ನಳನಳಿಸುತ್ತಿದೆ ಬೆಳೆ..ರೈತನ ಮೊಗದಲ್ಲೀಗ ಕಳೆ..
•ಹೊಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದೆ ಗೋವಿನ ಜೋಳ, ಹೆಸರು, ಸಜ್ಜಿ, ನೆವಣಿ ಬೆಳೆ
Team Udayavani, Jul 31, 2019, 12:03 PM IST
ಗಜೇಂದ್ರಗಡ: ಕಾಲಕಾಲೇಶ್ವರ ಗ್ರಾಮ ಬಳಿಯ ಬೆಳೆದ ಗೋವಿನ ಜೋಳ ಫಸಲು ಕಂಗೊಳಿಸುತ್ತಿದೆ.
ಗಜೇಂದ್ರಗಡ: ಬರದ ನಾಡೆಂದೇ ಬಿಂಬಿತವಾಗಿರುವ ತಾಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಅನ್ನದಾತನನ್ನು ಕೈ ಹಿಡಿದಿದ್ದು,ಬೆಳೆಗಳು ನಳನಳಿಸುತ್ತಿವೆ. ನಿರೀಕ್ಷೆಗೂ ಮೀರಿ ಮುಂಗಾರಿನ ಫಸಲು ಬರುವ ಆಶಾಭಾವ ಒಡಮೂಡಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಉತ್ತಮವಾಗಿ ಸುರಿಯದಿದ್ದರೂ ಬೆಳೆ ಉಳಿಯುವಷ್ಟು ಸುರಿದಿದೆ. ಈಗಾಗಲೇ ಬಿತ್ತನೆ ಮಾಡಿರುವ ಹೆಸರು, ಗೋವಿನಜೋಳ, ಸಜ್ಜಿ, ನೆವಣಿ, ಗುರೆಳ್ಳು ಬೆಳೆ ಹಸಿರಿನಿಂದ ಕಂಗೊಳಿಸುತ್ತಿದೆ.
ತಾಲೂಕಿನಲ್ಲಿ ಕಳೆದ ಬಾರಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 10 ಸಾವಿರ ಹೆಕ್ಟೇರ್ ಪ್ರದೇಶ ಗೋವಿನಜೋಳ, 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಮತ್ತು 1000 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜಿ ಬಿತ್ತನೆಯಾಗಿತ್ತು. ಈ ಬಾರಿ ಹೆಸರು 20,989, ಗೋವಿನ ಜೋಳ 5805, ಶೇಂಗಾ 5355, ಸಜ್ಜಿ 394, ಗುರೆಳ್ಳು 200, ಸೂರ್ಯಕಾಂತಿ 350, ಬಿ.ಟಿ ಹತ್ತಿ 923, ತೊಗರಿ 424 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಬೆಳೆಗಳು ಇದೀಗ ಸಮೃದ್ಧವಾಗಿದ್ದು, ಹೆಸರು ಹೂವು ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿದೆ. ಮಳೆ ಹೆಚ್ಚಾದರೆ ಕೀಟಭಾದೆ ತಗುಲಿ ಎಲ್ಲಿ ಇಳುವರಿ ಕುಂಠಿತವಾಗುತ್ತದೆಯೋ ಎಂಬ ಭೀತಿ ರೈತರನ್ನು ಕಾಡುತ್ತಿದೆ. ಹೀಗಾಗಿ ಬೆಳೆಗಳ ರಕ್ಷಣೆಗಾಗಿ ರೈತರು ಕೀಟಭಾದೆ, ರೋಗ ಹತೋಟಿಗೆ ತರಲು ಔಷಧ ಸಿಂಪಡಣೆಯಲ್ಲಿ ತೊಡಗಿದ್ದಾರೆ.
ಗಜೇಂದ್ರಗಡ, ಕಾಲಕಾಲೇಶ್ವರ, ಗೊಗೇರಿ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಮಾಟರಂಗಿ, ಸೂಡಿ, ರಾಮಾಪುರ, ಪುರ್ತಗೇರಿ, ಕೊಡಗಾನೂರ, ವೀರಾಪುರ, ಚಿಲ್ಝರಿ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಕಲ್ಲಿಗನೂರ, ಮುಶಿಗೇರಿ, ಪ್ಯಾಟಿ, ನಾಗೇಂದ್ರಗಡ ಸೇರಿ ರೋಣ ಮತ್ತು ಗಜೇಂದ್ರಗಡ ತಾಲೂಕಿನಾದ್ಯಂತ 2019 ಜೂನ್ ಮತ್ತು ಜುಲೈನಲ್ಲಿ 233. 7 ಮಿ.ಮೀ. ಮಳೆ ಸುರಿದಿದೆ. 2018 ಜೂನ್ ಮತ್ತು ಜುಲೈನಲ್ಲಿ 112. 26 ಮಿ.ಮೀ. ಮಳೆ ಸುರಿದಿತ್ತು.
ಕಳೆದೊಂದು ವಾರದಿಂದ ತುಂತುರು ಮಳೆಯಾಗುತ್ತಿದ್ದು, ಬೆಳೆಗಳು ಮತ್ತಷ್ಟು ಸಮೃದ್ಧವಾಗಿ ಬರುವ ವಿಶ್ವಾಸ ರೈತರಲ್ಲಿದೆ. ಬೆಳೆಗಳ ಮಧ್ಯದಲ್ಲಿನ ಕಳೆ ತೆಗೆಯುವುದು, ಎಡೆಗುಂಟೆ ಹೊಡೆಯುವಂತಹ ಕೆಲಸಗಳಲ್ಲಿ ರೈತರು ತೊಡಗಿದ್ದಾರೆ.
ಸತತ ಬರಕ್ಕೆ ತುತ್ತಾಗಿ ನಲುಗಿದ್ದ ಅನ್ನದಾತರು ಈ ಬಾರಿ ನಿಟ್ಟುಸಿರು ಬಿಡುವಂತಾಗಿದೆ. ನೀರಿಲ್ಲದೆ ಬರಿದಾಗಿದ್ದ ಕೃಷಿ ಹೊಂಡ, ಚೆಕ್ ಡ್ಯಾಂಗಳಲ್ಲಿ ನೀರು ತುಂಬಿವೆ. ಕಳೆದೆರಡು ವರ್ಷಗಳಿಂದ ಅನುಭವಿಸಿದ್ದ ಬರಕ್ಕೆ ಗುಡ್ ಬೈ ಹೇಳಿದ ನೇಗಿಲ ಯೋಗಿ ಈಗ ಖುಷಿಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