ಪ್ರತ್ಯೇಕ ಪ್ರಕರಣಗಳಲ್ಲಿ ಮೂವರಿಗೆ ಗುಂಡೇಟು
Team Udayavani, Nov 25, 2019, 3:07 AM IST
ಬೆಂಗಳೂರು: ವಿದ್ಯಾರ್ಥಿ ಹತ್ಯೆ ಹಾಗೂ ಉದ್ಯಮಿ ಹತ್ಯೆ ಯತ್ನ ಪ್ರಕರಣದಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳಿಗೆ ಉತ್ತರ ವಿಭಾಗ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ನಂದಿನಿ ಲೇಔಟ್ನ ಕೂಲಿ ನಗರ ನಿವಾಸಿ ರೌಡಿಶೀಟರ್ ತಮಿಳ್ ಪ್ರಭು(34) ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಆತನ ಹಲ್ಲೆಯಿಂದ ಪೀಣ್ಯ ಠಾಣೆ ಸಿಬ್ಬಂದಿ ರಂಗನಾಥ್ ಮತ್ತು ರಾಮಮೂರ್ತಿ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ಕಿರಣ್ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ. ತಮಿಳ್ ಪ್ರಭು ವಿರುದ್ಧ ನಂದಿನಿ ಲೇಔಟ್ ಠಾಣೆ ಸೇರಿ ನಗರದ ಕೆಲ ಠಾಣೆಗಳಲ್ಲಿ ದರೋಡೆ, ಕೊಲೆ, ಹಲ್ಲೆ ಆರೋಪಗಳಿವೆ. ನ.6ರಂದು ಪೀಣ್ಯದ ಟಾರ್ಪಲ್ ಕಾರ್ಖಾನೆ ಮಾಲೀಕ ಸೋಮನಾಥ್ ಎಂಬವರ ಹತ್ಯೆಗೆ ಮುಂದಾಗಿದ್ದರು ಎಂದು ಪೊಲೀಸರು ಹೇಳಿದರು.
ಉದ್ಯಮಿ ಸೋಮನಾಥ್ ಮತ್ತು ಅವರ ಅಳಿಯ ನಾಗೇಶ್ ನಡುವೆ ವೈಯಕ್ತಿಕ ಹಾಗೂ ಕಾರ್ಖಾನೆ ವಿಚಾರಕ್ಕೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ನಾಗೇಶ್ ಮಾವನ ಹತ್ಯೆಗೆ ಜ್ಞಾನಭಾರತಿ ನಿವಾಸಿ ಕೃಷ್ಣೋಜಿರಾವ್ ಎಂಬಾತನಿಗೆ 10 ಲಕ್ಷ ರೂ. ಸುಪಾರಿ ಕೊಟ್ಟಿದ್ದ. ವಿಕಲಚೇತನಾಗಿರುವ ಕೃಷ್ಣೋಜಿರಾವ್ ತನ್ನ ಸಹಚರ ತಮಿಳ್ ಪ್ರಭುಗೆ ಸುಪಾರಿ ವಹಿಸಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ತನ್ನ ಆಪ್ತ ಕಿರಣ್ ಜತೆ ಸೇರಿಕೊಂಡು ನ.6ರಂದು ಬೆಳಗ್ಗೆ ಬೈಕ್ನಲ್ಲಿ ಕಾರ್ಖಾನೆಗೆ ಹೋಗುತ್ತಿದ್ದ ಸೋಮನಾಥ್ರನ್ನು ಹಿಂಬಾಲಿಸಿ, ಪೀಣ್ಯ ಬಳಿ ಅಡ್ಡಗಟ್ಟಿ ಕೊಲೆಗೆ ಯತ್ನಿಸಿದ್ದರು.
ಆದರೆ, ಸೋಮನಾಥ್ ಚೀರಾಟ ಕೇಳಿ ಸ್ಥಳೀಯರು ಜಮಾಯಿಸಿದರಿಂದ ಆರೋಪಿಗಳೂ ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ಸುಪಾರಿ ರಹಸ್ಯ ಬಯಲಾಗಿದ್ದು, ಅಳಿಯ ನಾಗೇಶ್ ಕೈವಾಡ ಗೊತ್ತಾಗಿತ್ತು. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃಷ್ಣೋಜಿರಾವ್ ಪಾತ್ರ ಕಂಡು ಬಂದಿದೆ. ಬಳಿಕ ಈತನನ್ನು ಬಂಧಿಸಿದಾಗ ತಮಿಳ್ ಪ್ರಭು ವಿಚಾರ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಹೇಳಿದರು.
ಬಲಗಾಲಿಗೆ ಗುಂಡೇಟು: ಆರೋಪಿಗಳ ಮೇಲೆ ನಿಗಾವಹಿಸಿದ್ದ ಪೊಲೀಸರಿಗೆ ಶನಿವಾರ ತಡರಾತ್ರಿ ಪೀಣ್ಯ ಸಮೀಪದ ತಿಪ್ಪೇನಹಳ್ಳಿಯಲ್ಲಿ ಆರೋಪಿ ದರೋಡೆ ಮಾಡಿದ್ದ. ಅಲ್ಲದೆ, ಒಬ್ಬರಿಂದ ಹಣ ಮತ್ತು ಮೊಬೈಲ್ ಹಾಗೂ ದ್ವಿಚಕ್ರ ವಾಹನ ಕಿತ್ತುಕೊಂಡಿದ್ದ. ಅಲ್ಲದೆ, ಅದೇ ದ್ವಿಚಕ್ರ ವಾಹನದಲ್ಲಿ ತನ್ನ ಸಹಚರರ ಜತೆ ತಿಪ್ಪೇನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಇರುವ ಬಗ್ಗೆ ಪೀಣ್ಯ ಠಾಣೆ ಇನ್ಸ್ಪೆಕ್ಟರ್ ಮುದ್ದುರಾಜುಗೆ ಭಾನುವಾರ ನಸುಕಿನಲ್ಲಿ ಮಾಹಿತಿ ಲಭ್ಯವಾಗಿತ್ತು.
