ಯೆ ಶಹರ್‌ ನಹೀಂ ಮೆಹಫಿಲ್‌ ಹೈ !

ದಿಲ್‌ವಾಲೋಂಕೀ ದಿಲ್ಲಿ

Team Udayavani, May 26, 2019, 6:00 AM IST

India-Old-Delhi-Spice-azz

ಖ್ಯಾತ ಗೀತರಚನಾಕಾರರಾದ ಪ್ರಸೂನ್‌ ಜೋಷಿಯವರ ಸಾಲುಗಳು ದಿಲ್ಲಿ ಶಹರದ ಮೋಡಿಗೆ ಇಲ್ಲಿ ತಲೆದೂಗುತ್ತಿದೆ. ಇದು ನಗರವಷ್ಟೇ ಅಲ್ಲ. ಒಂದು ಮೆಹಫಿಲ್ ಕೂಡ ಎನ್ನುತ್ತಿದ್ದಾರೆ ಕವಿ. ಮೆಹಫಿಲ್ ಎಂಬ ಅರೇಬಿಕ್‌ ಮೂಲದ ಪದಕ್ಕೊಂದು ಸುಂದರ ಅರ್ಥವಿದೆ. ಮೆಹಫಿಲ್ ಎಂದರೆ ಒಂದಷ್ಟು ಕಲಾರಾಧಕ ಅತಿಥಿ ಅಭ್ಯಾಗತರ ಮನರಂಜನೆಗಾಗಿ ಸಂಗೀತ, ನೃತ್ಯವೈಭವದ ಕಾರ್ಯಕ್ರಮಗಳನ್ನೊಳಗೊಂಡ ಪುಟ್ಟ ಜಾಗ. ಒಂದು ರೀತಿಯಲ್ಲಿ ಸಂಗೀತ, ನೃತ್ಯಗಳನ್ನು ಆಸ್ವಾದಿಸುವ ಅಭಿರುಚಿಯುಳ್ಳ ಶ್ರೀಮಂತರ, ಆಸಕ್ತರ ಪುಟ್ಟ ದರ್ಬಾರಿದ್ದಂತೆ. ಜೊತೆಗೆ ಹಿಂದೂಸ್ತಾನಿ ಸಂಗೀತ, ಗಝಲ್ಗಳನ್ನೊಂಡ ಸುಂದರ ಸಂಜೆ. ಪ್ಯಾರಿಸ್‌, ರೋಮ್‌ಗಳನ್ನೂ ಸೇರಿದಂತೆ ಕಲೆ ಮತ್ತು ಸೌಂದರ್ಯಾರಾಧಕರಿಗೆ ಜಗತ್ತಿನಾದ್ಯಂತ ಕೆಲ ಶಹರಗಳು ತೀವ್ರವಾಗಿ ಆಕರ್ಷಿಸಿದ್ದು ಹೊಸತೇನಲ್ಲ. ಹೀಗಿರುವಾಗ ಕಲಾಶ್ರೀಮಂತಿಕೆಯ ಇತಿಹಾಸವುಳ್ಳ ಮೋಹಕ ನಗರಿಯಾದ ದೆಹಲಿಯೂ ಕೂಡ ಕವಿಗಳಿಂದ, ಬರಹಗಾರರಿಂದ, ಇತಿಹಾಸಕಾರರಿಂದ ಪ್ರಶಂಸೆಗೊಳಗಾಗಿದ್ದು ಅಚ್ಚರಿಯೇನಲ್ಲ. ಈ ನಿಟ್ಟಿನಲ್ಲಿ ಪ್ರಸೂನ್‌ ಜೋಷಿಯವರು ದಿಲ್ಲಿಯನ್ನು ಮೆಹಫಿಲ್ಗೆ ಹೋಲಿಸಿರುವುದು ಅತ್ಯಂತ ಸೂಕ್ತವೂ ಹೌದು.

