ಘಟಪ್ರಭಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ , ಕಾರಣ ನಿಗೂಢ
Team Udayavani, Nov 10, 2019, 6:14 PM IST
ಬಾಗಲಕೊಟೆ : ಘಟಪ್ರಭಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಚಿಚಖಂಡಿ ಬಳಿ ರವಿವಾರ ಸಂಜೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದ ಮೌನೇಶ ಪುಂಡಲೀಕ ಕಂಬಾರ (28) ಹಾಗೂ ಅಕ್ಷತಾ ಮೌನೇಶ ಕಂಬಾರ (25) ಎಂದು ಗುರುತಿಸಲಾಗಿದೆ.
ಮೌನೇಶ, ಜೆ.ಕೆ. ಸಿಮೆಂಟ್ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದು, ಪತ್ನಿಯೊಂದಿಗೆ ಬೈಕ್ ಮೇಲೆ ಚಿಚಖಂಡಿ ಸೇತುವೆ ಬಳಿ ಬಂದು ಸೇತುವೆ ಮೇಲೆ ಬೈಕ್ ನಿಲ್ಲಿಸಿ ತಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ನದಿಗೆ ಹಾರಿದ್ದಾರೆ.
ದಂಪತಿಗಳ ಶವ ಹುಡುಕುವ ಕಾರ್ಯಾಚರಣೆ ನಡೆದಿದ್ದು, ಸಂಜೆಯ ವರೆಗೂ ಶವ ಪತ್ತೆಯಾಗಿರಲಿಲ್ಲ.
ಮುಧೋಳ, ಲೋಕಾಪುರ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ, ದಂಪತಿ ಶವ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ಕುರಿತು ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.