ಎಲ್ಲಾ ಭಾರತೀಯರು ಹಿಂದೂಗಳು ಎಂಬ ಹೇಳಿಕೆ ಸರಿಯಲ್ಲ: ಭಾಗ್ವತ್ ಗೆ ಕೇಂದ್ರ ಸಚಿವ ಅಠಾವಳೆ
ಭಾಗವತ್ ಅವರ ಅರ್ಥದಲ್ಲಿ ಪ್ರತಿಯೊಬ್ಬರು ಭಾರತೀಯ ಎಂಬುದಾಗಿದ್ದರೆ ಒಳ್ಳೆಯದು
Team Udayavani, Dec 27, 2019, 2:01 PM IST
ಮುಂಬೈ: ದೇಶದ 130 ಕೋಟಿ ಜನರನ್ನು ಧಾರ್ಮಿಕ, ಸಾಂಸ್ಕೃತಿಕವಾಗಿ ಪರಿಗಣಿಸದೇ ಹಿಂದೂಗಳು ಎಂದು ಪರಿಗಣಿಸುತ್ತೇವೆ ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಭಗ್ವತ್ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ಮೈತ್ರಿ ಪಕ್ಷದ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಾ ಭಾರತೀಯರು ಹಿಂದುಗಳು ಎಂಬುದು ಸರಿಯಾದ ಕ್ರಮವಲ್ಲ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಎಲ್ಲರೂ ಬೌದ್ಧರಾಗಿದ್ದರು. ಒಂದು ವೇಳೆ ಮೋಹನ್ ಭಾಗವತ್ ಅವರ ಅರ್ಥದಲ್ಲಿ ಪ್ರತಿಯೊಬ್ಬರು ಭಾರತೀಯ ಎಂಬುದಾಗಿದ್ದರೆ ಅದು ಒಳ್ಳೆಯದು. ನಮ್ಮ ದೇಶದಲ್ಲಿ ಬೌದ್ಧರು, ಸಿಖ್, ಹಿಂದೂ, ಕ್ರಿಶ್ಚಿಯನ್, ಪಾರ್ಸಿ, ಜೈನ, ಲಿಂಗಾಯತ ಧರ್ಮದ ನಂಬಿಕೆ ಮತ್ತು ವಿವಿಧ ಸಮುದಾಯಗಳು ವಾಸಿಸುತ್ತಿವೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ರಾಮದಾಸ್ ಅಠಾವಳೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಆರ್ ಎಸ್ ಎಸ್ ಸಭೆಯಲ್ಲಿ, ಭಾರತ ಮಾತೆಯ ಮಕ್ಕಳು, ಅವರು ಯಾವ ಭಾಷೆಯನ್ನೇ ಮಾತನಾಡಲಿ, ಯಾವುದೇ ಪ್ರದೇಶದವರೇ ಆಗಿರಲಿ, ಯಾವುದೇ ಧರ್ಮ, ನಂಬಿಕೆಯನ್ನು ಅನುಸರಿಸಲಿ..ಆದರೆ ಸಂಘ ಎಲ್ಲಾ 130 ಕೋಟಿ ಜನರನ್ನು ಹಿಂದೂ ರಾಷ್ಟ್ರದ ಜನರು ಎಂದು ಪರಿಗಣಿಸುತ್ತದೆ ಎಂದು ತಿಳಿಸಿದ್ದರು.