ಹೇಗೆ ಮಾತನಾಡಬೇಕು, ಡ್ರೆಸ್‌ ಮಾಡಿಕೊಳ್ಳಬೇಕೆಂದು ತಿಳಿದಿರಲಿ


Team Udayavani, Dec 21, 2019, 6:45 AM IST

dc-45

ಯಾವ ಸಂದರ್ಭದಲ್ಲಿ ಯಾವ ರೀತಿ ಮಾತನಾಡಬೇಕು, ನಮ್ಮ ಬಾಯಿಯಿಂದ ಕೆಟ್ಟ ವಾಸನೆ
ಬರುತ್ತಿದೆಯೇ, ಮೈ ದುರ್ಗಂಧ ಬೀರುತ್ತಿದೆಯೇ? ಇವೆಲ್ಲ ಸಂಗತಿಗಳು ಚಿಕ್ಕವೆನಿಸಿದರೂ ಇವುಗಳ ಬಗ್ಗೆ ನಮಗೆ ಅರಿವಿರಲೇಬೇಕು.

ಯಶಸ್ಸಿಗೆ “ಉತ್ತಮ ಅವಕಾಶ’ ಮುಖ್ಯ ಎನ್ನುವುದು ಎಷ್ಟು ಸತ್ಯವೋ, “ಉತ್ತಮ ತಯಾರಿ’ಯೂ ಅಷ್ಟೇ ಮುಖ್ಯವಾಗುತ್ತದೆ. ಆದರೆ ನಿಮ್ಮಲ್ಲಿ ತಯಾರಿ ಇದ್ದರೂ ಅವಕಾಶ ಎದುರಾಗದಿದ್ದರೆ ಅಥವಾ ಅವಕಾಶ ಎದುರಾದಾಗ ನಿಮ್ಮಲ್ಲಿ ತಯಾರಿಯೇ ಇಲ್ಲದಿದ್ದರೆ ಯಶಸ್ಸು ದಕ್ಕದು. ಅಂದರೆ, ಉತ್ತಮ ಅವಕಾಶ ಮತ್ತು ಉತ್ತಮ ತಯಾರಿಯ “ಸಮಾಗಮ’ ಬಹಳ ಮುಖ್ಯ ಎಂದಾಯಿತು. ಉತ್ತಮ ಅವಕಾಶ ಬಂದಾಗ ಅದನ್ನು ಗುರುತಿಸಿ ಗಟ್ಟಿಯಾಗಿ ಹಿಡಿದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಆದರೆ ನೀವು ನಿರಂತರ ಸಿದ್ಧತೆ, ಪ್ರಯತ್ನ ನಡೆಸುತ್ತಲೇ ಇರಬೇಕು.

ಇದು ಎಲ್ಲರಿಗೂ ಅನ್ವಯವಾಗುವ ಮಾತು. ನಾನು 20 ವರ್ಷಗಳಿಂದ ಸಿನೆಮಾ ರಂಗದಲ್ಲಿ ಇದ್ದೇನೆ, ಮಣಿರತ್ನಂ ಸೇರಿದಂತೆ ಘಟಾನುಘಟಿ ನಿರ್ದೇಶಕರ ಸಿನೆಮಾಗಳಲ್ಲಿ ನಟಿಸಿದ್ದೇನೆ, ಹಣ ಸಂಪಾದಿಸಿದ್ದೇನೆ, ಹಾಗೆಂದು ನನಗೆಲ್ಲ ಗೊತ್ತಿದೆ ಎಂದು ಸುಮ್ಮನೇ ಕೂತಿಲ್ಲ. ಈಗಲೂ ಸಮಯ ಸಿಕ್ಕಾಗಲೆಲ್ಲ ಆ್ಯಕ್ಟಿಂಗ್‌ ಕ್ಲಾಸುಗಳಿಗೆ ಹೋಗುತ್ತೇನೆ, ಯೂಟ್ಯೂಬ್‌ನಲ್ಲಿ ಬರುವ ಆ್ಯಕ್ಟಿಂಗ್‌ ಕುರಿತಾದ ವಿಡಿಯೋಗಳನ್ನು, ಸಹ ನಟರನ್ನು ನೋಡಿ ಕಲಿಯುತ್ತೇನೆ, ಹಿರಿಯ ನಟರ ಸಲಹೆಗಳನ್ನು ಪಾಲಿಸುತ್ತೇನೆ, ನಿರ್ದೇಶಕರಿಂದ ಪಾಠ ಹೇಳಿಸಿಕೊಳ್ಳುತ್ತೇನೆ. ನೀವು ಯಾವುದೇ ಕೆಲಸದಲ್ಲಿ ಇರಿ, ಅದರಲ್ಲಿ ನಿಮ್ಮ ಪ್ರಯತ್ನ ಅತ್ಯುತ್ತಮವಾಗಿ ಇರಬೇಕು. ಇಲ್ಲದಿದ್ದರೆ, ಆ ಕೆಲಸಕ್ಕೆ ನೀವು ಅನ್ಯಾಯ-ಅವಮಾನ ಮಾಡುತ್ತಿದ್ದೀರಿ ಎಂದೇ ಅರ್ಥ.

