ಜಿಂದಾಲ್ ಭ್ರಷ್ಟಾಚಾರ: ಜು.6ಕ್ಕೆ ಹೆದ್ದಾರಿ ಬಂದ್
Team Udayavani, Jun 28, 2019, 5:23 AM IST
ಬೆಂಗಳೂರು: ಜಿಂದಾಲ್ ಕಂಪನಿಯ ಭ್ರಷ್ಟಾಚಾರದ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷ ಜು. 6ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಡ್ಯಾಂ ಸೇತುವೆ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವುದಾಗಿ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಕಂಪನಿಯು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವುದಾಗಿ ಹೇಳಿಕೊಂಡು 1995ರಿಂದ ಇಲ್ಲಿಯವರೆಗೆ ಸರ್ಕಾರ 11,406 ಎಕರೆ ಜಿಂದಾಲ್ ಕಂಪನಿಗೆ ನೀಡಿದೆ. ಜಿಂದಾಲ್ ಕಂಪನಿ ಇಡೀ ಬಳ್ಳಾರಿ ಜಿಲ್ಲೆಯನ್ನು ಹತೋಟಿಗೆ ಪಡೆದುಕೊಂಡಿದೆ ಎಂದರು. ಆದರೆ ಸರ್ಕಾರಕ್ಕೆ ಒಂದೂವರೆ ಸಾವಿರ ಕೋಟಿ ತೆರಿಗೆ ವಂಚಿಸಿದೆ. ಹಾಗೂ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಿಲ್ಲ. ಆದರೂ ಜಿಂದಾಲ್ ಕಂಪನಿಗೆ 3,666 ಎಕರೆಯನ್ನು ಸರ್ಕಾರ ನೀಡಲು ಮುಂದಾಗಿರುವುದು ಖಂಡನೀಯ.
ಯಾವುದೇ ಕಾರಣಕ್ಕೂ ಜಿಂದಾಲ್ ಕಂಪನಿಗೆ ರೈತರ ಜಾಗ ನೀಡಬಾರದೆಂದು ಆಗ್ರಹಿಸಿ ಹಾಗೂ ಜಿಂದಾಲ್ ಭ್ರಷ್ಟಾಚಾರ ವಿರುದ್ಧ ಬಳ್ಳಾರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಬಂದ್ ಹಾಗೂ 15ರಂದು ತೋರಣಗಲ್ ಹತ್ತಿರ ಗಡಿನಾಡು ಕನ್ನಡಿಗರ ಸಮ್ಮೇಳನ ಕೈಗೊಳ್ಳಲಾಗುವುದು ಎಂದು ಹೇಳಿದರು.