿ ಪೂರ್ಣಗೊಳಿಸುವ ಉದ್ದೇಶ
Team Udayavani, May 24, 2019, 6:00 AM IST
ಕಾಂತಮಂಗಲ-ಅಜ್ಜಾವರ ರಸ್ತೆ ಡಾಮರು ಕಾಮಗಾರಿಯ ನೋಟ.
ಅಜ್ಜಾವರ: ಹಲವು ವರುಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಶಿಥಿಲಗೊಂಡಿದ್ದ ಹಾಗೂ ರಾಜಕೀಯ ಸಮರಕ್ಕೆ ವೇದಿಕೆಯಾಗಿದ್ದ ಸುಳ್ಯ-ಅಜ್ಜಾವರ ರಸ್ತೆ ದುರಸ್ತಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಾಂತಮಂಗಲ- ಅಜ್ಜಾವರ ರಸ್ತೆಗೆ ಡಾಮರು ಕಾಮಗಾರಿ ಆರಂಭಿಸಲಾಗಿದೆ. ಸುಳ್ಯ-ಅಜ್ಜಾವರ- ಮಂಡೆ ಕೋಲು- ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಸಿಆರ್ಪಿಎಫ್ ಯೋಜನೆಯಡಿ 6 ಕೋಟಿ ರೂ. ವೆಚ್ಚದಲ್ಲಿ ಕಾಂತಮಂಗಲ ವೃತ್ತದಿಂದ ಅಜ್ಜಾವರ ಗ್ರಾಮದ ಅಡ³ಂಗಾಯ ತನಕ ಆರು ಕಿ.ಮೀ. ರಸ್ತೆಗೆ ಡಾಮರು ಕಾಮಗಾರಿ ಆರಂಭಿಸಲಾಗಿದೆ.
ಫೆಬ್ರವರಿ ಒಳಗೆ ಪೂರ್ಣ
ಮುಂದಿನ ಫೆಬ್ರವರಿ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನುವುದು ಇಲಾಖೆ ಮಾಹಿತಿ. ಅಲ್ಲಿಯ ತನಕ ಕಾಲಾವಕಾಶ ಇದೆ. ಮಳೆಗಾಲಕ್ಕಿಂತ ಮೊದಲು ಅಂದರೆ ಈ ತಿಂಗಳ ಒಳಗಡೆ 2 ಕಿ.ಮೀ. ರಸ್ತೆ ಪೂರ್ಣಗೊಳ್ಳಲಿದೆ. ಅನಂತರ ನಾಲ್ಕು ಕಿ.ಮೀ. ರಸ್ತೆ ವಿಸ್ತರಣೆ, ಸಮತಟ್ಟು ಕಾಮಗಾರಿ ನಡೆಯಲಿದೆ. ಮಳೆಗಾಲ ಕಳೆದ ಬಳಿಕ ಅದರ ಡಾಮರು ಕೆಲಸ ನಡೆಯುತ್ತದೆ ಎಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸ್ತುತ 3 ಮೀ. ಅಗಲವಿದ್ದ ರಸ್ತೆಯನ್ನು 5.5 ಮೀ. ಅಗಲಗೊಳಿಸುವ ಕಾಮಗಾರಿ ಪ್ರಗತಿಯಲ್ಲಿವೆ. ತಿರುವು ರಸ್ತೆ ಸುಧಾರಣೆ, ಖಾಸಗಿ ರಸ್ತೆ ಅಗಲ ಇತ್ಯಾದಿ ಕೆಲಸಗಳೂ ನಡೆಯುತ್ತಿವೆ.