ದೆಹಲಿಯಲ್ಲಿ ವಾಸವೆಂದರೆ ಮೂರು ರಾಜ್ಯಗಳ ಪಾಲುದಾರಿಕೆಯಲ್ಲಿ ಸಿಗುವ ಪ್ಯಾಕೇಜ್‌ ಇದ್ದಂತೆ. ದೆಹಲಿಯನ್ನೊಳಗೊಂಡು ಅತ್ತ ಹರಿಯಾಣಾದ ಗುರುಗ್ರಾಮ ಮತ್ತು ಇತ್ತ ಉತ್ತರಪ್ರದೇಶದ ನೋಯ್ಡಾಗಳನ್ನು ಬಗಲಲ್ಲಿ ಹೊಂದಿದ್ದು ನ್ಯಾಷನಲ್ ಕ್ಯಾಪಿಟಲ್ ರೀಜನ್‌ (ಎನ್‌ಸಿಆರ್‌) ಎಂದು ಕರೆಯಲ್ಪಡುವ ಈ ಜೀವಕ್ಕೆ ಮೆಟ್ರೋ ವ್ಯವಸ್ಥೆಯದ್ದೇ ನರಗಳು. ನಮ್ಮ ಹಿಂದಿನ ಪೀಳಿಗೆಯ ಬಹಳಷ್ಟು ಮಂದಿ ಇಂದಿಗೂ ಡೆಲ್ಲಿ ನಹೀಂ ಬೇಟಾ… ಯೇ ದಿಲ್ಲಿ ಹೈ (ಡೆಲ್ಲಿ ಅಲ್ಲ ಮಗೂ… ಇದು ದಿಲ್ಲಿ) ಅಂತೆಲ್ಲಾ ಬಲು ಸ್ವಾರಸ್ಯಕರವಾಗಿ ಹೇಳುವುದು ಸಾಮಾನ್ಯ. ನಮ್ಮದು ದಿಲ್ವಾಲೋಂಕೀ ದಿಲ್ಲಿ ಎಂಬುದು ಅವರ ಅಭಿಮಾನದ ಮಾತು. ದಿಲ್ಲಿ ಹೃದಯವಂತರದ್ದು ಎಂಬರ್ಥದಲ್ಲಿ. ಇಂದಿನ ವಲಸೆ ಯುಗದಲ್ಲಿ ಸಾಂಸ್ಕೃತಿಕ ಕಲಸುಮೇಲೋಗರದಿಂದಾಗಿ ಹರಿಯಾಣಾದ ಒರಟುತನ, ದೆಹಲಿಯ ಸೌಂದರ್ಯ, ಉತ್ತರಪ್ರದೇಶದ ಚಾಲಾಕಿತನಗಳೆಲ್ಲವನ್ನೂ ಇಷ್ಟಿಷ್ಟೇ ತನ್ನಲ್ಲಿ ಆವರಿಸಿಕೊಂಡಿರುವ ಎನ್‌ಸಿಆರ್‌ ಕೊಂಚ ಭಿನ್ನವಾಗಿ ಕಾಣುವುದು ಸತ್ಯ. ಇನ್ನು ಎಲ್ಲಾ ಮಹಾನಗರಗಳಿಗೂ ಇರುವಂತೆ ದೆಹಲಿಗೂ ಕೂಡ ತನ್ನದೇ ಆದ ಸೌಂದರ್ಯ ಮತ್ತು ನಿಗೂಢತೆಗಳಿರುವುದು ಸಹಜ.

