ಐಎಂಎ: ಹೆಚ್ಚುವರಿ ಪೊಲೀಸ್ ಆಯುಕ್ತರ ವಿಚಾರಣೆ
Team Udayavani, Sep 24, 2019, 3:10 AM IST
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ಭಾನುವಾರ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಆಗಮಿಸಿದ ಹೇಮಂತ್ ನಿಂಬಾಳ್ಕರ್ ಅವರನ್ನು ಸುಮಾರು ಮೂರುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಹೆಚ್ಚುವರಿ ವಿಚಾರಣೆ ಅಗತ್ಯವಿದ್ದು, ಮತ್ತೊಮ್ಮೆ ಕರೆದಾಗ ವಿಚಾರಣೆಗೆ ಬರುವಂತೆ ಸಿಬಿಐ ತನಿಖಾಧಿಕಾರಿಗಳು ಸೂಚಿರುವುದಾಗಿ ಮೂಲಗಳು ತಿಳಿಸಿವೆ.
ಐಎಂಎ ಸಮೂಹ ಸಂಸ್ಥೆಯ ಬಹುಕೋಟಿ ಹಗರಣ ಬೆಳಕಿಗೆ ಬರುವ ಮೊದಲೇ ಆ ಸಂಸ್ಥೆ ವಿರುದ್ಧ ಆರ್ಬಿಐ ಪ್ರಧಾನ ವ್ಯವಸ್ಥಾಪಕಿ ಕೆ.ಎಸ್. ಜೋಸ್ನಾ ಅವರು ನೀಡಿದ ದೂರಿನ ಆಧಾರದ ಮೇರೆಗೆ ತನಿಖೆ ನಡೆಸಿದ ಸಿಐಡಿಯ ಆರ್ಥಿಕ ಅಪರಾಧ ವಿಭಾಗಗಳ ಅಂದಿನ ಐಜಿಪಿ ಹೇಮಂತ್ ನಿಂಬಾಳ್ಕರ್ ಆರೋಪಿತ ಸಂಸ್ಥೆಯ ಪರವಾಗಿ ವರದಿ ನೀಡಿದ್ದರು. ತಮ್ಮ ಪರವಾಗಿ ವರದಿ ನೀಡಲು ಪ್ರಮುಖ ಆರೋಪಿ ಮನ್ಸೂರ್ ಖಾನ್ನಿಂದ ಲಂಚ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆ ನಡೆಸಿದೆ.
ಕೆ.ಎಸ್.ಜೋಸ್ನಾ ಅವರು 2017ರಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆಗೆ ಪತ್ರ ಬರೆದು, ಐಎಂಎ ಸಮೂಹ ಸಂಸ್ಥೆಯು ನಿಯಮ ಮೀರಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಐಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿತ್ತು. ತನಿಖೆ ನಡೆಸಿದ ಅಧಿಕಾರಿಗಳು, ದೂರುದಾರರು, ಮನ್ಸೂರ್ ಖಾನ್, ಕಂಪನಿಯ ಲೆಕ್ಕಪರಿಶೋಧಕರು ಸೇರಿದಂತೆ ಹತ್ತಾರು ಮಂದಿಯನ್ನು ವಿಚಾರಣೆ ನಡೆಸಿದ್ದರು.
ಈ ವೇಳೆ “ಕಂಪನಿಯು ಹಣಕಾಸಿನ ಸಂಸ್ಥೆಯಾಗಿರುವುದಿಲ್ಲ. ಹಣಕಾಸು ಸಂಸ್ಥೆಯಂದು ಯಾವುದೇ ಹೊಡಿಕೆದಾರರು ಹಣ ಹೂಡಿಕೆ ಮಾಡಿರುವುದಿಲ್ಲ. ಕಂಪನಿಯ ಸಾರ್ವಜನಿಕರನ್ನು ನಂಬಿಸಿ ಬಡ್ಡಿ, ಹೆಚ್ಚು ಲಾಭ ನೀಡುತ್ತೇನೆಂದು ಸಾರ್ವಜನಿಕರಿಂದ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ಮೋಸ ಮಾಡಿರುವ ಬಗ್ಗೆ ಯಾವುದೇ ಪೂರಕ ಸಾಕ್ಷ್ಯಗಳು ಇಲ್ಲದ ಕಾರಣ ಮತ್ತು ಸಂಸ್ಥೆ ಹಾಗೂ
ಸಹಭಾಗಿತ್ವದ ಸಂಸ್ಥೆಗಳು ವರ್ಷವಾರು ಆದಾಯ ಇಲಾಖೆಗೆ ಸಲ್ಲಿಸಿದ ಅಯವ್ಯಯ ಮಾಹಿತಿ ದಾಖಲೆಗಳು ಹಾಗೂ ಕಂಪನಿಯ ಪಾಲುದಾರ ಹಾಗೂ ಮುಖ್ಯಸ್ಥ ಮನ್ಸೂರ್ ಖಾನ್ ವೈಯಕ್ತಿಕ ಅಯವ್ಯಯ 2011ರಿಂದ 2018ರವರೆಗೆ ಪರಿಶೀಲಿಸಲಾಗಿದೆ. ಅಲ್ಲಿಯೂ ಯಾವುದೇ ನ್ಯೂನ್ಯತೆಗಳು ವಿಚಾರಣೆ ವೇಳೆ ಕಂಡು ಬಂದಿಲ್ಲ. ಅಲ್ಲದೆ, ವೈಯಕ್ತಿಕವಾಗಿ ಠೇವಣಿ ನೀಡಿ ಮೋಸ ಹೋಗಿರುವುದಾಗಿ ಯಾರು ಹೇಳಿಕೆ ನೀಡಲು ಮುಂದೆ ಬಂದಿಲ್ಲ. ಹೀಗಾಗಿ ಕಂಪನಿಯ ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಿಲ್ಲ’ ಎಂದು ವರದಿ ನೀಡಿದ್ದರು.