ಪ್ರಸೆಂಟೇಷನ್‌ ತುಂಬಾ ಮುಖ್ಯ
ನನಗೆ ಮುಂಚಿನಿಂದಲೂ ಸಂವಹನ ಕಲೆಯ ಬಗ್ಗೆ ಬಹಳ ಒಲವಿದೆ. ಸಿನೆಮಾ ರಂಗಕ್ಕೆ ಬರುವುದಕ್ಕಿಂತ ಮುನ್ನ ಅನೇಕ ವರ್ಷ ದೇಶ-ವಿದೇಶಗಳ ಕಂಪನಿಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಸಂವಹನದ ಮಹತ್ವವನ್ನು ತಿಳಿಸುವ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದೇನೆ. ಈ ರೀತಿಯ ಕಾರ್ಯಾಗಾರವನ್ನು ನಡೆಸಲು ನನಗೆ ಸ್ಫೂರ್ತಿಯಾದದ್ದು ಕಾಲೇಜಿನ ದಿನಗಳಲ್ಲಿ ನಡೆದ ಒಂದು ಘಟನೆ. ಕಾಲೇಜು ದಿನಗಳಲ್ಲೇ ನಾನು ಎನ್‌ಸಿಸಿಯಲ್ಲಿ ಮುಂಚೂಣಿಯಲ್ಲಿದ್ದೆ, ಭಾರತವನ್ನು ಪ್ರತಿನಿಧಿಸಿ ವಿದೇಶಗಳಿಗೆಲ್ಲ ಹೋಗಿ ಭಾಷಣ-ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬರುತ್ತಿದ್ದೆ. ಹೀಗಾಗಿ, ಹೇಗೆ ಮಾತನಾಡಬೇಕು, ಯಾವ ಸಂದರ್ಭದಲ್ಲಿ ಎಂಥ ಬಟ್ಟೆ ಧರಿಸಬೇಕು, ನಮ್ಮ ನಿಲುವು ಹೇಗಿರಬೇಕು ಎನ್ನುವುದನ್ನೆಲ್ಲ ಕಲಿಯಲಾರಂಭಿಸಿದ್ದೆ.

