ಕುಂದಾಪುರ: ಅಪಾಯದಲ್ಲಿ ಎಪಿಎಂಸಿ ಕಟ್ಟಡ!
ಕೇವಲ 35 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು | ಮಳೆ ಬಂದರೆ ಕೊಠಡಿಯೊಳಗೆಲ್ಲ ನೀರು
Team Udayavani, Sep 8, 2019, 5:12 AM IST
ಕುಂದಾಪುರ: ಸುಮಾರು 34 ವರ್ಷಗಳ ಹಿಂದೆ ನಿರ್ಮಾಣವಾದ ಕುಂದಾಪುರ ಕೃಷ್ಯುತ್ಪನ್ನ ಮಾರಾಟ ಕೇಂದ್ರದ ಕಟ್ಟಡ ಅಪಾಯದಲ್ಲಿದೆ. ಮಳೆ ಬಂದರೆ ನೀರೆಲ್ಲ ಕೊಠಡಿಯ ಒಳಗೆ ಇರುತ್ತದೆ. ಮಳೆಗೆ ನೀರು ಸೋರಿ ಕಟ್ಟಡದ ಅಂದವಷ್ಟೇ ಹಾಳಾದುದಲ್ಲ ಆಯುಷ್ಯವೇ ಮುಗಿದಿದೆ.
ಉದ್ಘಾಟನೆಗೆ ಮುನ್ನ ಸೋರಿಕೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣಕ್ಕೆ 1978ರಲ್ಲಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಶಿಲಾನ್ಯಾಸಗೈದು, ಸಹಕಾರಿ ಸಚಿವ ಕೆ.ಎಚ್. ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಗಣವನ್ನು 1985 ಜ. 26ರಂದು ಮಾಜಿ ಶಾಸಕ ಡಾ| ಬಿ.ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಹಾಗೂ ಉಗ್ರಾಣಗಳ ಸಚಿವ ಎ.ಎಸ್. ಬಂಡಿಸಿದ್ದೇ ಗೌಡ ಉದ್ಘಾಟಿಸಿದ್ದರು. ದುರಂತದ ಗ್ರಹಚಾರ ಅಂದೇ ಆರಂಭಗೊಂಡಿತ್ತು. ಉದ್ಘಾಟನೆಗೆ ಮುನ್ನವೇ ಕಟ್ಟಡ ಸೋರುತ್ತಿತ್ತು. ಕಳಪೆ ಕಾಮಗಾರಿಗೆ ದಿಟ್ಟ ಸಾಕ್ಷಿ ಹೇಳುತ್ತಿತ್ತು. ರಚನೆಯಾಗಿ ಒಂದಷ್ಟು ಸಮಯ ಉಪಯೋಗಕ್ಕೆ ದೊರೆಯದೇ ಬಳಿಕ ಕೆಲವರ ಒತ್ತಡ, ಒತ್ತಾಯದಿಂದಾಗಿ ಉದ್ಘಾಟನೆ ನಡೆದಿತ್ತು.
ಭಯಭೀತ ಸಿಬಂದಿ
ಇದರೊಳಗೆ ಕೆಲಸ ಮಾಡಲು ಸಿಬಂದಿ ಹೆದರುತ್ತಿದ್ದಾರೆ. ಕಟ್ಟಡದ ಅವ್ಯವಸ್ಥೆ ಸಲುವಾಗಿಯೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿಗೆ ಆಹಾರ ಸಾಮಗ್ರಿ ಸರಬರಾಜು ಮಾಡುವ ಗೋದಾಮನ್ನು ಸ್ಥಳಾಂತರಿಸಲಾಗಿದೆ. ನೀರು ಸೋರಿ ಆಹಾರ ಸಾಮಗ್ರಿ ಹಾಳಾಗುವ ಭಯದಲ್ಲಿ, ಕಟ್ಟಡದ ಭದ್ರತೆ ಕುರಿತು ಧೈರ್ಯ ಸಾಲದೇ ಗೋದಾಮನ್ನು ಸ್ಥಳಾಂತರಿಸಲಾಗಿದೆ. ನಾಲ್ಕು ವರ್ಷ ಗಳ ಹಿಂದೆ ರಚನೆಯಾದ ಮಿನಿ ವಿಧಾನಸೌಧಕ್ಕೆ ಕೂಡಾ ಇಂತಹದ್ದೇ ಇತಿಹಾಸವಿದೆ. ಅದು ಕೂಡಾ ಉದ್ಘಾಟನೆಗೆ ಮುನ್ನವೇ ಕಳಪೆ ಕಾಮಗಾರಿಯ ಪ್ರದರ್ಶನ ಮಾಡಿತ್ತು. ಹಾಗಿದ್ದರೂ ಉದ್ಘಾಟನೆ ನಡೆದಿತ್ತು, ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ಆಗಿರಲಿಲ್ಲ. ಈಗ ಒಂದೊಂದೇ ಪದರ ಅಲ್ಲಿ ಕೆಲಸ ಮಾಡುವ ಸಿಬಂದಿ ಮೇಲೆ ಬೀಳುತ್ತಿದೆ. ಇದೇ ಪರಿಸ್ಥಿತಿ ಎಪಿಎಂಸಿ ಕಟ್ಟಡದಲ್ಲೂ ಇದೆ. ಎಪಿಎಂಸಿ ಕಾರ್ಯಾಲಯ, ಗೋದಾಮು, ಬೀಜನಿಗಮ, ರೈತಭವನ ಎಲ್ಲೆಲ್ಲೂ ನೀರೇ ನೀರು.