ಈ ಸಂಬಂಧ ಭಾನುವಾರ ನಿಂಬಾಳ್ಕರ್ ಅವರನ್ನು ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿರುವ ಸಿಬಿಐ ಅಧಿಕಾರಿಗಳು, ಆರ್ಬಿಐ ಅಧಿಕಾರಿಗಳು ಆರೋಪಿತ ಸಂಸ್ಥೆ ವಿರುದ್ಧ ಗಂಭೀರ ಆರೋಪ ಮಾಡಿದರೂ ಸಂಸ್ಥೆ ಹಾಗೂ ಆರೋಪಿಗಳಿಗೆ ಕ್ಲೀನ್ಚೀಟ್ ಕೊಡಲು ಕಾರಣವೇನು? ತಮ್ಮ ವರದಿಯಲ್ಲಿ ಹಣಕಾಸಿನ ಸಂಸ್ಥೆಯಾಗಿರುವುದಿಲ್ಲ ಎಂದು ಉಲ್ಲೇಖೀಸಿದ್ದಿರಿ? ಆದರೆ, ಹಣಕಾಸಿನ ಸಂಸ್ಥೆ ಅಲ್ಲದಿದ್ದರೇ ಹೇಗೆ ಸಾವಿರಾರು ಮಂದಿಯಿಂದ ಸಾವಿರಾರು ಕೋಟಿ ರೂ. ಸಂಗ್ರಹ ಮಾಡುತ್ತಾರೆ? ವಂಚನೆ ಬಗ್ಗೆ ಯಾವುದೇ ಸೂಕ್ತ ಸಾಕ್ಷ್ಯಗಳು ಇಲ್ಲ ಎಂದು ಹೇಳುತ್ತಿರಿ?
ಹಾಗಾದರೆ ಯಾವ ಉದ್ದೇಶಕ್ಕೆ ಸಂಸ್ಥೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿತ್ತು? ನಂತರ ಅದನ್ನು ಹೇಗೆ ಹಿಂದಿರುಗಿಸುತ್ತಿತ್ತು? ಎಂಬುದು ತಮ್ಮ ತನಿಖೆಯಿಂದ ತಿಳಿದು ಬಂದಿರಲಿಲ್ಲವೇ?, ವಂಚಕ ಸಂಸ್ಥೆಯಲ್ಲಿ ನ್ಯೂನ್ಯತೆಗಳಿಲ್ಲ ಎನ್ನುವುದಾದರೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಂಚನೆ ಆಗಲು ಹೇಗೆ ಸಾಧ್ಯ? ಸಂಸ್ಥೆಯ ಪರವಾಗಿ ವರದಿ ನೀಡಲು ಲಂಚ ಪಡೆದಿದ್ದಿರಾ ಎಂಬ ಆರೋಪ ಕುರಿತ ಪ್ರತಿಕ್ರಿಯೆ ಏನು? ಸೇರಿದಂತೆ ಸುಮಾರು 25ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿಚಾರಣೆ ಸಾಧ್ಯತೆ: ಈ ನಡುವೆ 2017ರಲ್ಲಿ ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಾಗ ಪೂರ್ವವಿಭಾಗದ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಈ ಮೊದಲು ತನಿಖೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಅಜಯ್ ಹಿಲೋರಿ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ಸಂಂಬಧ ಎಸ್ಐಟಿಗೆ ನೀಡಿರುವ ಹೇಳಿಕೆಯನ್ನಾಧರಿಸಿ ಸದ್ಯದಲ್ಲೇ ಅಜಯ್ ಹಿಲೋರಿ ಅವರನ್ನು ಸಹ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್ ರೇವಣ್ಣನಂಥವರಾ?; ಜಿಗ್ನೇಶ್
MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು
China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು
VS Ugrappa: ಪ್ರಜ್ವಲ್ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ
JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು