ಮಹಾ ಪ್ರವಾಹಕ್ಕೆ ಹಳ್ಳಿಗಳು ತಲ್ಲಣ
•ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ •ಜಮೀನಿನ ಮಣ್ಣು ಕೊರೆದು ಬೆಳೆ ಹಾನಿ
Team Udayavani, Aug 11, 2019, 9:56 AM IST
ಅಫಜಲಪುರ: ಪಟ್ಟಣದ ಹೊರ ವಲಯದಲ್ಲಿ ಹೊಲದಲ್ಲಿ ಪ್ರವಾಹದ ನೀರು ಬೆಳೆಗಳಿಗೆ ನುಗ್ಗಿದೆ.
ಮಲ್ಲಿಕಾರ್ಜುನ ಹಿರೆಮಠ
ಅಫಜಲಪುರ: ರಾಜ್ಯದಲ್ಲಿ ಮಳೆ ಕೊರತೆ ಇದೆ ಎಂದು ಮುಗಿಲ ಕಡೆ ಮುಖ ಮಾಡುವ ಹೊತ್ತಿಗೆ ಮಹಾರಾಷ್ಟ್ರದಲ್ಲಿ ಉಂಟಾದ ಭೀಕರ ಮಳೆಯಿಂದ ಭಾರಿ ಪ್ರಮಾಣದ ನೀರು ಭೀಮಾ ನದಿಗೆ ಹರಿದು ಬರುತ್ತಿರುವುದಿರಂದ ತಾಲೂಕಿನ ಭೀಮಾ ನದಿ ಪಾತ್ರದ ಹಳ್ಳಿಗಳು ತಲ್ಲಣಗೊಳ್ಳುತ್ತಿವೆ.
ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಅಲ್ಲಿನ ಪ್ರದೆಶಗಳು ಮಾತ್ರವಲ್ಲ ಕರ್ನಾಟಕದ ಅನೇಕ ಜಿಲ್ಲೆಗಳು, ತಾಲೂಕು ಹಳ್ಳಿಗಳು ಹಾನಿಗೀಡಾಗಿವೆ. ಅದರಲ್ಲೂ ಅಫಜಲಪುರ ತಾಲೂಕಿನ ಭೀಮಾ ನದಿ ಪಾತ್ರದ ಮಣ್ಣೂರ, ಶೇಷಗಿರಿವಾಡಿ, ಉಡಚಣ, ಮಂಗಳೂರ, ಬಂಕಲಗಾ, ಶಿವೂರ, ಸೊನ್ನ, ಹಿರಿಯಾಳ, ಹಾವಳಗಿ, ಅಳ್ಳಗಿ (ಬಿ), ಅಳ್ಳಗಿ (ಕೆ), ಗುಡ್ಡೇವಾಡಿ, ದೇಸಾಯಿ ಕಲ್ಲೂರ, ಅಫಜಲಪುರ ಪಟ್ಟಣ, ಘತ್ತರಗಿ, ತೆಲ್ಲೂರ, ದೇವಲ ಗಾಣಗಾಪುರ, ಹಳ್ಳಿ, ಚಿನಮಳ್ಳಿ, ಬಂದರವಾಡ, ಸಾಗನೂರ, ಸಂಗಾಪುರ, ಘೂಳನೂರ ಹಾಗೂ ಹತ್ತಾರು ಹಳ್ಳಿಗಳಲ್ಲಿ ಪ್ರವಾಹದ ನೀರು ಅವಾಂತರ ಸೃಷ್ಟಿಸಿದೆ.
ಜನ ಜೀವನ ಅಸ್ತವ್ಯಸ್ತ: ಮಹಾ ಮಳೆ ನೀರಿನ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ಬಹಳಷ್ಟು ಕಡೆ ಅವಾಂತರ ಸೃಷ್ಟಿಯಾಗಿದೆ. ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಮಣ್ಣೂರ, ಘತ್ತರಗಿ, ದೇವಲಗಾಣಗಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ, ಬಟ್ಟೆ ಬರೆ ನೀರಲ್ಲಿ ನೆನೆದು ಪರಿತಪಿಸುವಂತಾಗಿದೆ. ದವಸ ಧಾನ್ಯಗಳು, ಅಡುಗೆ ಸಾಮಗ್ರಿಗಳೆಲ್ಲ ನೆನೆದಿದ್ದರಿಂದ ಮನೆ ಮಂದಿ ಉಪಾವಾಸ ಇರುವಂತಾಗಿದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಮನೆಗೆ ನೀರು ನುಗ್ಗಿದ್ದರಿಂದ ನಮಗೇನು ಅರಿವೇ ಆಗಿಲ್ಲ ಎಂದು ನದಿ ದಡದ ಜನರು ಹೇಳುತ್ತಾರೆ.
ನೆರೆ ನೀರು ಗ್ರಾಮಕ್ಕೆ ನುಗ್ಗಿದ್ದರಿಂದ ಮಕ್ಕಳು ನೀರಲ್ಲಿ ಆಟವಾಡುತ್ತಿದ್ದಾರೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದ್ದು, ಸಂಬಂಧ ಪಟ್ಟವರು ಜಾಗೃತರಾಗಬೇಕಿದೆ.
