ಮಂಗಳೂರು ಗಲಭೆಗೆ ವಿಪಕ್ಷಗಳೇ ಕಾರಣ
Team Udayavani, Dec 25, 2019, 3:00 AM IST
ಮೈಸೂರು: ಪೌರತ್ವ ವಿವಾದದಡಿಯಲ್ಲಿ ಜನರನ್ನು ಎತ್ತಿ ಕಟ್ಟುವ ಕೆಲಸದಲ್ಲಿ ವಿಪಕ್ಷಗಳು ಮಗ್ನವಾಗಿವೆ. ಮಂಗಳೂರಿನಲ್ಲಿ ನಡೆದ ಗಲಭೆಗೆ ವಿಪಕ್ಷಗಳೇ ಕಾರಣ ಎಂದು ಸಚಿವ ವಿ.ಸೋಮಣ್ಣ ಆರೋಪಿಸಿದರು. ಹುಣಸೂರು ಉಪಚುನಾವಣೆ ಬಳಿಕ ಎಚ್.ವಿಶ್ವನಾಥ್ ಅವರನ್ನು ಕೃಷ್ಣಮೂರ್ತಿಪುರಂ ನಿವಾಸದಲ್ಲಿ ಭೇಟಿ ಮಾಡಿದ ಸೋಮಣ್ಣ ಅವರು ವಿಶ್ವನಾಥ್ ಅವರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂಗೆ ಮಾತನಾಡಿ, ಮಂಗಳೂರು ಗಲಾಟೆ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಅದಕ್ಕೆ ಈಗ ಸಿಸಿಟಿವಿ ದೃಶ್ಯಗಳು ಸಾಕ್ಷಿ ಒದಗಿಸಿವೆ. ಇದು ಸಂಚಿನಿಂದ ನಡೆದ ಗಲಾಟೆ. ಬೇಕಂತಲೆ ಆಟೋಗಳಲ್ಲಿ ಕಲ್ಲು ತಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಆಗ್ರಹಿಸಿದರು.
ವಿಶ್ವನಾಥ್ ಸೋಲು ನೋವಿನ ಸಂಗತಿ: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಸೋಲು ಕಂಡಿರುವುದು ನನಗೆ ಅತೀವ ನೋವು ತಂದಿದೆ. ಅವರ ಸೋಲು ಒಂದು ದೊಡ್ಡ ಸವಾಲಾಗಿದೆ. ನಮಗೆ ಬಹಳ ಬೇಸರವಾದ ಸಂದರ್ಭದಲ್ಲಿ ಅವರನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡುತ್ತಿದ್ದೆ. ಅವರಿಗೆ ಸರಸ್ವತಿ ಬಹಳ ಚೆನ್ನಾಗಿ ಇದೆ. ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖವಿದ್ದಂತೆ.
ವಿಶ್ವನಾಥ್ ಅವರ ಆರೋಗ್ಯ ಮತ್ತಷ್ಟು ಸುಧಾರಣೆ ಆಗಲಿ ಎಂದು ಹಾರೈಸಿದ ಅವರು, ವಿಶ್ವನಾಥ್ ಅವರಿಗೆ ಸಚಿವ ಸ್ಥಾನಮಾನ ನೀಡುವ ವಿಚಾರ ಕುರಿತು ನಮ್ಮ ಪಕ್ಷದ ಹಿರಿಯರು, ಯಡಿಯೂರಪ್ಪ ತೀರ್ಮಾನ ಕೈಗೊಳ್ಳುತ್ತಾರೆ. ಹೈಕಮಾಂಡ್ ಸಹ ಈ ಬಗ್ಗೆ ನಿರ್ಧಾರ ಮಾಡುತ್ತದೆ. ಸದ್ಯ ಯಾವ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಂಬಿದವರನ್ನು ಯಡಿಯೂರಪ್ಪ ಅವರು ಕೈಬಿಡುವುದಿಲ್ಲ ಎಂದು ಹೇಳಿದರು.