ದೆಹಲಿ ಶಹರದ ಕತೆ
ಖ್ಯಾತ ಲೇಖಕರಾದ ಖುಷ್ವಂತ್‌ ಸಿಂಗ್‌ ಸೇರಿದಂತೆ ಹಲವು ಲೇಖಕರು ತಮಗೆ ಕಂಡ ದೆಹಲಿಯ ಬಗ್ಗೆ ವಿಸ್ತಾರವಾಗಿ ಬರೆದಿರುವವರೇ. ಖುಷ್ವಂತ್‌ ಸಿಂಗ್‌ ತಮ್ಮ ಬದುಕಿನ ಹಲವು ವರ್ಷಗಳನ್ನು ದೆಹಲಿಯಲ್ಲೇ ಕಳೆದವರು. ಕಾಂಟ್ರಾಕ್ಟರ್‌ ಆಗಿದ್ದ ಖುಷ್ವಂತರ ತಂದೆ ಸೋಭಾ ಸಿಂಗ್‌ ದೆಹಲಿಯ ಆಯಕಟ್ಟಿನ ಭಾಗದ ಕೆಲ ಇಮಾರತ್ತುಗಳನ್ನು ಕಟ್ಟಿದವರೂ ಹೌದು. 1911ರಲ್ಲಿ ರಾಣಿಯೊಂದಿಗೆ ಭಾರತಕ್ಕೆ ಬಂದಿದ್ದ ಬ್ರಿಟಿಷ್‌ ರಾಜ ಜಾರ್ಜ್‌-5 ತಮ್ಮ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ವರ್ಗಾಯಿಸುವುದರ ಬಗೆಗಿನ ಘೋಷಣೆಯ ಜೊತೆಗೇ, ಶಹರ ನಿರ್ಮಾಣದ ಶುಭಾರಂಭವೆಂಬಂತೆ ಕಿಂಗ್ಸ್‌ ವೇ ಕ್ಯಾಂಪ್‌ ಎಂದು ಕರೆಯಲಾಗುವ ಪ್ರದೇಶದಲ್ಲಿ ಅಡಿಗಲ್ಲುಗಳನ್ನಿಟ್ಟಿದ್ದರು. ಆದರೆ, ಪ್ರಥಮ ವಿಶ್ವಯುದ್ಧದ ನಂತರ ಸ್ಥಳ ಪರಿಶೀಲನೆಗೆಂದು ಇಂಗ್ಲೆಂಡಿನಿಂದ ದೆಹಲಿಗೆ ಬಂದಿದ್ದ ತಜ್ಞರು ದೆಹಲಿ ಶಹರವನ್ನು ಕಿಂಗ್ಸ್‌ ವೇ ಬದಲಾಗಿ ರೈಸಿನಾ ಹಿಲ್ನಲ್ಲಿ ಕಟ್ಟುವುದು ಸೂಕ್ತ ಎಂಬ ಸಲಹೆಯನ್ನು ನೀಡಿದ್ದರು. ವೈಸ್‌ರಾಯ್‌ ಅರಮನೆ ಮತ್ತು ಸಂಸತ್‌ ಭವನಕ್ಕೆ ರೈಸಿನಾ ಹಿಲ್ ಪ್ರದೇಶವೇ ಸೂಕ್ತವೆಂಬುದು ಅವರ ಅಭಿಪ್ರಾಯವಾಗಿತ್ತು.

ಗುತ್ತಿಗೆದಾರರಾಗಿ ಸೋಭಾ ಸಿಂಗ್‌ ಮಾಡಬೇಕಿದ್ದ ಮೊತ್ತಮೊದಲ ಕೆಲಸವೆಂದರೆ ಅಡಿಗಲ್ಲುಗಳನ್ನು ಕಿಂಗ್ಸ್‌ ವೇ ನಿಂದ ರೈಸಿನಾ ಹಿಲ್ಗೆ ಸ್ಥಳಾಂತರಿಸುವುದಾಗಿತ್ತು ಎಂದು ದಾಖಲಿಸುತ್ತಾರೆ ಖುಷ್ವಂತ್‌ ಸಿಂಗ್‌. ಈ ಕಲ್ಲುಗಳು ಎತ್ತಿನಗಾಡಿಯಲ್ಲಿ ಮುನ್ನಡೆದರೆ ಸೋಭಾ ಸಿಂಗ್‌ ಸೈಕಲ್ ತುಳಿಯುತ್ತ ಜೊತೆಯಲ್ಲಿ ಸಾಗುತ್ತಿದ್ದರು. ಇದು ಯಾರ ಕಣ್ಣಿಗಾದರೂ ಬಿದ್ದರೆ ಅಪಶಕುನವೆಂಬ ಗಾಳಿಮಾತುಗಳಿಗೆ ಆಹಾರವಾಗುವ ಸಂಭವವಿದ್ದರಿಂದ ಕತ್ತಲಾದ ನಂತರ ಕಲ್ಲುಗಳನ್ನು ಸಾಗಿಸುತ್ತಿದ್ದರಂತೆ. ಆ ಕಾಲಕ್ಕೆ 16 ರೂಪಾಯಿಗಳ ಒಳ್ಳೆಯ ಸಂಭಾವನೆಯನ್ನೂ ಕೂಡ ಸಿಂಗ್‌ ಸಾಹೇಬ್ರು ಈ ಕೆಲಸಕ್ಕಾಗಿ ಗಿಟ್ಟಿಸಿಕೊಂಡಿದ್ದರು.

