ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ: ವಿಷಾದ
ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ: ವಿಷಾದ
Team Udayavani, Jul 1, 2019, 2:55 PM IST
ಸಕಲೇಶಪುರದಲ್ಲಿ ಕೇಂದ್ರ ಸಾಹಿತ್ಯ ವೇದಿಕೆ ತಾಲೂಕು ಘಟಕ ಏರ್ಪಡಿಸಿದ್ದ ಅಖೀಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಹಾಡ್ಲಹಳ್ಳಿ ನಾಗರಾಜ್ ಮಾತನಾಡಿದರು.
ಸಕಲೇಶಪುರ: ಸಾಹಿತ್ಯ ಪರಿಚಾರಿಕೆ ಯಂತಹ ಪರಮ ಪವಿತ್ರ ಕೆಲಸ ಮಾಡಬೇಕಾದ ಸಂಸ್ಥೆಗಳ ಅಂಗಳಗಳು ರಾಜಕೀಯ ಆಡಂಬೊಲಗಳಾಗಿ ಸಾಹಿತ್ಯದ ಉತ್ತೇಜನ ನಗಣ್ಯವಾಗಿದೆ. ಇಂದಿನ ಈ ವಾತಾವರಣ ನಿರಾಶೆ ಹುಟ್ಟಿಸದೆ ಎಂದು ಹಿರಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಹೇಳಿದರು.
ಕೇಂದ್ರ ಸಾಹಿತ್ಯ ವೇದಿಕೆಯ ತಾಲೂಕು ಘಟಕದ ವತಿಯಿಂದ ಅಖೀಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೃಜನಶೀಲ ಸಾಹಿತಿಯನ್ನು ಹಾಳು ಮಾಡಬೇಕೆಂದು ಎನಿಸಿದರೆ ಆತನನ್ನು ಕರೆದುಕೊಂಡು ಹೋಗಿ ಈ ಸಂಸ್ಥೆಗಳ ಅಂಗಳದಲ್ಲಿ ಬಿಡಬೇಕು ಎಂದರು.
ತಾಂತ್ರಿಕತೆಯಿಂದ ಸೋಮಾರಿತನ: ಈ ಆಧುನಿಕ ಕಾಲಘಟ್ಟದಲ್ಲಿ ಹಲವಾರು ತಾಂತ್ರಿಕ ಆವಿಷ್ಕಾರಗಳಾಗಿ ಮನುಷ್ಯನ ಬದುಕನ್ನು ಹಗುರಗೊಳಿಸಿದೆ ಎಂಬ ನಂಬಿಕೆಯಿದೆ. ಸೋಮಾರಿತನವನ್ನು ಅಪ್ಪಿಕೊಂಡ ಮನುಷ್ಯ ಟೀವಿ ಮುಂದೆ ಕುಳಿತು ಅದು ಉಣಬಡಿಸುವ ತಂಗಳನ್ನ ದಿಂದಲೇ ತೃಪ್ತನಾಗುತ್ತಾ ಓದಿನ ಮಜಾ ಕಳೆದುಕೊಳ್ಳುತ್ತಿದ್ದಾನೆ ಎಂದರು.
ಸಾಹಿತಿಗಳನ್ನು ಪ್ರೋತ್ಸಾಹಿಸಿ: ಮುಖ್ಯ ಅತಿಥಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸಾಹಿತ್ಯಾಸಕ್ತಿ ಇರುವ ರಾಜಕಾರಣಿಗಳು ಸಂಗೀತ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ತುಮಕೂರು ಗವಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಜಾತಿಯ ಸೋಂಕಿಲ್ಲದ ಸಾಹಿತ್ಯ ಪ್ರಪಂಚವನ್ನು ಮರು ಸೃಷ್ಟಿ ಮಾಡಬೇಕು ಎಂದರು.
ಸಮಾರಂಭದಲ್ಲಿ ಎಸ್.ಕೆ.ಕರೀಂ ಖಾನ್ ಸಾಹಿತ್ಯ ಮತ್ತು ಸಾಂಸ್ಕೃತಿ ಪ್ರಶಸ್ತಿ ಯನ್ನು ರಂಗಕರ್ಮಿ ಪ್ರಸಾದ್ ರಕ್ಷಿದಿ, ಸಾಹಿತ್ಯ ಸಂಘಟಕ ಸತೀಶ್ ಜವರೇಗೌಡ, ಕಲಾವಿದ ಎಂ.ಡಿ.ಮಂಚಿ, ಸಾಹಿತಿ ಸುಶೀಲಾ ಸೋಮಶೇಖರ್, ಶೈಲಜಾ ಹಾಸನ್, ನರಸಿಂಹಮೂರ್ತಿ, ನಿಯಾಜ್ ಪಡೀಲ್ ಅವರುಗಳಿಗೆ ನೀಡ ಲಾಯಿತು. ಚಂದ್ರಶೇಖರ್ ಧೂಲೇಕರ್ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ವಾಣಿಘಟ್ಟಿ, ಎಸ್.ಲಲಿತಾ, ಚಂದ್ರಶೇಖರ್ ದೋಸಿ, ಪತ್ರಕರ್ತ ಮಲ್ನಾಡ್ ಮೆಹಬೂಬ್, ಮಾದರಿ ಶಿಕ್ಷಕಿ ಹರ್ಷಿಯಾಬಾನು ಹಾಗೂ ಸಮಾಜ ಸೇವಾರತ್ನ ಪ್ರಶಸ್ತಿಯನ್ನು ಚನ್ನವೇಣಿ ಎಂ.ಶೆಟ್ಟಿ, ಇಬ್ರಾಹಿಂ ಮುಸ್ಲಿಯಾರ್, ಪ್ರಗತಿ ಸಂಜಿತ್ಶೆಟ್ಟಿ, ಲಕ್ಷ್ಮೀರಂಗನಾಥ್, ವಿದ್ಯಾಹರೀಶ್, ಎಂ.ಸಿ.ರಾಜು, ಮಹಂತಪ್ಪ ಅವರುಗಳಿಗೆ ನೀಡಿ ಸನ್ಮಾನಿಸಲಾಯಿತು.
ಸಮಾರಂಭವನ್ನು ಹಿರಿಯ ಸಾಹಿತಿ ಬಾನು ಮುಸ್ತಾಕ್ ಉದ್ಘಾಟಿಸಿ ದರು. ತಾಲೂಕು ಕಸಾಪ ಅಧ್ಯಕ್ಷ ಜೈಮಾರುತಿ ದೇವರಾಜ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ತಾಲೂಕು ಅಧ್ಯಕ್ಷೆ ಫರ್ಜಾನಾ ರಿಜ್ವಾನ್, ಜಿಲ್ಲಾ ಕಸಾಪ ಗೌರವಾಧ್ಯಕ್ಷ ರವಿ ಇದ್ದರು.