ಬೆಳೆ ಹಾನಿ: ಮಹಾರಾಷ್ಟ್ರ ರಾಜ್ಯದಿಂದ ಬಂದ ಪ್ರವಾಹದ ನೀರಿನಿಂದ ನದಿ ಪಾತ್ರದ ರೈತರ ಜಮೀನುಗಳ ಮಣ್ಣು ಕೊರೆದು ಬೆಳೆ ಹಾನಿಯಾಗಿದೆ. ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರಿಗೆ ಪ್ರವಾಹ ಆಘಾತ ಉಂಟು ಮಾಡಿದೆ. ಬಿತ್ತಿದ ಬೆಳೆಯೂ ಇಲ್ಲ, ಮುಂದಿನ ದಿನಗಳಲ್ಲಿ ಬಿತ್ತಿಕೊಳ್ಳಲು ಜಮೀನು ಉಳಿದಿಲ್ಲ. ಪ್ರವಾಹದ ನೀರಿನಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗಿ ರೈತರ ಬದುಕು ಹೈರಾಣಾಗಿಸಿದೆ.
ಮಳೆ ಕೊರತೆಯಿಂದಲೂ ಬೆಳೆ ಹಾಳು: ಇನ್ನೂ ಮಹಾ ಮಳೆಯಿಂದ ಭೀಮಾ ನದಿಯಲ್ಲಿ ಪ್ರವಾಹ ಬಂದು ಬೆಳೆ ಹಾಳಾದರೆ ತಾಲೂಕಿನ ಬಹುತೇಕ ಕಡೆಯಲ್ಲಿ ಮಳೆಯೇ ಬಂದಿಲ್ಲ. ಹೀಗಾಗಿ ಮಳೆ ಕೊರತೆಯಿಂದಲೂ ಸಾಕಷ್ಟು ಬೆಳೆ ಹಾಳಾಗುತ್ತಿದೆ. ತಾಲೂಕಿನಾದ್ಯಂತ ವಾರ್ಷಿಕ ವಾಡಿಕೆ ಮಳೆ 667.3 ಮಿ.ಮೀ ಆಗಬೇಕಾಗಿತ್ತು. ಜನವರಿಯಿಂದ ಜುಲೈ ಅಂತ್ಯದವರೆಗೆ 275.4 ಮಿ.ಮೀ ಮಳೆಯಾಗಬೇಕಿತ್ತು. ಇದರಲ್ಲಿ ಕೇವಲ 226.1 ಮಿ.ಮೀ ಮಳೆಯಾಗಿದೆ. ಹೀಗಾಗಿ 49.3 ಮಿ.ಮೀ ಮಳೆ ಕೊರತೆಯಾಗಿದೆ.
ಕಳೆದ ವರ್ಷ ಭೀಕರ ಬರಗಾಲ ಆವರಿಸಿ ತಾಲೂಕಿನ ಜನ ಜಾನುವಾರುಗಳು ಪರಿತಪಿಸುವಂತಾಗಿತ್ತು. ಈಗ ಪ್ರವಾಹ ಮತ್ತು ಬರ ಎರಡರಿಂದಲೂ ತಾಲೂಕಿನ ರೈತರು, ಜನ ಸಾಮಾನ್ಯರು ಹೈರಾಣಾಗುವಂತಾಗಿದೆ.
ಸರ್ಕಾರ ಈ ಸಂದಿಗ್ಧ ಪರಿಸ್ಥಿತಿ ಅವಲೋಕಿಸಿ ನೆರೆ ಮತ್ತು ಬರ ಹಾವಳಿ ಪರಿಹಾರ ಕೊಟ್ಟು ರೈತರು, ಜನಸಾಮಾನ್ಯರಿಗೆ ಆಸರೆಯಾಬೇಕಾಗಿದೆ. ನಮಗೆ ಮಳೆ ಬಂದರೂ ಅನುಕೂಲವಾಗಿಲ್ಲ. ನೆರೆ ಬಂದರೂ ಸುಖವಾಗಿಲ್ಲ. ಬರಗಾಲ ಆವರಿಸಿ ಬಿತ್ತಿದ ಬೆಳೆ ಫಸಲು ನೀಡುವ ಲಕ್ಷಣ ಕಾಣುತ್ತಿಲ್ಲ. ಸರ್ಕಾರ ನಮ್ಮ ಪರಿಸ್ಥಿತಿ ಕಂಡೂ ಕೈ ಹಿಡಿಯದಿದ್ದರೆ, ನಾವು ಪುನಃ ಸಾವಿನ ಮನೆ ಬಾಗಿಲಿಗೆ ಬಂದು ನಿಲ್ಲುವ ಪರಿಸ್ಥಿತಿ ಬರುತ್ತದೆ ಎನ್ನುತ್ತಾರೆ ರೈತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್