ಕುಂದಾಪುರ: ನೆರೆ ಸಂತ್ರಸ್ತರಿಗೆ 38 ಲಕ್ಷ ರೂ. ಪರಿಹಾರ
Team Udayavani, Oct 10, 2019, 5:32 AM IST
ಕುಂದಾಪುರ: ಈ ಬಾರಿಯ ಮಳೆಗಾಲದಲ್ಲಿ ನೆರೆ ಹಾನಿಯಿಂದ ಸಂತ್ರಸ್ತರಾದ 393 ಜನರಿಗೆ ಸರಕಾರದ ವತಿಯಿಂದ 38.45 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ.
ಮಳೆಗಾಲ ಎಂದಿನಂತೆ ಇರದೇ ಜೂನ್ ಇಡೀ ತಿಂಗಳು ಬೇಸಗೆಯಂತೆ ಬಿರುಬಿಸಿಲು ತುಂಬಿತ್ತು. ಕುಡಿಯುವ ನೀರಿಗೂ ತತ್ವಾರವಾಗಿತ್ತು. ಜುಲೈನಲ್ಲಿ ಮಳೆ ಬಂದು ನಂತರದ ದಿನಗಳಲ್ಲಿ ಆಗಾಗ ಮಳೆಯಾಗುತ್ತಿತ್ತು. ಈಗಲೂ ಮಳೆಯ ವಾತಾವರಣ ನಿರೀಕ್ಷೆ ಮಾಡುವಂತೆ ಇರುವುದಿಲ್ಲ. ಹಾಗಿದ್ದರೂ ಜುಲೈ, ಆಗಸ್ಟ್ನಲ್ಲಿ ಬಂದ ಮಳೆಗೆ ಕೆಲವು ನದಿಗಳು ಉಕ್ಕಿ ಹರಿದು ಅನೇಕ ಕಡೆ ನೆರೆ ಹಾನಿ ಸಂಭವಿಸಿತ್ತು.
ನಷ್ಟ ಕಡಿಮೆ
ನೆರೆ ನೀರಿನಿಂದ ಹಾನಿಯಾದಲ್ಲಿ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಮೀಕ್ಷೆ ನಡೆಸಿದೆ. ಹಾನಿಯ ವಿವರ ಸಂಗ್ರಹಿಸಿ ನಷ್ಟದ ಅಂದಾಜು ಮಾಡಿದೆ. ಇದನ್ನು ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಈ ಬಾಬ್ತು 393 ಮಂದಿಗೆ ಒಟ್ಟು 38,45,576 ರೂ. ಪರಿಹಾರ ನೀಡಲಾಗಿದೆ. ಈ ಬಾರಿ ನೆರೆ ಸಂತ್ರಸ್ತರನ್ನು ಸ್ಥಳಾಂತರಿಸುವ ಜತೆಗೆ ಜಾನುವಾರುಗಳನ್ನು ಕಟ್ಟಲು ಪ್ರತ್ಯೇಕ ಶೆಡ್ಗಳನ್ನು ಕೂಡಾ ರಚಿಸಲಾಗಿತ್ತು. ಕಳೆದ ವರ್ಷ ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು.
ಮನೆಗೆ ಪರಿಹಾರ
ಕನಿಷ್ಠ ಎಂದರೆ 5,200 ರೂ. ಪರಿಹಾರ ಒದಗಿಸಲಾಗಿದ್ದು ಶೇ.15ರ ವರೆಗೆ ಹಾನಿಯಾದರೆ ಹೆಚ್ಚಿನ ಮೊತ್ತ ಲಭಿಸುವುದಿಲ್ಲ. ಅನಂತರದ ಹಾನಿಗೆ ಪರಿಹಾರದ ಮೊತ್ತ ಜಾಸ್ತಿಯಾಗುತ್ತದೆ. ಪೂರ್ತಿಯಾಗಿ ಮನೆ ಕಳೆದುಕೊಂಡವರಿಗೆ ಸದ್ಯಕ್ಕೆ 1 ಲಕ್ಷ ರೂ. ವರೆಗೆ ನೀಡಲಾಗಿದ್ದು ಉಳಿದ 4 ಲಕ್ಷ ರೂ.ಗಳನ್ನು ರಾಜೀವ ಗಾಂಧಿ ವಸತಿ ನಿಗಮವು ತನ್ನ ನಿಯಮಗಳಿಗೆ ಅನುಸಾರವಾಗಿ ಹಂತ ಹಂತವಾಗಿ ನೀಡಲಿದೆ. ಈ ಬಾರಿ ವಸತಿ ಯೋಜನೆಯ ಎಲ್ಲ ಮನೆಗಳೂ ನೆರೆ ಸಂತ್ರಸ್ತರಿಗೆ ಮೀಸಲು ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ವಸತಿ ನಿಗಮದಲ್ಲಿ 1.6 ಲಕ್ಷ ರೂ.ವರೆಗೆ ವಿವಿಧ ವಸತಿ ಯೋಜನೆಗಳಲ್ಲಿ ಲಭ್ಯ. ಆದರೆ ಈ ವರ್ಷದಿಂದ ಅದನ್ನು ನೆರೆ ಸಂತ್ರಸ್ತರಿಗಾಗಿ 5 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ.