ಇದರ ಬಗ್ಗೆ ಅರಿವಿದ್ದ ನನ್ನ ಕೆಲ ಗೆಳೆಯರು ಒಂದು ದಿನ ನನ್ನ ಬಳಿ ಬಂದರು. “ಮಾಧವನ್‌, ನಾವು ಇಂಜಿನಿಯರಿಂಗ್‌ನಲ್ಲಿ ತುಂಬಾ ಉತ್ತಮ ಕೌಶಲ ಹೊಂದಿದ್ದೇವೆ. ಆದರೆ ಕಾಲೇಜು ಕ್ಯಾಂಪಸ್‌ಗೆ ಟಾಟಾ ಮತ್ತು ಕಿರ್ಲೋಸ್ಕರ್‌ಗಳಂಥ ಕಂಪನಿಗಳು ಬಂದಾಗ ಸಂದರ್ಶನದಲ್ಲಿ ನಮಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ, ನಮ್ಮ ಐಡಿಯಾಗಳನ್ನು ಸ್ಪಷ್ಟವಾಗಿ ಹೇಳಲು ಚಡಪಡಿಸಿಬಿಡುತ್ತೇವೆ.’ ಎಂದರು. ಅದು ಸತ್ಯವೂ ಆಗಿತ್ತು. ಈ ದೊಡ್ಡ ದೊಡ್ಡ ಕಂಪನಿಗಳಿಂದ ಕಾಲೇಜಿಗೆ ಸಂದರ್ಶನ ಮಾಡಲು ಬರುತ್ತಿದ್ದವರೆಲ್ಲ, ಈ ಟೆರಿಕಾಟನ್‌ ಶರ್ಟ್‌, ಪ್ಯಾಂಟ್‌ ಹಾಕಿಕೊಂಡು ಹವಾಯಿ ಚಪ್ಪಲಿಯಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳನ್ನು ಕಣ್ಣೆತ್ತಿ ನೋಡುತ್ತಲೇ ಇರಲಿಲ್ಲ.

ನಾನು ನನ್ನ ಗೆಳೆಯರಿಗೆಲ್ಲ ಕೂಡಿಸಿಕೊಂಡು ಹೇಳಿದೆ-“ನೋಡಿ ಸಮಸ್ಯೆ ಇರೋದು ನಮ್ಮಲ್ಲಿಯೇ. ನಾವೇ ಇದನ್ನು ಪರಿಹರಿಸಿಕೊಳ್ಳಬೇಕು. ಮೊದಲ ನೋಟದಲ್ಲೇ ಸಂದರ್ಶಕರ ಗಮನ ಸೆಳೆಯುವಂತೆ ನಾವು ಇರಬೇಕು. ಇಲ್ಲದಿದ್ದರೆ ನಮ್ಮಲ್ಲಿನ ಟ್ಯಾಲೆಂಟ್‌ ಅನ್ನು ಅವರು ಹೇಗೆ ಗುರುತಿಸಬಲ್ಲರು ಹೇಳಿ?’ ಎಂದೆ.

ಅವತ್ತು ನಾನವರಿಗೆ ಒಂದು ಸಲಹೆ ನೀಡಿದೆ “ನಾಳೆಯಿಂದ ಮೂರು ದಿನ ಬೆಳಗ್ಗೆ 5 ಗಂಟೆಗೆ ಹಾಸ್ಟೆಲ್‌ನ ಮೇಲೆ ಏರಿ, ಅಲ್ಲಿ ಸಂದರ್ಶನದಲ್ಲಿ ಹೇಗೆ ಭಾಗವಹಿಸಬೇಕು ಎನ್ನುವ ಬಗ್ಗೆ ಪ್ರಾಕ್ಟೀಸ್‌ ಮಾಡೋಣ…’
ಅವರು ಕೂಡಲೇ ನನ್ನ ಸಲಹೆಗೆ ಒಪ್ಪಿಕೊಂಡರು. ಮರುದಿನ ಸರಿಯಾಗಿ 5 ಗಂಟೆಗೆ ಅವರು ನನ್ನ ರೂಮಿಗೆ ಬಂದರು. ನಾವೆಲ್ಲ ಟೆರೇಸ್‌ಗೆ ಹೋದೆವು. ಅಲ್ಲಿ ನಾನು ಅವರಿಗೆ ಹೇಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳಬೇಕು ಎನ್ನುವ ಬಗ್ಗೆ ಹೇಳಿಕೊಡಲಾರಂಭಿಸಿದೆ. ಅವರಿಗೆ ನಾನು ಕಲಿತ ಅತ್ಯಂತ ಸರಳ ವಿಷಯಗಳ ಬಗ್ಗೆ ಹೇಳಿಕೊಟ್ಟೆ. ಹೇಗೆ ಶೇಕ್‌ ಹ್ಯಾಂಡ್‌ ಮಾಡಬೇಕು, ಇನ್ನೊಬ್ಬರ ಜತೆ ಮಾತನಾಡುವಾಗ ನಮ್ಮ Eye Contact ಹೇಗಿರಬೇಕು, ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದನ್ನೆಲ್ಲ ಗಂಟೆಗಟ್ಟಲೆ
ವಿವರಿಸಿದೆ.