ಹೀಗೆ, ಇಂದು ನಮಗೆ ಕಾಣುವ ದಿಲ್ಲಿಯ ಹಿಂದೆ ಅದೆಷ್ಟೋ ದೂರದರ್ಶಿತ್ವವುಳ್ಳ ನಾಯಕರ, ಮುತ್ಸದ್ದಿಗಳ, ಕನಸುಗಾರರ ಮೋಡಿಯಿದೆ. ಅಂಥದ್ದೊಂದು ಕನಸು ಅವರ ಕಣ್ಣುಗಳಲ್ಲಿ ಅಂದೇ ಮೂಡಿರದಿದ್ದರೆ ನಾವಿಂದು ಇದನ್ನೆಲ್ಲ ಕಣ್ತುಂಬಿಕೊಳ್ಳಲು ಸಾಧ್ಯವಿರಲಿಲ್ಲವೇನೋ. ಹಳೇ ದಿಲ್ಲಿಯ ಮೂಲೆಯಲ್ಲಿರುವ ಪುಟ್ಟ ಕ್ಯಾಂಟೀನ್‌ ಒಂದರಲ್ಲೋ, ದರ್ಗಾ ಆಸುಪಾಸಿನ ಇಕ್ಕಟ್ಟಿನ ಗಲ್ಲಿಗಳಲ್ಲಿರುವ ಕೋಠಿಗಳಲ್ಲೋ ದಿಲ್ಲಿಯ ಹಳೆಯ ಅಪರೂಪದ ಚಿತ್ರಗಳು ಇಂದಿಗೂ ನಮಗೆ ಅಚಾನಕ್ಕಾಗಿ ಕಾಣಸಿಗುವುದುಂಟು. ಅರವತ್ತರಿಂದ ನೂರು ವರ್ಷಗಳ ಹಿಂದಿನ ದೆಹಲಿಯ ಕೆಲ ಕಪ್ಪುಬಿಳುಪು ಚಿತ್ರಗಳತ್ತ ಈಗ ಕಣ್ಣಾಡಿಸಿದರೆ ಶಹರವು ಅದ್ಯಾವ ಮಟ್ಟಿಗೆ ಬೆಳೆದು ನಿಂತಿದೆ ಎಂಬ ಬಗ್ಗೆ ಅಚ್ಚರಿಯಾಗುತ್ತದೆ. ಕಾಲದೊಂದಿಗೆ ಬಹಳಷ್ಟು ಸಂಗತಿಗಳು ಬದಲಾಗಿವೆ. ದೇಶವೂ ಬೆಳೆದಿದೆ, ದಿಲ್ಲಿಯೂ ಮಾಗಿದೆ.