ಇಬ್ಬರು ಮೃತ
ನೆರೆಯಿಂದ ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದು ಅವರ ಕುಟುಂಬದವರಿಗೆ ತಲಾ 4 ಲಕ್ಷ ರೂ.ಗಳಂತೆ ಒಟ್ಟು 8 ಲಕ್ಷ ರೂ. ನೀಡಲಾಗಿದೆ. ಜಾನುವಾರು ಜೀವಹಾನಿಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ 2 ಘಟನೆಗಳಿಗೆ 46 ಸಾವಿರ ರೂ. ಪರಿಹಾರ ನೀಡಲಾಗಿದೆ. ತೋಟಗಾರಿಕೆ ಬೆಳೆ ಹಾನಿಯಾದ 63 ರೈತರಿಗೆ 1.4 ಲಕ್ಷ ರೂ. ನೀಡಲಾಗಿದೆ. ಕೃಷಿ ಬೆಳೆ ಹಾನಿಗೆ ಒಳಗಾದ 73 ರೈತರಿಗೆ 2 ಲಕ್ಷ ರೂ. ವಿತರಿಸಲಾಗಿದೆ.
ಪರಿಹಾರ ಮೊತ್ತ
ಮಳೆಯಿಂದ ವಾಸ್ತವ್ಯದ ಪಕ್ಕಾ ಮನೆ ಹಾನಿಗೀಡಾದ ಪ್ರಕರಣಗಳಲ್ಲಿ 7 ಮನೆ ಪೂರ್ಣ ಹಾನಿಗೊಳಲಾಗಿದ್ದು ಅವರಿಗೆ 6.65 ಲಕ್ಷ ರೂ. ನೀಡಲಾಗಿದೆ. ವಾಸ್ತವ್ಯದ ಮನೆ ತೀವ್ರ ಹಾನಿಗೆ ಒಳಗಾದ 11 ಮಂದಿಗೆ 7.16 ಲಕ್ಷ ರೂ. ನೀಡಲಾಗಿದೆ. 162 ಮಂದಿಯ ಮನೆ ಭಾಗಶಃ ಹಾನಿಗೀಡಾಗಿದ್ದು ಅವರಿಗೆ 8.42 ಲಕ್ಷ ರೂ. ನೀಡಿದೆ. ಕಚ್ಛಾ ಮನೆ ಪೂರ್ಣನಾಶಕ್ಕೆ ಸಂಬಂಧಿಸಿ ಮೂವರಿಗೆ 2.85 ಲಕ್ಷ ರೂ., ಭಾಗಶಃ ಹಾನಿಗೆ ಸಂಬಂಧಿಸಿ ನಾಲ್ವರಿಗೆ 12,800 ರೂ. ನೀಡಲಾಗಿದೆ. ಜಾನುವಾರು ಕೊಟ್ಟಿಗೆ ಹಾನಿಗೆ ಒಳಗಾದ 46 ಪ್ರಕರಣಗಳಲ್ಲಿ 96,600 ರೂ., ದಿನಸಿ ಸಾಮಾಗ್ರಿ ಹಾನಿಗೆ ಸಂಬಂಧಿಸಿ 20 ಕುಟುಂಬಗಳಿಗೆ 40 ಸಾವಿರ ರೂ. ನೀಡಲಾಗಿದೆ.
ಕೊರತೆಯಿಲ್ಲ
ಈ ವರ್ಷ 30 ಲಕ್ಷ ರೂ. ಮಳೆ ಹಾನಿ ಪರಿಹಾರಕ್ಕೆ ಬಿಡುಗಡೆಯಾಗಿದ್ದು ಕಳೆದ ಸಾಲಿನ 10 ಲಕ್ಷ ರೂ. ಇತ್ತು. ಆದ್ದರಿಂದ ನೆರೆ ಹಾನಿಗೆ ಸಂಬಂಧಿಸಿದಂತೆ ಹಣಕಾಸಿನ ಅಡಚಣೆ ಉಂಟಾಗಲಿಲ್ಲ.
ಬಾಕಿ ಇಲ್ಲ
ಮಳೆ ಹಾನಿಗೆ ಸಂಬಂಧಿಸಿ ಯಾರಿಗೂ ಪರಿಹಾರ ವಿತರಣೆಗೆ ಬಾಕಿ ಇಲ್ಲ. 393 ಪ್ರಕರಣಗಳಲ್ಲಿ ಒಟ್ಟು 38.45 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಫಲಾನುಭವಿಯ ಖಾತೆಗೇ ಹಣ ಜಮೆಯಾಗಿದೆ.
– ತಿಪ್ಪೇಸ್ವಾಮಿ, ತಹಶೀಲ್ದಾರ್, ಕುಂದಾಪುರ