“ಜಿಂದಾಲ್ ಕಡತ ಪರಿಶೀಲಿಸಿ ಕ್ರಮ’
Team Udayavani, Sep 2, 2019, 3:00 AM IST
ಹುಬ್ಬಳ್ಳಿ: ಜಿಂದಾಲ್ಗೆ ಭೂಮಿ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿ, ಕಡತ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಜಿಂದಾಲ್ಗೆ ಭೂಮಿ ಪರಭಾರೆಗೆ ಸಂಬಂಧಿಸಿದ ಹಿಂದಿನ ಸರ್ಕಾರದ ಕಡತಗಳನ್ನು ನೋಡಿಲ್ಲ.
ಅಧಿಕಾರಿಗಳೊಂದಿಗೆ ಈ ಕುರಿತು ಯಾವುದೇ ಚರ್ಚೆ ಮಾಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ರಚಿಸಿದ್ದ ಉಪ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗಿತ್ತು. ಹಿಂದೆ, ಜಿಂದಾಲ್ಗೆ ಭೂಮಿ ನೀಡುವ ವಿಚಾರದಲ್ಲಿ ವಿರೋಧ ಮಾಡಿದ್ದು ಹೌದು. ಆದರೆ, ಹಿಂದಿನ ಸರ್ಕಾರ ಯಾವ ರಾಮಾಯಣ ಮಾಡಿದೆ ಎಂಬುದು ಕಡತ ನೋಡಿದ ಮೇಲೆಯೇ ಗೊತ್ತಾಗಲಿದೆ ಎಂದರು.