ದುರಸ್ತಿಯಿಲ್ಲ
ಕಟ್ಟಡ ಇಷ್ಟು ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಕಟ್ಟಡ ಕೆಡಹುವಂತೆಯೂ ಇಲ್ಲ. ಏಕೆಂದರೆ ಕಟ್ಟಡ ಕೆಡಹುವಷ್ಟು ಶಿಥಿಲವಾಗಿದೆ ಎಂದು ಎಂಜಿನಿಯರ್ ಪ್ರಮಾಣಪತ್ರ ನೀಡುತ್ತಿಲ್ಲ. ಕೇವಲ 35 ವರ್ಷದಲ್ಲಿ ಸರಕಾರಿ ಕಟ್ಟಡ ಕೆಡಹುವಂತೆ ಆದರೆ ಇದಕ್ಕಿಂತ ಕಳಪೆ ಬೇರೆ ಉದಾಹರಣೆ ಬೇಕೆ. ಕಟ್ಟಡದ ಎದುರು ಕಾಂಕ್ರೀಟ್, ಇಂಟರ್ಲಾಕ್ ಯಾವುದೂ ಹಾಕದ ಕಾರಣ ಕೆಸರ ಕೊಚ್ಚೆಯಲ್ಲಿ ಗೇಟಿನ ಮೂಲಕ ಒಳಗೆ ಬರುವುದೇ ಕಷ್ಟ ಎಂಬಂತಿದೆ.
ನೆರೆ ನೀರು
ಹೆದ್ದಾರಿಗೆ ತಾಗಿಕೊಂಡಂತೆ ಇರುವ ಇಲ್ಲಿ ಚರಂಡಿ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ನೆರೆ ನೀರು ನಿಂತಂತೆ ಇರುತ್ತದೆ. ಐಆರ್ಬಿ ಸಂಸ್ಥೆಯವರ ಅಸಮರ್ಪಕ ಕಾಮಗಾರಿ, ತಾಂತ್ರಿಕ ಸಲಹೆ ಪಡೆಯದೇ ನಿರ್ಮಿಸಿದಂತಿರುವ ಚರಂಡಿಯಿಂದಾಗಿ ನೀರು ಸರಾಗವಾಗಿ ಹರಿಯು ವುದಿಲ್ಲ. ಮಳೆ ಬಂದಾಗ ಸಂತೆ ತುಂಬೆಲ್ಲ ನೀರು. ವಾಹನಗಳು ಕೂಡಾ ಪ್ರಾಂಗಣದೊಳಗೆ ಪ್ರವೇಶಿಸಲು ಕಟ್ಟಪಡುತ್ತವೆ.
ಕುರೂಪಿ ಕಟ್ಟಡ
ಮಳೆನೀರಿನಿಂದಾಗಿ ಕಟ್ಟಡ ತನ್ನ ಸುರೂಪವನ್ನು ಕಳೆದುಕೊಂಡಿದೆ. ಅಲ್ಲಲ್ಲಿ ಬಿರುಕುಬಿಟ್ಟ ಗೋಡೆಯಲ್ಲಿ ನೀರು ಸುರಿದು ಗೋಡೆಯಲ್ಲೆಲ್ಲ ಹಾವಸೆ (ಪಾಚಿ) ಬೆಳೆದಿದೆ. ಆಗ ಗದ್ದೆಯಾಗಿದ್ದ ಈ ಜಾಗದಲ್ಲಿ ಉತ್ತರ ಕರ್ನಾಟಕದ ಮಳೆ ಕಡಿಮೆ ಇರುವ ಪ್ರದೇಶದ ನಕ್ಷೆಯ ಯೋಜನೆಯಂತೆ ಕಟ್ಟಡ ನಿರ್ಮಿಸಿದ ಕಾರಣ ಇಲ್ಲಿನ ಮಳೆಗೆ ಕಟ್ಟಡವನ್ನು ಹೊರುವ ಸಾಮರ್ಥ್ಯ ಈ ಜಾಗಕ್ಕಿಲ್ಲ. ಆದ್ದರಿಂದ ಭೂಪ್ರದೇಶಕ್ಕ ಧಾರಣಾ ಸಾಮರ್ಥ್ಯ ಇಲ್ಲದೇ ಕಟ್ಟಡವೇ ಸ್ವಲ್ಪ ಪ್ರಮಾಣದಲ್ಲಿ ಕುಸಿತಕ್ಕೊಳಗಾದಂತೆ ಕಾಣುತ್ತಿದೆ. ಈವರೆಗೆ ದುರಸ್ತಿ ಕಾಣದ ಈ ಕಟ್ಟಡದಲ್ಲಿ ನೀರು ಸೋರದಂತೆ ಛಾವಣಿ ಮೇಲೆ ಹಂಚು ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್