ನಾಯ್ಡು ಮನೆ ಪಕ್ಕದ ಸಭಾಂಗಣ ಜಪ್ತಿ
Team Udayavani, Jun 23, 2019, 5:54 AM IST
ಹೈದರಾಬಾದ್: ತೆಲುಗು ದೇಸಂ ಪಕ್ಷದ ಮುಖ್ಯಸ್ಥ, ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಗಲೆ ಪಕ್ಕದಲ್ಲಿರುವ ಸಭಾಂಗಣ ವನ್ನು ಸರಕಾರ ವಶಪಡಿಸಿಕೊಂಡಿದೆ. ಅಮರಾವತಿಯ ಉಂಡವಲ್ಲಿಯಲ್ಲಿರುವ ನಾಯ್ಡು ವಾಸವಾಗಿರುವ ಬಂಗಲೆ ವಿವಾದಕ್ಕೀಡಾಗಿದ್ದು, ಇಲ್ಲಿ ಅವರು ವಾಸ ಮುಂದುವರಿಸಲು ಬಿಡುವುದಿಲ್ಲ ಎಂದು ಸರಕಾರ ಹೇಳಿತ್ತು. ವಶಪಡಿಸಿಕೊಂಡ ಸಭಾಂಗಣದಲ್ಲಿ ಸೋಮವಾರ ಸಿಎಂ ಜಗನ್ ಮೋಹನ ರೆಡ್ಡಿ ಜಿಲ್ಲಾಧಿಕಾರಿಗಳ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಪ್ರಜಾ ವೇದಿಕೆಯನ್ನು 2017ರಲ್ಲಿ ಟಿಡಿಪಿ ಸರಕಾರವೇ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿತ್ತು. ಜನರು ಸಿಎಂ ಭೇಟಿ ಮಾಡಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕಟ್ಟಡ ನಿರ್ಮಿಸಲಾಗಿತ್ತು. ಇಲ್ಲೇ ಜಿಲ್ಲಾಧಿಕಾರಿಗಳ ಸಭೆಯನ್ನು ನಾಯ್ಡು ನಡೆಸುತ್ತಿದ್ದರು. ಇದು ಸರಕಾರಿ ಕಟ್ಟಡ. ಹೀಗಾಗಿ, ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ನಗರಾಭಿವೃದ್ಧಿ ಸಚಿವ ಬೋತ್ಸ ಸತ್ಯನಾರಾಯಣ ಹೇಳಿದ್ದಾರೆ.