ಇನ್ಸ್ಪೆಕ್ಟರ್ ತಮ್ಮ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿದ್ದರು. ಆಗ ಬಂಧಿಸಲು ಹೋದ ಹೆಡ್ ಕಾನ್ಸ್ಟೇಬಲ್ಗಳಾದ ರಾಮಮೂರ್ತಿ ಮತ್ತು ರಂಗಸ್ವಾಮಿ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ. ತಕ್ಷಣ ಇನ್ಸ್ಪೆಕ್ಟರ್ ಮುದ್ದುರಾಜು ಒಂದು ಸುತ್ತು ಗಾಳಿಯಲ್ಲಿ ಗುಂಡುಹಾರಿಸಿ ಎಚ್ಚರಿಕೆ ನೀಡಿದ್ದರು. ಶರಣಾಗದೆ ದಾಳಿ ಮುಂದುವರಿಸಿದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ವಿದ್ಯಾರ್ಥಿ ಹತ್ಯೆಗೈದ ಆರೋಪಿಗಳಿಗೆ ಗುಂಡೇಟು: ಕ್ರಿಕೆಟ್ ಆಡುವ ವಿಚಾರದಲ್ಲಿ ಬಿಬಿಎ ವಿದ್ಯಾರ್ಥಿ ಉಮಾಮಹೇಶ್ವರ್(20)ನನ್ನು ಹತ್ಯೆಗೈದಿದ್ದ ಇಬ್ಬರು ಆರೋಪಿಗಳಿಗೆ ನಂದಿನಿ ಲೇಔಟ್ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಎಚ್ಎಂಟಿ ಲೇಔಟ್ನ ನಾಗಸಂದ್ರ ನಿವಾಸಿ ರೋಹಿತ್ (19) ಮತ್ತು ಚಂದನ್ ಅಲಿಯಾಸ್ ಎಬಿಸಿಡಿ ಚಂದು (19) ಬಂಧಿತರು.
ಆರೋಪಿಗಳ ಹಲ್ಲೆಯಿಂದ ಪ್ರೊಬೆಷನರಿ ಪಿಎಸ್ಐ ನಿತ್ಯಾನಂದ ಮತ್ತು ಕಾನ್ಸ್ಟೇಬಲ್ ಬಸಣ್ಣ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳು ನ.20ರಂದು ರಾತ್ರಿ ಬಿಬಿಎ ವಿದ್ಯಾರ್ಥಿ ಉಮಾಮಹೇಶ್ವರ್ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ರೋಹಿತ್ ಮತ್ತು ಚಂದನ್ 16 ವರ್ಷ ಇದ್ದಾಗಲೇ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಾಲಮಂದಿರಕ್ಕೆ ಸೇರಿದ್ದರು. ಅವರ ವಿರುದ್ಧ ನಂದಿನಿ ಲೇಔಟ್ ಮತ್ತು ರಾಜಗೋಪಾಲನಗರ ಠಾಣೆಯಲ್ಲಿ ಕಳ್ಳತನ ಪ್ರಕರಣಗಳಿವೆ.
ಉಮಾಮಹೇಶ್ವರ್ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಒಂದೇ ಏರಿಯಾದಲ್ಲಿ ಇದ್ದು, ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಬೆಳೆದು ಜಗಳ ಮಾಡಿಕೊಂಡಿದ್ದರು. ಆರೋಪಿಗಳು ತಮ್ಮ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಲು ರೌಡಿ ಚಟುವಟಿಕೆಯಲ್ಲಿ ತೊಡಗಿದ್ದರು. ಇತ್ತೀಚೆಗೆ ಕ್ರಿಕೆಟ್ ಆಡುವ ವೇಳೆ ಉಮಾಮಹೇಶ್ವರ್, ರೋಹಿತ್ ಮೇಲೆ ಹಲ್ಲೆ ನಡೆಸಿದ್ದ. ಇದೇ ವಿಚಾರಕ್ಕೆ ಕೋಪಗೊಂಡಿದ್ದ ಆರೋಪಿಗಳು ಉಮಾಮಹೇಶ್ವರ್ನನ್ನು ಹತ್ಯೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳು ಭಾನುವಾರ ಮುಂಜಾನೆ ರಾಜಗೋಪಾಲನಗರ ವ್ಯಾಪ್ತಿಯ ಜಿಕೆಡಬ್ಲೂé ಲೇಔಟ್ನಲ್ಲಿ ಅವಿತುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಬಳಿಕ ನಂದಿನಿ ಲೇಔಟ್ ಠಾಣೆ ಇನ್ಸ್ಪೆಕ್ಟರ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಲು ಹೋದಾಗ ವೇಳೆ ಪಿಎಸ್ಐ ನಿತ್ಯಾನಂದ ಮತ್ತು ಕಾನ್ಸ್ಟೇಬಲ್ ಬಸಣ್ಣ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು