ಬೈಕ್-ಟಿಪ್ಪರ್ ಢಿಕ್ಕಿ: ಓರ್ವ ಸಾವು
Team Udayavani, Jun 22, 2019, 9:24 AM IST
ಪುಂಜಾಲಕಟ್ಟೆ: ಟಿಪ್ಪರ್ ಲಾರಿ ಮತ್ತು ಬೈಕ್ ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿ, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಸಮೀಪದ ಕೋಮಿನಡ್ಕದಲ್ಲಿ ಸಂಭವಿಸಿದೆ.
ಪಾಂಡವರ ಕಲ್ಲು ನಿವಾಸಿ ಪ್ರಶಾಂತ್ (30) ಸಾವನ್ನಪ್ಪಿದವರು ಹಾಗೂ ಪ್ರಕಾಶ್ ಗಾಯಾಳು. ಮಡಂತ್ಯಾರಿನಿಂದ ಪಾಂಡವರ ಕಲ್ಲಿಗೆ ಹೋಗುತ್ತಿದ್ದ ಟಿಪ್ಪರ್ನ ಹಿಂಬದಿಯ ಚಕ್ರಕ್ಕೆ ಮುಂಭಾಗದಿಂದ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಸಹಸವಾರನ ಕೈಗೆ ಗಾಯವಾಗಿದೆ. ಭೈಕ್ ಹಾನಿಗೀಡಾಗಿದೆ. ಗಾಯಾಳುಗಳನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಪ್ರಶಾಂತ್ ಕೊನೆಯುಸಿರೆಳೆದರು.
ಪ್ರಶಾಂತ್ ಅವರು ಕಕ್ಯಪದವು, ರಾಮ ನಗರದ ದಿ| ರಾಘವ ಪೂಜಾರಿ ಅವರ ನಾಲ್ವರು ಮಕ್ಕಳಲ್ಲಿ ದ್ವಿತೀಯ ಪುತ್ರರಾಗಿದ್ದರು. ಪೈಂಟಿಂಗ್ ವೃತ್ತಿ ಮಾಡುತ್ತಿದ್ದ ಅವರು ಅವಿವಾಹಿತರಾಗಿದ್ದರು. ತಾಯಿ, ಸಹೋದರ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.