ಮೈದುಂಬಿ ಧುಮ್ಮುಕ್ಕುತ್ತಿರುವ ಭರಚುಕ್ಕಿ
ಜಿಲ್ಲೆಯ ಶಿವನಸಮುದ್ರ ಪ್ರದೇಶದಲ್ಲಿ ಸುಮಾರು 100 ಅಡಿ ಆಳಕ್ಕೆ ಧುಮ್ಮಿಕ್ಕುವ ಕಾವೇರಿ
Team Udayavani, Jul 29, 2019, 10:29 AM IST
ಭರಚುಕ್ಕಿ ಜಲಪಾತ ಹಾಲಿನ ನೊರೆಯಂತೆ ಬಾನೆತ್ತರರಿಂದ ಭೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿರುವುದರಿಂದ ಪ್ರವಾಸಿಗರ ದಂಡೇ ಆಗಮಿಸಿ ವೀಕ್ಷಿಸುತ್ತಿದ್ದಾರೆ.
ಚಾಮರಾಜನಗರ: ಕೃಷ್ಣರಾಜ ಸಾಗರ ಹಾಗೂ ಕಬಿನಿ ಜಲಾಶಯದಿಂದ 12 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿರುವ ಕಾರಣ ಜಿಲ್ಲೆಯ ಪ್ರಸಿದ್ಧ ಭರಚುಕ್ಕಿ ಜಲಪಾತ ಮೈದುಂಬಿಕೊಂಡಿದ್ದು ಜಲಧಾರೆ ಬೆಳ್ನೊರೆಯಾಗಿ ಧುಮ್ಮಿಕ್ಕುತ್ತಿದೆ.
ಮಳೆಗಾಲ ಆರಂಭವಾದರೂ, ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿದೆ. ಆದರೆ ಕಾವೇರಿ, ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯಗಳಿಗೆ ನೀರು ಹರಿದುಬರುತ್ತಿದೆ. ಹಾಗಾಗಿ ಕೃಷ್ಣರಾಜ ಸಾಗರ ಸುಮಾರು 7 ಸಾವಿರ ಕ್ಯೂಸೆಕ್ ಹಾಗೂ ಕಬಿನಿ ಜಲಾಶಯದಿಂದ 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಹೀಗಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.
100 ಅಡಿ ಆಳಕ್ಕೆ ಧುಮ್ಮಿಕ್ಕುವ ಕಾವೇರಿ: ಹೀಗಾಗಿ, ಭರಚುಕ್ಕಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಸೊರಗಿದ್ದ ಜಲಪಾತ ಮೈದುಂಬಿಕೊಂಡಿದೆ. ಕೇರಳದ ವೈನಾಡಿನಲ್ಲಿ ಹುಟ್ಟಿ ಹರಿಯುವ ಕಪಿಲಾ, ತಲಕಾವೇರಿಯಲ್ಲಿ ಜನ್ಮ ತಾಳಿ ಹರಿದುಬರುವ ಕಾವೇರಿ ನದಿಗಳು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಸಂಗಮವಾಗುತ್ತವೆ. ನಂತರ ಕಬಿನಿ ಕಾವೇರಿ ಒಡಲಲ್ಲಿ ಸೇರಿ ಹೋಗುತ್ತಾಳೆ. ಈ ಕಾವೇರಿ ಜಿಲ್ಲೆಯ ಶಿವನಸಮುದ್ರ ಪ್ರದೇಶದಲ್ಲಿ ಸುಮಾರು 100 ಅಡಿ ಆಳಕ್ಕೆ ಧುಮ್ಮಿಕ್ಕುತ್ತಾಳೆ. ಈ ಪ್ರದೇಶ ಭರಚುಕ್ಕಿಯಾಗಿ ಪ್ರಸಿದ್ಧವಾಗಿದೆ.
ಕರ್ನಾಟಕದ ನಯಾಗರಾ: ಸುಮಾರು 100 ಅಡಿ ಆಳಕ್ಕೆ ಧುಮ್ಮಿಕ್ಕುವ ಭರಚುಕ್ಕಿ, ಅಷ್ಟೇ ಅಗಲದ ಪ್ರದೇಶದಲ್ಲಿ ಅನೇಕ ಕವಲುಗಳೊಡೆದು ಧುಮ್ಮಿಕ್ಕುತ್ತದೆ. ನದಿಯಲ್ಲಿ ಹೆಚ್ಚು ನೀರು ಹರಿದಾಗ ಈ ಕವಲುಗಳ ಸಂಖ್ಯೆ ಹೆಚ್ಚಾಗಿ 100 ಅಡಿ ಅಗಲಕ್ಕೂ ಜಲಪಾತ ಮೈತುಂಬಿಕೊಳ್ಳುತ್ತದೆ. ಹೀಗಾಗಿ ಇದನ್ನು ಕರ್ನಾಟಕದ ನಯಾಗರ ಎಂದು ಬಣ್ಣಿಸಲಾಗುತ್ತದೆ.
ಜಲಪಾತ ನೋಡುಗರ ಕಣ್ಣಿಗೆ ಹಬ್ಬ: ಬಣ್ಣವಿಲ್ಲದೆ ಹರಿಯುವ ಸಲಿಲ ಜಲಧಾರೆ ಜಲಪಾತವಾಗುವಾಗ ಅಚ್ಚ ಬಿಳಿಯ ಬಣ್ಣದಲ್ಲಿ ಬೃಹತ್ ಪ್ರಮಾಣದ ಜಲಧಾರೆಯಾಗಿ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ಮೈನವಿರೇಳಿಸುತ್ತದೆ. ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಸಂಪೂರ್ಣ ಮೋಡಕವಿದ ವಾತಾವರಣ, ಆಗಾಗ ತುಂತುರು ಮಳೆ ಬೀಳುತ್ತಿದ್ದು, ಭರಚುಕ್ಕಿಯಲ್ಲಿ ಈ ವಾತಾವರಣದಲ್ಲಿ ಜಲಪಾತ ನೋಡುವುದು ಕಣ್ಣಿಗೆ ಹಬ್ಬವಾಗಿದೆ. ಜಲಾನಯದ ಪ್ರದೇಶದಲ್ಲಿ ಮಳೆ ಹೀಗೇ ಮುಂದುವರಿದರೆ ಎರಡೂ ಜಲಾಶಯಗಳಲ್ಲಿ ಇನ್ನಷ್ಟು ನೀರಿನ ಮಟ್ಟ ಹೆಚ್ಚಾಗಿ ನದಿಗೆ ಇನ್ನೂ ಹೆಚ್ಚಿನ ನೀರು ಬಿಡಲಾಗುತ್ತದೆ. ಆಗ ಭರಚುಕ್ಕಿ ಜಲಪಾತದ ವೈಭವ ಇನ್ನಷ್ಟು ಹೆಚ್ಚಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು
ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು
ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