ಈ ಸಂಗತಿಗಳೆಲ್ಲ ಕೆಲವರಿಗೆ ತುಂಬಾ ಚಿಕ್ಕವೆನಿಸಬಹುದು. ಆದರೆ ಬಹಳಷ್ಟು ಜನರಿಗೆ ಇದರ ಅರಿವೇ ಇರುವುದಿಲ್ಲ. ಯಾವ ಸಂದರ್ಭದಲ್ಲಿ ಯಾವ ರೀತಿ ಮಾತನಾಡಬೇಕು, ಫೋನ್‌ನಲ್ಲಿ ಹೇಗೆ ವ್ಯವಹರಿಸಬೇಕು, ಒಬ್ಬರಿಗೆ ಸಂದೇಶ ಕಳುಹಿಸುವಾಗ ಹೇಗೆ ಮಾತನಾಡಬೇಕು, ಯಾವ ರೀತಿ ಡ್ರೆಸ್‌ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದೆಯೇ, ಮೈ ದುರ್ಗಂಧ ಬೀರುತ್ತಿದೆಯೇ, ಮುಖ ಕೊಳೆಯಾಗಿದೆಯೇ, ಬಟ್ಟೆ ಹೊಲಸಾಗಿವೆಯೇ? ಇವೆಲ್ಲ ಸಂಗತಿಗಳು ಚಿಕ್ಕವೆನಿಸಿದರೂ ಇವುಗಳ ಬಗ್ಗೆ ನಮಗೆ ಅರಿವಿರಲೇಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಸೌಜನ್ಯವಿರಬೇಕು, ಭಾಷೆಯ ಮೇಲೆ ಹಿಡಿತವಿರಬೇಕು, ಇತರರನ್ನು ಗೌರವಾದರಗಳಿಂದ ನಡೆಸಿಕೊಳ್ಳುವ ಗುಣ ರೂಢಿಯಾಗಬೇಕು. ಇದನ್ನೆಲ್ಲ ನಾವು ಮಾಡದೇ ಇದ್ದರೆ, ತೀರಾ ಸಾಮಾನ್ಯ ಬದುಕು ಬದುಕುತ್ತಾ, ಸಾಮಾನ್ಯ ಕೆಲಸಗಳನ್ನು ಮಾಡುತ್ತಾ ಇದ್ದುಬಿಡುತ್ತೀವಿ.

ನನ್ನ ಮಾತನ್ನು ತಪ್ಪಾಗಿ ಅರ್ಥಮಾಡಿಕೊಳ್ಳದಿರಿ. ಯಾರಿಗೂ ಅವಮಾನ ಮಾಡುವ ಉದ್ದೇಶ ನನಗಿಲ್ಲ. ಯಾವ ಕೆಲಸವೂ ಸಣ್ಣದಲ್ಲ ಎಂದೂ ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಜೀವನದಲ್ಲಿ ಎತ್ತರಕ್ಕೇರಬೇಕು, ಬದಲಾಗಬೇಕು ಎಂದು ಬಯಸಿದರೆ ಈ ಅಂಶಗಳೆಲ್ಲ ಬಹಳ ಮುಖ್ಯವಾದದ್ದು. ಯಶಸ್ಸಿಗೆ ತಯಾರಿ ಬಹಳ ಮುಖ್ಯ ಎಂದೆನಲ್ಲ, ಈ ಚಿಕ್ಕಪುಟ್ಟ ಅಂಶಗಳೂ ಆ ತಯಾರಿಯ ಪ್ರಮುಖ ಭಾಗಗಳೆಂದು ಮರೆಯದಿರಿ.

