ಲಂಕಾ ತುರ್ತು ಪರಿಸ್ಥಿತಿ ಮುಂದುವರಿಕೆ: ಸಿರಿಸೇನಾ
Team Udayavani, Jun 23, 2019, 5:58 AM IST
ಕೊಲಂಬೊ: ಅಚ್ಚರಿಯ ಬೆಳವಣಿಗೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಎಪ್ರಿಲ್ನಲ್ಲಿ ದೇಶಾದ್ಯಂತ ತಾವು ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ಮುಂದುವರಿಸಿ ಆದೇಶ ಹೊರಡಿಸಿದ್ದಾರೆ. ಎಪ್ರಿಲ್ನಲ್ಲಿ ಈಸ್ಟರ್ ಹಬ್ಬದ ವೇಳೆ ಸರಣಿ ಸ್ಫೋಟ ಸಂಭವಿಸಿದ ಅನಂತರ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಹಾಗಾಗಿ, ಇತ್ತೀಚೆಗೆ ಆಸ್ಟ್ರೇಲಿಯಾ, ಕೆನಡಾ, ಜಪಾನ್ ಹಾಗೂ ಅಮೆರಿಕದ ರಾಜತಂತ್ರಜ್ಞರೊಂದಿಗೆ ಮಾತನಾಡುತ್ತಿದ್ದ ಸಿರಿಸೇನಾ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಶೇ. 99ರಷ್ಟು ಹತೋಟಿಗೆ ಬಂದಿರುವುದರಿಂದ ತುರ್ತು ಪರಿಸ್ಥಿತಿ ಜೂ. 22ರ ಅನಂತರ ಹಿಂಪಡೆಯುವುದಾಗಿ ತಿಳಿಸಿದ್ದರು. ಆದರೆ, ಈಗ ಮನಸ್ಸು ಬದಲಾಯಿಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.
ಇದೇ ವೇಳೆ, ಈಸ್ಟರ್ ಸ್ಫೋಟಗಳ ರೂವಾರಿಗಳೆನಿಸಿರುವ ನ್ಯಾಷನಲ್ ತೌಹೀತ್ ಜಮಾತ್ (ಎನ್ಟಿಜೆ) ಸಂಘಟನೆಯ ಎಲ್ಲ ಸದಸ್ಯರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ. ಜತೆಗೆ, ಎನ್ಟಿಜೆ ಸಂಘಟನೆಯ ನಾಯಕ ಜಹ್ರನ್ ನಡೆಸುತ್ತಿದ್ದ ಧಾರ್ಮಿಕ ಸಮಾರಂಭಗಳ ಜತೆಗೆ ನಂಟು ಹೊಂದಿದ್ದ ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಒಟ್ಟು 9 ಆತ್ಮಾಹುತಿ ದಾಳಿಕೋರರು ಸ್ಫೋಟಗಳಲ್ಲಿ ಭಾಗಿಯಾಗಿದ್ದರು.