ಹುಲಿರಾಯ ಪಲ್ಲಂಗದ ಮೇಲೆ ದಣಿವಾರಿಸಿಕೊಂಡ
ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಜಲಾವೃತಗೊಂಡ ಗ್ರಾಮ.
Team Udayavani, Jul 19, 2019, 5:00 AM IST
ಗುವಾಹಟಿ: ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಪ್ರವಾಹದಿಂದಾಗಿ ಶೇ.90ರಷ್ಟು ಜಲಾವೃತವಾಗಿರುವ ಹಿನ್ನೆಲೆಯಲ್ಲಿ, ಅಲ್ಲಿನ ಪ್ರಾಣಿಗಳೆಲ್ಲಾ ಸುರಕ್ಷಿತ ಸ್ಥಳಗಳ ಕಡೆಗೆ ವಲಸೆ ಹೋಗುತ್ತಿವೆ. ಅದೇ ರೀತಿ, ಹೊರಬಂದಿದ್ದ ಹುಲಿಯೊಂದು, ಕಾಜಿರಂಗದ ವ್ಯಾಪ್ತಿಯಲ್ಲೇ ಇರುವ ಹಾರ್ಮೋತಿ ಎಂಬ ಹಳ್ಳಿಯ ಗುಜರಿ ಅಂಗಡಿಯೊಳಕ್ಕೆ ನುಗ್ಗಿ ಆಶ್ರಯ ಪಡೆದಿರುವ ಘಟನೆ ನಡೆದಿದೆ.
ಅಂಗಡಿ ಮಾಲೀಕ ರಫಿಕುಲ್ ಇಸ್ಲಾಂ, ಎಂದಿನಂತೆ ಅಂಗಡಿಯಲ್ಲಿ ಕುಳಿತಿದ್ದಾಗ, ಇದ್ದಕ್ಕಿದ್ದಂತೆ ಜನರೆಲ್ಲರೂ ಹುಲಿ ಬಂತು ಹುಲಿ ಎಂದು ಓಡಿ ಹೋಗಿದ್ದಾರೆ. ಎಚ್ಚೆತ್ತುಕೊಂಡ ಆತ ಅಂಗಡಿಯಿಂದ ಹೊರಬಂದಾಗ ಹುಲಿ ಆತನಿಗಿಂತ ಕೇವಲ 20 ಅಡಿ ದೂರದಲ್ಲಿ ನಿಂತಿತ್ತು. ಏದುಸಿರು ಬಿಡುತ್ತಾ ದಣಿದು ಬಂದ ಹುಲಿ, ಇಸ್ಲಾಂಗೆ ಯಾವುದೇ ತೊಂದರೆ ಕೊಡದೆ, ಸೀದಾ ಅಂಗಡಿಯೊಳಕ್ಕೆ ಹೋಗಿ ಅಲ್ಲಿದ್ದ ಮಂಚದ ಮೇಲೇರಿ ಮಲಗಿಬಿಟ್ಟಿದೆ. ಸುದ್ದಿ ತಿಳಿದ ಅರಣ್ಯಾಧಿಕಾರಿಗಳು, 10 ಗಂಟೆಯ ಬಳಿಕ ಹುಲಿರಾಯನನ್ನು ವಶಕ್ಕೆ ಪಡೆದಿದ್ದಾರೆ.
ಸಾವಿನ ಸಂಖ್ಯೆ 100: ಅಸ್ಸಾಂ, ಬಿಹಾರ ದಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದ್ದು, ಮೃತರ ಸಂಖ್ಯೆ 100ಕ್ಕೇರಿಕೆಯಾಗಿದೆ.
ಇಂದಿನಿಂದ ರೆಡ್ ಅಲರ್ಟ್ ಕೇರಳದಲ್ಲಿ ಶುಕ್ರವಾರದಿಂದ ಧಾರಾಕಾರ ಮಳೆಯಾಗ ಲಿದ್ದು, 3 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಡುಕ್ಕಿ, ಪಟ್ಟಣಂತಿಟ್ಟ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದ್ದು, ತಗ್ಗು ಪ್ರದೇಶಗಳಿಂದ ಸ್ಥಳಾಂತರ ಗೊಳ್ಳುವಂತೆ ನಾಗರಿಕರಿಗೆ ಸೂಚಿಸಲಾಗಿದೆ. ಇಡುಕ್ಕಿ ಜಿಲ್ಲೆಗೆ 18ರಿಂದ 20ರವರೆಗೆ, ಪಟ್ಟಣಂತಿಟ್ಟ, ಎರ್ನಾಕುಳಂ ನಲ್ಲಿ 19ರಂದು ಎಚ್ಚರಿಕೆಯಿಂದಿರುವಂತೆ ನಿರ್ದೇಶಿಸಲಾಗಿದೆ.