ಎಲ್ಲರಿಗೂ ಕೆಲಸ ಸಿಕ್ಕಿತು
ಕೊಲ್ಹಾಪುರದ ಕಥೆಗೆ ಹಿಂದಿರುಗುವುದಾದರೆ… ಮೂರು ದಿನಗಳು ಪ್ರಾಕ್ಟೀಸ್‌ ಮಾಡಿದ ನಂತರ, ನನ್ನ ಗೆಳೆಯರಿಗೆ ಒಂದು ರೀತಿಯ ಕಾನ್ಫಿಡೆನ್ಸ್‌ ಬಂದಿತ್ತು. ಅದಾದ ಕೆಲ ದಿನಗಳಲ್ಲೇ ನಮ್ಮ ಕಾಲೇಜಿಗೆ ಟಾಟಾ ಸ್ಟೀಲ್‌ ಕಂಪನಿ ಸಂದರ್ಶನಕ್ಕೆ ಬರುವುದಿತ್ತು. ಆಗ ನಾನು ಟಾಟಾ ಸ್ಟೀಲ್‌ನ ಅಧಿಕಾರ ವರ್ಗಕ್ಕೆ ಫೋನ್‌ ಮಾಡಿದೆ. ಫೋನ್‌ ಎತ್ತಿಕೊಂಡ ಅಧಿಕಾರಿಗೆ ಹೇಳಿದೆ, “ಸರ್‌, ನಿಮ್ಮ ಕಂಪನಿಯವರು ಕೊಲ್ಹಾಪುರಕ್ಕೆ ಸಂದರ್ಶನಕ್ಕೆ ಬರುತ್ತಿದ್ದಾರೆ. ಆದರೆ ಇಲ್ಲಿ ನನ್ನ ಕೆಲವು ಗೆಳೆಯರಿಗೆ ಅಷ್ಟಾಗಿ ಇಂಗ್ಲಿಷ್‌ ಬರುವುದಿಲ್ಲ. ಹೀಗಾಗಿ, ಅವರಿಗೆ ತಮ್ಮ ಸಾಮರ್ಥ್ಯವನ್ನು ವಿವರಿಸಲು ತೊಂದರೆಯಾಗಬಹುದು. ನಿಮ್ಮದು ಇಷ್ಟು ದೊಡ್ಡ ಕಂಪನಿಯಿದೆ, ಒಂದಿಬ್ಬರು ಮರಾಠಿ ತಿಳಿದ ಅಧಿಕಾರಿಗಳನ್ನು ಸಂದರ್ಶನಕ್ಕೆ ಕಳುಹಿಸಲು ಏನು ಕಷ್ಟ? ನಿಮಗೆ ಉತ್ತಮ ಇಂಗ್ಲಿಷ್‌ ಬಲ್ಲವರು ಬೇಕೋ ಅಥವಾ ಉತ್ತಮ ಇಂಜಿನಿಯರ್‌ಗಳು ಬೇಕೋ?’ ಎಂದು ಪ್ರಶ್ನಿಸಿದೆ. ಸುದೈವವಶಾತ್‌, ಆ ಅಧಿಕಾರಿ ನನ್ನ ಸಲಹೆಯನ್ನು ಕೂಡಲೇ ಒಪ್ಪಿಕೊಂಡರು. ಮರಾಠಿ ಭಾಷಿಕ ಸಂದರ್ಶಕರನ್ನೇ ಕಾಲೇಜಿಗೆ ಕಳುಹಿಸಿಕೊಟ್ಟರು! ಕೊಲ್ಹಾಪುರದ ಇಂಜಿನಿಯರಿಂಗ್‌ ಕಾಲೇಜುಗಳ ಇತಿಹಾಸದಲ್ಲಿಯೇ ಮೊದಲ ಬಾರಿ ಟಾಟಾಸ್ಟೀಲ್‌ ಮತ್ತು ಕಿರ್ಲೋಸ್ಕರ್‌ ಕಂಪನಿಗಳಿಗೆ 5 ವಿದ್ಯಾರ್ಥಿಗಳ ಕ್ಯಾಂಪಸ್‌ ಸೆಲೆಕ್ಷನ್‌ ಆಯಿತು. ಹೀಗೆ ಸೆಲೆಕ್ಟ್ ಆದವರಲ್ಲಿ 3 ಜನ ನನ್ನೊಂದಿಗೆ ಪ್ರಾಕ್ಟೀಸ್‌ ಮಾಡಿದ ಗೆಳೆಯರು ಎನ್ನುವುದು ಹೆಮ್ಮೆಯ ವಿಷಯ! ನಾನು ನನ್ನ ಬೆನ್ನು ನಾನೇ ತಟ್ಟಿಕೊಳ್ಳಲು ಇದನ್ನೆಲ್ಲ ಹೇಳುತ್ತಿಲ್ಲ. ಬದಲಾಗಿ, ಹೇಗೆ ಕೇವಲ 3 ದಿನಗಳ ಮಾರ್ಗದರ್ಶನ-ಪ್ರೋತ್ಸಾಹ ಒಬ್ಬರ ಬದುಕನ್ನೇ ಬದಲಿಸಬಲ್ಲದು ಎನ್ನುವುದನ್ನು ತಿಳಿಸಲು ಈ ಘಟನೆಯನ್ನು ನೆನಪು ಮಾಡಿಕೊಂಡೆನಷ್ಟೇ.

