ದಲಿತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
Team Udayavani, Dec 3, 2019, 4:29 PM IST
ರಾಯಚೂರು: ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ದಲಿತರ ಮೇಲೆ ಒಂದಲ್ಲ ಒಂದು ಹಲ್ಲೆ, ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ. ಚಂದ್ರಬಂಡಾ ರಸ್ತೆಯಲ್ಲಿನ ಆಶ್ರಯ ಕಾಲೋನಿ ನಿವಾಸಿ ಮಲ್ಲಿಕಾರ್ಜುನ ಮೇಲೆಹಲ್ಲೆ ನಡೆದಿದೆ. ಪಂಚಾಯತ್ ರಾಜ್ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಜಮೀರ ಅಹ್ಮದ್ ವಿರುದ್ಧ ದೂರು ನೀಡಿದ್ದೇ ಘಟನೆಗೆ ಕಾರಣವಾಗಿದೆ. ಜಮೀರ ಅಹಮ್ಮದ್ ಅವರ ಕುಟುಂಬದವರು ಹಾಗೂ ಇತರರು ಸೇರಿ ಹಲ್ಲೆ ಮಾಡಿದ್ದಾರೆ. ದಲಿತರ ಮೇಲೆ ಮಾಡಿದವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಮುಖಂಡರಾದ ಎಂ.ಮಾರೆಪ್ಪ, ನರಸಿಂಹ, ಹುಸೇನಪ್ಪ ನಾಯಕ, ಎ.ರಾಮು, ಚಂದ್ರು, ವೀರಭದ್ರಯ್ಯ ಸ್ವಾಮಿ, ಆರ್. ಆಂಜನೇಯ, ಮಹೇಶ, ಹುಸೇನ್, ಶಂಶಾವಲಿ ಇತರರು ಇದ್ದರು.