ವ್ಯಥೆಗೆ ಮುಕ್ತಿ
ಸುಳ್ಯ – ಅಜ್ಜಾವರ ರಸ್ತೆ ನಿರ್ಮಾಣವಾಗಿ 20 ವರ್ಷಗಳಿಗೂ ಹೆಚ್ಚು ಕಾಲ ಸಂದಿದೆ. ಸುಮಾರು 6.5 ಕಿ.ಮೀ. ಉದ್ದವಿರುವ ಈ ರಸ್ತೆಗೆ ಡಾಮರು ಹಾಕಿ ಐದು ವರ್ಷಗಳು ಕಳೆದಿದ್ದವು. ಆ ಬಳಿಕ ಯಾವುದೇ ದುರಸ್ತಿ ಕಂಡಿರಲಿಲ್ಲ. ರಸ್ತೆಯ ಡಾಮರು ಸಂಪೂರ್ಣ ಕಿತ್ತು ಹೋಗಿ ಗುಂಡಿ ಬಿದ್ದಿದ್ದವು. ಹೀಗಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾಡದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜಕೀಯ ಸಮರಕ್ಕೂ ವೇದಿಕೆಯಾಗಿತ್ತು. ಆದರೆ ರಸ್ತೆ ಕಾಮಗಾರಿ ಆರಂಭವಾಗಿದ್ದು ಜನರ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
8 ಕೋಟಿ ರೂ. ಅನುದಾನ
ಸುಳ್ಯ-ಕಾಂತಮಂಗಲ-ಅಜ್ಜಾವರ ಹಾಗೂ ಉಬರಡ್ಕ ರಸ್ತೆ ದುರಸ್ತಿಗೆ ಒಟ್ಟು 8 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಅಜ್ಜಾವರ ರಸ್ತೆ ಜಿ.ಪಂ. ವತಿಯಿಂದ ನಿರ್ಮಾಣಗೊಂಡಿದ್ದರೂ ನಿರ್ವಹಣೆಯ ಟೆಂಡರ್ ಅನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ವಹಿಸಲಾಗಿತ್ತು. ಕಳೆದ ವರ್ಷದ ಟೆಂಡರ್ ಹಲವು ಕಾರಣಗಳಿಂದ ಕೊನೆ ಹಂತದಲ್ಲಿ ಕ್ಯಾನ್ಸಲ್ ಆಗಿತ್ತು. ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ತಾಂತ್ರಿಕ ಇಲಾಖೆಯಿಂದ ಹಸುರು ನಿಶಾನೆ ಸಿಕ್ಕಿದೆ. ಸರಕಾರದ ಅನುಮೋದನೆಗೆ ಕಾಯಲಾಗುತ್ತಿದೆ. ಅಗ್ರಿಮೆಂಟ್ ನಮಗೆ ಲಭಿಸಿದರೆ ತತ್ಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಎರಡು ತಿಂಗಳ ಹಿಂದೆಯೇ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಅದರಂತೆಯೇ ಕಾಮಗಾರಿ ಭರದಿಂದ ನಡೆಯುತ್ತಿದೆ.
ಲಘು ವಾಹನ ಸಂಚಾರ
ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಕಾಂತಮಂಗಲ-ಅಜ್ಜಾವರ ರಸ್ತೆಯಲ್ಲಿ ಬಸ್ಸು, ಲಾರಿ ಮೊದಲಾದ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಲಘು ವಾಹನಗಳಲಾದ ಬೈಕು, ಕಾರು, ಆಟೋಗಳಂತಹ ವಾಹನಗಳು ಸಂಚರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರ್ಯಾಯ ಮಾರ್ಗವಾಗಿ ಅಜ್ಜಾವರ- ನಾರ್ಕೋಡು ಹಾಗೂ ಅಜ್ಜಾವರ ಅಡಾRರು ರಸ್ತೆಯಲ್ಲಿ ಸಂಚರಿಸಬಹುದು.
6 ಕಿ.ಮೀ. ರಸ್ತೆಗೆ ಡಾಮರು
ಕಾಂತಮಂಗಲ-ಅಜ್ಜಾವರ ರಸ್ತೆ ಡಾಮರು ಕಾಮಗಾರಿ ಆರಂಭಿಸಲಾಗಿದೆ. ಮಳೆಗಾಲಕ್ಕೆ ಮೊದಲು 2 ಕಿ.ಮೀ. ರಸ್ತೆಯನ್ನು ಡಾಮರು ಹಾಕಿ ಉಳಿದ 4 ಕಿ.ಮೀ. ರಸ್ತೆಯನ್ನು ಮುಂದಿನ ವರ್ಷ ಫೆಬ್ರವರಿ ಒಳಗಡೆ ಪೂರ್ತಿಗೊಳಿಸಲಾಗುವುದು.
– ನಾಗರಾಜ್, ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ
ಶಿವಪ್ರಸಾದ್ ಮಣಿಯೂರು