ನಾನು ಎಲ್ಲರಿಗೂ ಹೇಳುವುದು ಇಷ್ಟೇ- ಟ್ಯಾಲೆಂಟ್‌ ಇದ್ದರೆ ಉಪಯೋಗವಿಲ್ಲ. ನಿಮ್ಮಲ್ಲಿ ಟ್ಯಾಲೆಂಟ್‌ ಇದೆ ಎನ್ನುವುದನ್ನು ಇತರರಿಗೆ ತಿಳಿಸುವ ಮಾರ್ಗಗಳು ನಿಮಗೆ ತಿಳಿದಿರಬೇಕು. ಸಮಯಪಾಲನೆ, ಸೌಜನ್ಯ, ಶಿಸ್ತು, ಸಂವಹನ…ಇಂಥ ಅಂಶಗಳೇ ಯಶಸ್ಸಿನ ಬೆನ್ನೆಲುಬು. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ.

ಮದುವೆಯಾಗಿದ್ದನ್ನು ಹೇಗೆ ಮುಚ್ಚಿಡಲಿ?
2000ನೇ ಇಸವಿಯಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಿನೆಮಾ “ಅಲೈ ಪಾಯಿದೇ’ ಆಗಷ್ಟೇ ಬಿಡುಗಡೆಯಾಗಿತ್ತು. ನಾನು ನಾಯಕ ನಟನಾಗಿ ನಟಿಸಿದ್ದ ಈ ರೊಮ್ಯಾಂಟಿಕ್‌ ಸಿನೆಮಾ ಸೂಪರ್‌ ಹಿಟ್‌ ಆಯಿತು. ನಾಲ್ಕು ತಿಂಗಳಾದರೂ ಅದು ಎಲ್ಲಾ ಸೆಂಟರ್‌ಗಳಲ್ಲೂ ಸದ್ದು ಮಾಡುತ್ತಲೇ ಇತ್ತು. ಈ ಸಿನೆಮಾದ ಯಶಸ್ಸಿನಿಂದ ಖುಷಿಯಾದ ಪ್ರೊಡ್ನೂಸರ್‌ಗಳು ಸಕ್ಸಸ್‌ ಪಾರ್ಟಿ ಆಯೋಜಿಸಿದ್ದರು. ಆದರೆ ಪಾರ್ಟಿಗೆ ಹೋಗುವ ಮುನ್ನ ಸಿನೆಮಾದ ಪಿಆರ್‌ಗಳು ನನ್ನ ಬಳಿ ಬಂದು, “ಮಾಧವನ್‌ ಒಂದು ಸಲಹೆ. ಯಾವುದೇ ಕಾರಣಕ್ಕೂ ನಿಮಗೆ ಮದುವೆ ಆಗಿದೆ ಎಂದು ಪತ್ರಕರ್ತರಿಗೆ ಹೇಳಬೇಡಿ. ನೀವೀಗ ರೊಮ್ಯಾಂಟಿಕ್‌ ಹೀರೋ ಎಂದು ಫೇಮಸ್‌ ಆಗಿದ್ದೀರಿ. ನಿಮಗೆ ಮದುವೆ ಆಗಿದೆ ಎಂಬ ಸುದ್ದಿಯೇನಾದರೂ ಹೊರಬಿದ್ದರೆ ನಿಮಗೆ ಮಹಿಳಾ ಫ್ಯಾನ್‌ಗಳು ಕಡಿಮೆಯಾಗಿಬಿಡುತ್ತಾರೆ’ ಎಂದರು. ಆದರೆ ಇದಕ್ಕೆ ನನ್ನ ಮನಸ್ಸಾ ಕ್ಷಿ ಒಪ್ಪಲೇ ಇಲ್ಲ. ಪತ್ರಿಕಾಗೋಷ್ಠಿ ಆರಂಭವಾಯಿತು. ನಿರೀಕ್ಷೆಯಂತೆಯೇ ಪತ್ರಕರ್ತರು ನನಗೆ ಕೇಳಿದ ಮೊದಲ ಪ್ರಶ್ನೆಯೇ, “ನೀವು 4 ತಿಂಗಳ ಹಿಂದೆ ಮದುವೆಯಾಗಿದ್ದೀರಿ ಎಂಬ ಸುದ್ದಿ ಇದೆ ನಿಜವೇ?’ ಎಂಬುದು.

