ಅಂಕನಹಳ್ಳಿ ಸ.ಪ್ರೌ.ಶಾಲಾ ವಿದ್ಯಾರ್ಥಿಗಳಿಗೆ ಅರಣ್ಯದಲ್ಲಿ ವನ ಮಾಹಿತಿ
Team Udayavani, Dec 17, 2019, 5:27 AM IST
ಶನಿವಾರಸಂತೆ: ಸಮಿಪದ ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯ ನಿರ್ಮಲ ಇಕೋ ಕ್ಲಬ್, ವಿದ್ಯಾರ್ಥಿ ರೋಟರಿ ಇಂಟರಿಯಾಕ್ಟ್ ಕ್ಲಬ್ ಮತ್ತು ಶನಿವಾರಸಂತೆ ಅರಣ್ಯ ಇಲಾಖೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಅರಣ್ಯದಲ್ಲಿ ವನ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಅಂಕನಹಳ್ಳಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು, ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಮತ್ತು ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಗಳಿಂದ ಕರೆಸಿಕೊಂಡಿದ್ದ 7 ಎತ್ತಿನ ಗಾಡಿಯಲ್ಲಿ ಕುಳಿತುಕೊಂಡು ಶಾಲೆಯಿಂದ ಸಮಿಪದ ಗಂಗವಾರ ಮೀಸಲು ಅರಣ್ಯಕ್ಕೆ ತೆರಳಿದರು.
ಮೀಸಲು ಅರಣ್ಯದೊಳಗೆ ದಿನದ ಮಹತ್ವದ ಕುರಿತು ಮಾಹಿತಿ ಸಭೆಯನ್ನು ನಡೆಸಲಾಯಿತು. ಅರಣ್ಯ, ಪರಿಸರ, ಮರಗಿಡ, ಪ್ರಾಣಿ-ಪಕ್ಷಿಗಳು ಸೇರಿದಂತೆ ಅರಣ Â ಮತ್ತು ವನ್ಯ ಸಂಪತ್ತಿನ ಮಹತ್ವದ ಬಗ್ಗೆ ಶನಿವಾರಸಂತೆ ಉಪ ಅರಣ್ಯ ವಲಯಾಧಿಕಾರಿಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಜಿ.ಎಂ.ಹೇಮಂತ್ ಮಾಹಿತಿ ನೀಡಿ-ವನ್ಯ ಸಂಪತ್ತು ರಾಷ್ಟ್ರದ ಬಹುದೊಡ್ಡ ಸಂಪತ್ತಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿ ಮುಂತಾದ ಸ್ವಾಭಾವಿಕ ಪರಿಸರದ ಬಗ್ಗೆ ಅರಿವು ಹೊಂದುವ ಅಗತ್ಯ ಇದೆ ಎಂದರು. ಮನುಷ್ಯನ ಬದುಕಿಗೆ ಅರಣ್ಯ ಮತ್ತು ಪರಿಸರ ಮಹತ್ವದ ಪಾತ್ರವಹಿಸುತ್ತದೆ, ಅರಣ್ಯವನ್ನು ಉಳಿಸಿ ಬೆಳೆಸಿದರೆ ಮಾತ್ರ ಉತ್ತಮ ಮಳೆ ಬೆಳೆಯಾಗುತ್ತದೆ ಈ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ಅರಣ್ಯದ ಮಹತ್ವವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಅರಣ್ಯದಲ್ಲಿ ಮಾಹಿತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.
ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಸ್.ವಿ.ಶುಭು ಮಾತನಾಡಿ-ರೋಟರಿ ಸಂಸ್ಥೆಯು ಸಮಾಜ ಸೇವೆಯ ಜೊತೆಯಲ್ಲಿ ಸರಕಾರಿ ಶಾಲೆಗಳು ಮತ್ತು ವಿದ್ಯಾರ್ಥಿಗಳ ಪ್ರಗತಿಗಾಗಿ ಸೇವೆ ಸಹಕಾರ ನೀಡುತ್ತಿದೆ ಎಂದರು.
ರೋಟರಿ ಸಂಸ್ಥೆ ವಿದ್ಯಾರ್ಥಿಗಳಿಗೆ ಪರಿಸರ, ಆರೋಗ್ಯ, ಸ್ವಚ್ಚತೆ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಜೊತೆಯಲ್ಲಿ ಶಾಲೆಗಳಲ್ಲಿ ರೋಟರಿ ಇಂಟರಿಯಾಕ್ಟ್ ಕ್ಲಬ್ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಕಲಿಸಿಕೊಡುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ ಅರಣ್ಯ ಸಂಪತ್ತಿನ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಶ್ಲಾಘನಿಯ ಎಂದರು.
ವನ ಮಾಹಿತಿ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಈ ಸಂದರ್ಭ ಇಂದಿನ ದಿನದಲ್ಲಿ ಹಳ್ಳಿಯಲ್ಲಿ ತೀರ ಅಪರೂಪವಾಗಿರುವ ಮಧ್ಯೆ ಅಂಕನಹಳ್ಳಿ ಸಮಿಪದ ಅಮ್ಮಳ್ಳಿ ಗ್ರಾಮದ ಎತ್ತಿನ ಗಾಡಿ ಸೇವೆಯನ್ನು ಒದಗಿಸಿಕೊಟ್ಟ 7 ಮಂದಿ ಎತ್ತಿನಗಾಡಿ ಮಾಲೀಕರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ, ಅರಣ್ಯ ರಕ್ಷಕರಾದ ಪ್ರಶಾಂತ್, ರೋಹಿತ್, ಜಯಕುಮಾರ್, ಎಸ್ಡಿಎಂಸಿ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಗ್ರಾಮದ ಪ್ರಮುಖರು ಹಾಜರಿದ್ದರು. ತದನಂತರ ವನ ಬೋಜನ ಕಾರ್ಯಕ್ರಮ ಏರ್ಪಡಿಸಲಾಯಿತು.