ನವೆಂಬರ್ 22ಕ್ಕೆ “ಮನರೂಪ’
Team Udayavani, Nov 7, 2019, 5:00 AM IST
ಈಗಾಗಲೇ ತನ್ನ ಟೈಟಲ್ ಮತ್ತು ಫಸ್ಟ್ಲುಕ್ ಮೂಲಕ ಗಮನ ಸೆಳೆಯುತ್ತಿರುವ ಹೊಸಬರ “ಮನರೂಪ’ ಚಿತ್ರ ಇದೇ ನ. 22ಕ್ಕೆ ತೆರೆಗೆ ಬರುತ್ತಿದೆ. ಇದೇ ವೇಳೆ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಅಂತಿಮ ಕಸರತ್ತಿನಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಮತ್ತೆರಡು ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದೆ. ಇನ್ನು ಕರಡಿ ಗುಹೆ ಮತ್ತು ಗುಮ್ಮ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಸೈಕಾಲಜಿಕಲ್ ಥ್ರಿಲ್ಲರ್ ಕಥೆಯನ್ನು “ಮನರೂಪ’ ಚಿತ್ರದ ಮೂಲಕ ತೆರೆಮೇಲೆ ಹೇಳಲು ಹೊರಟಿದೆ ಚಿತ್ರತಂಡ.
ಚಿತ್ರದ ಬಹುಭಾಗ ಕಥೆ ದಟ್ಟಕಾನನದಲ್ಲಿ ನಡೆಯಲಿದ್ದು, ಯುವ ನಿರ್ದೇಶಕ ಕಿರಣ್ ಹೆಗಡೆ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ನವ ಪ್ರತಿಭೆಗಳಾದ ಅಮೋಘ್ ಸಿದ್ಧಾರ್ಥ್, ದಿಲೀಪ್ ಕುಮಾರ್, ಅನುಷಾ ಮೊದಲಾದವರು “ಮನರೂಪ’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಕಿರಣ್ ಹೆಗಡೆ, “ಇದೊಂದು ಇಂದಿನ ಹೊಸ ತಲೆಮಾರಿನ ಕಥೆಯಿರುವ ಚಿತ್ರ. ಐವರು ಸ್ನೇಹಿತರು ದಟ್ಟ ಕಾಡಿನೊಳಗೆ ಕರಡಿ ಗುಹೆ ಹುಡುಕಿಕೊಂಡು ಹೊರಡುತ್ತಾರೆ.
ಇದರ ನಡುವೆಯೇ ಅವರ ವ್ಯಕ್ತಿತ್ವಗಳು ಮತ್ತು ಭಾವನೆಗಳ ಚಿತ್ರಣ ತೆರೆದುಕೊಳ್ಳುತ್ತಾ ಹೋಗುತ್ತದೆ. ಸ್ನೇಹ, ಪ್ರೀತಿ, ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧ ಹೀಗೆ ಮನಸ್ಸಿನ ವಿವಿಧ ಸ್ತರಗಳ ಅನಾವರಣವಾಗುತ್ತ ಹೋಗುತ್ತದೆ. ಅದು ಹೇಗೆ ಅನ್ನೋದನ್ನ ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ. ಒಟ್ಟಾರೆ ರಿಲೀಸ್ಗೂ ಮುನ್ನವೇ ಸಿನಿಪ್ರಿಯರು ಮತ್ತು ಚಿತ್ರರಂಗದ ಒಂದಷ್ಟು ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿರುವ “ಮನರೂಪ’ ಎಷ್ಟರ ಮಟ್ಟಿಗೆ ಜನರ ಮನ ಮುಟ್ಟುತ್ತದೆ ಅನ್ನೋದೆ ಇದೇ ತಿಂಗಳ ಕೊನೆಗೆ ಗೊತ್ತಾಗಲಿದೆ.