ಈಶಾನ್ಯ ರಾಜ್ಯ ಪ್ರತಿಭಟನೆ; ಎಚ್ಚರ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ; ಭಾರತೀಯ ಸೇನೆಯ ಟ್ವೀಟ್
Team Udayavani, Dec 14, 2019, 11:51 AM IST
ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ 2019 ಅನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾಪಡೆ ಮುನ್ನೆಚ್ಚರಿಕೆ ಸಲಹೆಯನ್ನು ನೀಡಿದೆ. ಈಶಾನ್ಯ ರಾಜ್ಯಗಳಲ್ಲಿ ಕೆಲವರು ಸೇನಾ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಭಾರತೀಯ ಸೇನೆ ಮನವಿ ಮಾಡಿಕೊಂಡಿದೆ.
ಸುಳ್ಳು ಸುದ್ದಿ ಮತ್ತು ಪ್ರಚಾರವನ್ನು ನಂಬಬೇಡಿ. ಕೆಲವರು ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಊಹಾಪೋಹದ ಸುದ್ದಿಯನ್ನು ನಂಬಬೇಡಿ ಎಂದು ಭಾರತೀಯ ಸೇನೆಯ ಅಧಿಕೃತ ಟ್ವೀಟರ್ ಖಾತೆಯಲ್ಲಿ ವಿನಂತಿಸಿಕೊಂಡಿದೆ.
ಅಸ್ಸಾಂನ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಸೇನಾಪಡೆಯನ್ನು ಗುರುವಾರ ರವಾನಿಸಲಾಗಿದೆ. ಬುಧವಾರದ ನಂತರ ಅಸ್ಸಾಂನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ ನಾಲ್ವರು ಸಾವನ್ನಪ್ಪಿದ್ದಾರೆ. ಅಸ್ಸಾಂನ ಟಿನ್ ಸುಕೀಯಾ, ದಿಬ್ರುಗಢ್ ಮತ್ತು ಗುವಾಹಟಿಯಲ್ಲಿ ಹಿಂಸಾಚಾರ ತೀವ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 22ರವರೆಗೂ ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.