ನಾನಂದೆ, “”ಹೌದು, ನಿಜ. ನಾನು ನನ್ನ ಬಹುಕಾಲದ ಗೆಳತಿಯನ್ನು ಮದುವೆಯಾಗಿದ್ದೇನೆ. ಅವಳೇ ನನ್ನ ಈ ಬೆಳವಣಿಗೆಗೆ ಮುಖ್ಯ ಕಾರಣ. ಈ ವಿಷಯವನ್ನು ನಿಮ್ಮ ಮುಂದೆ ಹೇಳಬೇಡಿ ಎಂದು ಪಿಆರ್‌ಗಳು ಎಚ್ಚರಿಸಿದ್ದಾರೆ. ಏಕೆಂದರೆ ಇದರಿಂದ ನನ್ನ ಮಹಿಳಾ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗುತ್ತದಂತೆ. ಆದರೆ ನನಗೆ ಮದುವೆ ಆಗಿಲ್ಲ ಎಂದು ಹೇಳಿದರೆ ನನ್ನ ಹೆಂಡತಿಗೆ ಅವಮಾನ ಮಾಡಿದಂತಾಗುವುದಿಲ್ಲವೇ?’ ಎಂದುಬಿಟ್ಟೆ! ಪಕ್ಕದಲ್ಲೇ ಇದ್ದ ಮಣಿರತ್ನಂ ಮುಗುಳು ನಕ್ಕರು.

ಈ ಪ್ರಾಮಾಣಿಕತೆಯೇ ನನ್ನ ಕೈ ಹಿಡಿಯಿತು. ನಾನು ಹೀಗೆ ಹೇಳಿದ ಮಾತು ಜೋರು ಸದ್ದುಮಾಡಿತು. ಕೆಲ ದಿನಗಳ ನಂತರ ನನ್ನ ಬಳಿ ಬಂದ ಅದೇ ಪಿಆರ್‌ಗಳು ನನ್ನ ಮಹಿಳಾ ಅಭಿಮಾನಿಗಳ ಸಂಖ್ಯೆ ಮೊದಲಿಗಿಂತ ಜಾಸ್ತಿ ಆಗಿಬಿಟ್ಟಿದೆ ಎಂದರು!

ಆರ್‌. ಮಾಧವನ್‌, ಖ್ಯಾತ ಚಿತ್ರನಟ

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.