ದೆಹಲಿ ಎಂಬ ಜಗದ ಆತ್ಮ
ಇಂದು ದಿಲ್ಲಿಯೆಂದರೆ ಥಟ್ಟನೆ ನಮಗೆ ನೆನಪಾಗುವುದು ದೇಶದ ರಾಜಕೀಯ ಶಕ್ತಿಕೇಂದ್ರ. ಉಳಿದಂತೆ ಟ್ರಾಫಿಕ್ಕು, ವಾಯುಮಾಲಿನ್ಯಗಳ ಅದೇ ಗೋಳಿನ ವ್ಯಥೆಗಳು. ಮಹಾನಗರಗಳ ಬಗ್ಗೆ ಬಹುತೇಕರಿಗಿರುವ ಸಾಮಾನ್ಯ ದೂರು-ದುಮ್ಮಾನಗಳ ಹೊರತಾಗಿಯೂ ಕಣ್ಣಿಗೆ ಹಾಯೆನಿಸುವ ಹಸಿರು, ಇತಿಹಾಸಕ್ಕೆ ಕುರುಹಾಗಿ ನಿಂತಿರುವ ಮೊಗಲ್ ಶೈಲಿಯ ಕೋಟೆಕೊತ್ತಲಗಳು, ವ್ಯವಸ್ಥಿತ ಕಾಲೋನಿಗಳು, ಹತ್ತಾರು ಸಾಂಸ್ಕತಿಕ ಕೇಂದ್ರಗಳು ಮತ್ತು ವಿಶಾಲವಾದ ಉದ್ಯಾನಗಳಿಂದಾಗಿ ದಿಲ್ಲಿಯು ಇವತ್ತಿಗೂ ಜನರನ್ನು ಆಕರ್ಷಿಸುವ ತಾಣಗಳಲ್ಲೊಂದು. ಅಷ್ಟಕ್ಕೂ ದಿಲ್ಲಿಯು ತಾನಾಗೇ ಯಾರನ್ನೂ ಯಂತ್ರವಾಗಿಸುವುದಿಲ್ಲ. ಆಹಾರ, ಪ್ರವಾಸಗಳಿಂದ ಹಿಡಿದು ಮನರಂಜನೆಯವರೆಗೆ ಎಲ್ಲಾ ಬಗೆಯ ಆಸಕ್ತರಿಗೂ, ಎಲ್ಲಾ ಬಜೆಟ್ಟಿನವರಿಗೂ ದಿಲ್ಲಿಯಲ್ಲಿ ಏನಾದರೊಂದು ಇದ್ದೇ ಇದೆ. ಪ್ರಾಯಶಃ ಇದು ಶಹರದ ವೈಶಿಷ್ಟ್ಯವೂ ಹೌದು.

ನನ್ನದೇ ಆತ್ಮವನ್ನು ಕೇಳಿದ್ದೆ ನಾನು, ದಿಲ್ಲಿಯೆಂದರೆ ಏನು?

ಹೀಗೆಂದು ಉತ್ತರಿಸಿತು ಅದು,

ಈ ಜಗತ್ತೇ ಒಂದು ದೇಹವಾದರೆ,

ದೆಹಲಿಯು ಇದರ ಆತ್ಮವು…

ಹತ್ತೂಂಬತ್ತನೇ ಶತಮಾನದ ಮಹಾಕವಿಯಾಗಿದ್ದ ಮಿರ್ಜಾ ಗಾಲಿಬ್‌ ದೆಹಲಿಯ ಬಗ್ಗೆ ಬರೆದಿದ್ದು ಹೀಗೆ. ಒಟ್ಟಿನಲ್ಲಿ ಅಂದಿನ ಗಾಲಿಬ್‌ ನಿಂದ ಹಿಡಿದು ಇಂದಿನ ಜೋಷಿಯವರೆಗೂ ದಿಲ್ಲಿಯ ಮಾಂತ್ರಿಕತೆ ಮಾಸಿಲ್ಲ.

ಮುಂದಿನ ಬಾರಿ ದಿಲ್ಲಿಯ ಕುರಿತು ಮತ್ತಷ್ಟು …

ಲೇಖಕರು…
ಹರಿಯಾಣದ ಗುರುಗ್ರಾಮದಲ್ಲಿ, ಕೇಂದ್ರ ಸರಕಾರದ ಜಲಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಅಂಗೋಲಾದಲ್ಲಿ ಎರಡೂವರೆ ವರ್ಷ ಇದ್ದು ಅಲ್ಲಿಯ ಅನುಭವಗಳನ್ನು ‘ಹಾಯ್‌ ಅಂಗೋಲಾ’ ಕೃತಿಯಲ್ಲಿ ದಾಖಲಿಸಿದ್ದಾರೆ.

-ಪ್ರಸಾದ್‌ ನಾೖಕ್‌

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.