ತಾಯಿ-ಶಿಶು ಮರಣ ತಡೆಯಲು ಮುಂಜಾಗ್ರತೆ ವಹಿಸಿ
Team Udayavani, Aug 10, 2019, 1:45 PM IST
ರೋಟಾ ವೈರಸ್ ಮತ್ತು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮತ್ತು ನಗರ ಚಾಲನಾ ಸಮಿತಿ ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಅಕ್ರಂಪಾಷಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಸನ: ಜಿಲ್ಲೆಯಲ್ಲಿ ತಾಯಿ – ಮಗು ಮರಣ ಪ್ರಮಾಣವನ್ನು ಶೂನ್ಯಕ್ಕೆ ತರಲು ಎಲ್ಲಾ ವೈದ್ಯಾಧಿಕಾರಿ ಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರೋಟಾ ವೈರಸ್ ಮತ್ತು ಸಾರ್ವತ್ರಿಕ ಲಸಿಕಾ ಕಾರ್ಯ ಕ್ರಮದ ಜಿಲ್ಲಾ ಮತ್ತು ನಗರ ಚಾಲನಾ ಸಮಿತಿ ಸಭೆ ನಡೆಸಿದ ಅವರು, ವೈದ್ಯಕೀಯ ನಿರ್ಲಕ್ಷ್ಯ, ಆರೈಕೆ ಮತ್ತು ಜಾಗೃತಿ ಕೊರತೆಯಿಂದ ನವಜಾತ ಶಿಶುಗಳು ಹಾಗೂ ಗರ್ಭಿಣಿ-ಬಾಣಂತಿಯರು ಪ್ರಾಣ ಕಳೆದು ಕೊಳ್ಳುವಂತಹ ಘಟನೆಗಳು ಸಂಭವಿಸಬಾರದು ಎಂದರು. ನಗರ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿ, ಅಲ್ಪ ಸಂಖ್ಯಾತರ ವಸತಿ ಸ್ಥಳಗಳಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಅಭಿಯಾನದ ಸ್ವರೂಪದಲ್ಲಿ ಹಮ್ಮಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ತರಬೇತಿ ನೀಡಿ: ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿದ್ದರೂ ತಾಯಿ – ಮಗು ಮರಣದ ಅನೇಕ ಪ್ರಕರಣಗಳು ವರದಿಯಾಗಿವೆ. ಅವುಗಳನ್ನು ಗಮನಿಸಿದಾಗ ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೂ ಹಲವು ಸಾವುಗಳನ್ನು ತಡೆಯಲು ಸಾಧ್ಯವಿತ್ತು ಎನಿ ಸುತ್ತಿದೆ. ಹಾಗಾಗಿ ಎಲ್ಲಾ ವೈದ್ಯರು, ಶುಶ್ರೂಷಕಿಯರಿಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಜಾಗೃತಿಗೊಳಿಸುವ ತರಬೇತಿ ನೀಡಬೇಕು. ಎಲ್ಲ ಗ್ರಾಮಗಳಲ್ಲಿ ಸಾರ್ವ ಜನಿಕರಿಗೆ ಅರಿವು ಮೂಡಿ ಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿ ಯಿಂದಲೂ ಮಾತೃ ಪೂರ್ಣ, ಮಾತೃಶ್ರೀ, ಮಾತೃ ವಂದನಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಪೂರಕ ಪೌಷ್ಟಿಕ ಆಹಾರದ ಬಗ್ಗೆಯೂ ತಿಳಿಸಬೇಕೆಂದು ಡೀಸಿ ಸೂಚನೆ ನೀಡಿದರು.
ಎಚ್ಐವಿ ತಡೆಗೆ ಜಾಗೃತಿ ಮೂಡಿಸಿ: ಜಿಲ್ಲೆಯಲ್ಲಿ ಎಚ್ಐವಿ ಸೋಂಕು ಹೆಚ್ಚಾಗಿರುವ ಪ್ರದೇಶಗಳಲ್ಲಿ ನಿಯಂತ್ರಣ ಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಕಡ್ಡಾಯವಾಗಿ ಸಿಸಿ ಟೀವಿ ಅಳವಡಿಸಬೇಕು. ಭ್ರೂಣ ಲಿಂಗ ಪತ್ತೆ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.ಜಿಲ್ಲೆಯಲ್ಲಿ ಮಲೇರಿಯಾ, ಡೆಂಘೀ, ಎಚ್1ಎನ್1 ರೋಗಗಳ ಹಾಗೂ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಜಾಗೃತಿ ಚಟುವಟಿಕೆ ಇನ್ನಷ್ಟು ಚುರುಕುಗೊಳಿಸಬೇಕು. ಕೊಳಚೆ ಪ್ರದೇಶ, ಹಿಂದುಳಿದ ಪ್ರದೇಶಗಳಲ್ಲಿ ಸ್ಚಚ್ಛತೆ, ಸುರಕ್ಷತೆ ಬಗ್ಗೆ ಮನೆ-ಮನೆ ಜಾಗೃತಿ ಹಾಗೂ ಸುದ್ಧಿ ಮಾಧ್ಯಮಗಳ ಮೂಲಕ ಅರಿವು ಮೂಡಿಸಿ ಎಂದು ನಿರ್ದೇಶಿಸಿದರು.
ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಕಾಂತರಾಜ್, ಜಿಲ್ಲೆಯ ಪ್ರಗತಿ, ಆಗಬೇಕಿರುವ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು.ಸಭೆಯಲ್ಲಿ ಮಾತೃ-ಶಿಶು ಮರಣ, ಕೌಟುಂಬಿಕ, ಹೆರಿಗೆ ಸ್ಥಿತಿಗತಿ ಪರಿಶೀಲನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರೋಟಾ ವೈರಸ್, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ -ನಗರದ ಚಾಲನಾ ಸಮಿತಿ ಚಟುವಟಿಕೆಗಳು, ರಾಷ್ಟ್ರೀಯ ಜಂತುಹುಳು ನಿವಾರಣೆ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಾಪಾಭೋವಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಾಜಗೋಪಲ್, ವೈದ್ಯಾಧಿ ಕಾರಿ ಡಾ.ವಿನಯ್, ಜಿಲ್ಲಾ ಕ್ಷಯ ರೋಗ ನಿಯಂತ್ರ ಣಾಧಿಕಾರಿ ಡಾ.ನಾಗೇಶ್ ಆರಾಧ್ಯ, ಡಾ. ಹೇಮಲತಾ ಸೇರಿದಂತೆ ವಿವಿಧ ವೈದ್ಯಾಧಿಕಾರಿಗಳು ಇದ್ದರು.