ಜಿಹ್ವೇಶ್ವರ ಜಯಂತಿ ಆಚರಣೆ
Team Udayavani, Aug 14, 2019, 3:02 AM IST
ಬೆಂಗಳೂರು: ಸ್ವಕುಳಿ ಸಮುದಾಯದಲ್ಲಿ ವೇದಾಭ್ಯಾಸ, ಸಂಸ್ಕೃತ ಅಧ್ಯಯನದೊಂದಿಗೆ ಪಾಂಡಿತ್ಯ ಗಳಿಸಿದವರು ಅನೇಕರಿದ್ದಾರೆ ಎಂದು ಸಚ್ಚಿದಾನಂದ ಅದ್ವೈತ ಆಶ್ರಮದ ಅದ್ವಯಾನಂದೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಸಂಯುಕ್ತ ಸ್ವಕುಳಸಾಳಿ ಸಂಘದ ಆಶ್ರಯದಲ್ಲಿ ಮಂಗಳವಾರ ಅನಂದರಾವ್ ವೃತ್ತದ ಬಳಿಯ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಜಿಹ್ವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸಮಾಜದ ಏಳಿಗೆಗೆ ಈ ಸಮುದಾಯದ ಕೊಡುಗೆ ಅಪಾರವಾಗಿದೆ. ಎಲ್ಲ ರೀತಿಯ ಕೌಶಲತೆಯೂ ನಮಗೆ ಅಗತ್ಯ ಎಂದು ಹೇಳಿದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ನೇಕಾರ ಶಕ್ತಿ ಸಂಘಟಿತವಾದಾಗ ಎಲ್ಲ ಸೌಲಭ್ಯವನ್ನು ಪಡೆಯಲು ಸಾಧ್ಯ. ನೇಕಾರ ಸಮುದಾಯದ ಯುವ ಪೀಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೆಯೇ ಶಿಕ್ಷಣಕ್ಕೂ ಒತ್ತು ಕೊಡಬೇಕು ಎಂದು ಹೇಳಿದರು.
ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜನಾರ್ದನ ಪಾಣಿಭಾತೆ, ಡಾ.ಮನೋಹ ಡಿ.ಕರ್ವೇಕರ್, ಡಾ.ಚಂದ್ರಮೌಳಿ ಹಲ್ಬೆ ಮೊದಲಾದವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಡಾ.ಗಿರಿಧರ ಗಾಯಕ್ವಾಡ್, ಸ್ವಕುಳಿಸಾಳಿ ಸಮಾಜದ ಅಧ್ಯಕ್ಷ ಚಂದ್ರಕಾಂತ್ ಭಂಡಾರೆ ಇತರರಿದ್ದರು.