ಕರ್ನಾಟಕಕ್ಕೆ ಮುನ್ನಡೆ:ಮುಂಬಯಿ ಮತ್ತೆ ಕುಸಿತ
Team Udayavani, Jan 4, 2020, 11:54 PM IST
ಮುಂಬಯಿ: ಓಪನರ್ ಆರ್. ಸಮರ್ಥ್ (86) ಮತ್ತು ಕೀಪರ್ ಬಿ.ಆರ್. ಶರತ್ (46) ಅವರ ಸಾಹಸಮಯ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬಯಿ ಎದುರಿನ ರಣಜಿ ಪಂದ್ಯದಲ್ಲಿ ಕರ್ನಾಟಕ 24 ರನ್ನುಗಳ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಮುಂಬಯಿ ದ್ವಿತೀಯ ಸರದಿಯಲ್ಲೂ ಕುಸಿತಕ್ಕೆ ಸಿಲುಕಿದೆ.
3 ವಿಕೆಟಿಗೆ 73 ರನ್ ಗಳಿಸಿದ ಹಂತದಿಂದ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ 218 ರನ್ ಗಳಿಸಿ ಆಲೌಟ್ ಆಯಿತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಮುಂಬಯಿ ಮೇಲೆ ಮತ್ತೆ ಕರ್ನಾಟಕದ ಬೌಲರ್ಗಳು ಘಾತಕವಾಗಿ ಎರಗಿದ್ದು, 109ಕ್ಕೆ 5 ವಿಕೆಟ್ ಉರುಳಿಸಿದ್ದಾರೆ. ಆತಿಥೇಯರ ಸದ್ಯದ ಮುನ್ನಡೆ 85 ರನ್. ಆರಂಭಕಾರ ಪೃಥ್ವಿ ಶಾ ಗಾಯಾಳಾದ್ದರಿಂದ ಬ್ಯಾಟಿಂಗಿಗೆ ಇಳಿಯುವುದಿಲ್ಲ.
26ಕ್ಕೆ 4 ವಿಕೆಟ್ ಪತನ
ಮುಂಬಯಿ 26 ರನ್ನಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಸಫìರಾಜ್ ಖಾನ್ (ಅಜೇಯ 53) ಮತ್ತು ಶಮ್ಸ್ ಮುಲಾನಿ (31) ಉತ್ತಮ ಜತೆಯಾಟ ದಾಖಲಿಸಿದರು. ಮುಲಾನಿ ಔಟಾದೊಡನೆ ದಿನದಾಟ ಕೊನೆಗೊಳಿಸಲಾಯಿತು. ಅಭಿಮನ್ಯು ಮಿಥುನ್ (52ಕ್ಕೆ 3), ವಿ. ಕೌಶಿಕ್ (11ಕ್ಕೆ 2) ಮಿಂಚಿನ ಬೌಲಿಂಗ್ ಸಂಘಟಿಸಿದರು.
ಇದು ಬ್ಯಾಟಿಂಗಿಗೆ ಕಠಿನವಾದ ಟ್ರ್ಯಾಕ್ ಆಗಿದ್ದು, ಚೇಸಿಂಗ್ ವೇಳೆ ಕರ್ನಾಟಕಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಮುಂಬಯಿಯ ಉಳಿದ ವಿಕೆಟ್ಗಳನ್ನು ಬೇಗನೇ ಹಾರಿಸಿ, ಮುನ್ನಡೆಯನ್ನು 150ರೊಳಗೆ ಸೀಮಿತಗೊಳಿಸಿದರೆ ಕರ್ನಾಟಕಕ್ಕೆ ಗೆಲುವು ಒಲಿಯಬಹುದು.
ಮುಂಬಯಿ ಈಗಾಗಲೇ ಆದಿತ್ಯ ತಾರೆ (6), ಅಜಿಂಕ್ಯ ರಹಾನೆ (1), ಸಿದ್ಧೇಶ್ ಲಾಡ್ (4) ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (10) ವಿಕೆಟ್ಗಳನ್ನು ಕಳೆದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್: ಮುಂಬಯಿ-194 ಮತ್ತು 5 ವಿಕೆಟಿಗೆ 109. ಕರ್ನಾಟಕ-218 (ಸಮರ್ಥ್ 86, ಶರತ್ 46, ಪಡಿಕ್ಕಲ್ 32, ಗೋಪಾಲ್ 31, ಅಟ್ಟರ್ಡೆ 58ಕ್ಕೆ 5, ಮುಲಾನಿ 55ಕ್ಕೆ 3).